ಸಂಸದ ಪಪ್ಪು ಯಾದವ್ ಅವರ ನವದೆಹಲಿಯ ನಿವಾಸದಲ್ಲಿ ಭಾನುವಾರ ನಡೆದ ಸುದ್ದಿಗೋಷ್ಠಿಯ ವೇಳೆ ಇಬ್ಬರು ವ್ಯಕ್ತಿಗಳು ನುಗ್ಗಿ ಗಲಾಟೆ ನಡೆಸಿ, ಅವರಲ್ಲೊಬ್ಬ ಪಪ್ಪು ಯಾದವ್ ಅವರತ್ತ ಚಪ್ಪಲಿ ಎಸೆದಿದ್ದು, ಮತ್ತೊಬ್ಬನ ಬಳಿ ಚಾಕು ಇತ್ತು ಎಂಬ ಆರೋಪದ ಮೇಲೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್ಶಹರ್ ಮೂಲದ ಸುಮಿತ್ ಎಂಬಾತನ ಬಂಧನವಾಗಿದ್ದು, ಮತ್ತೊಬ್ಬ ಆರೋಪಿ ಹ್ಯಾಪಿ ಶರ್ಮಾ ಪಾತ್ರದ ಬಗ್ಗೆ ತನಿಖೆ ಮುಂದುವರಿದಿದೆ ಎಂದು ವರದಿಯಾಗಿದೆ.
ಜುಲೈ 31ರಂದು ಸಂಸತ್ ಆವರಣದಲ್ಲಿ ಅಯೋಧ್ಯೆ ರಾಮಮಂದಿರದ ಕಾಣಿಕೆ ಹಣ ದುರ್ಬಳಕೆ ಆರೋಪದ ಕುರಿತು ಪ್ರತಿಪಕ್ಷಗಳು ಪ್ರದರ್ಶಿಸಿದ್ದ ಪ್ರತಿಭಟನಾ ನಾಟಕದ ಬಗ್ಗೆ ಸ್ಪಷ್ಟನೆ ನೀಡಲು ಪಪ್ಪು ಯಾದವ್ ಸುದ್ದಿಗೋಷ್ಠಿ ನಡೆಸುತ್ತಿದ್ದರು. ರಾಮಮಂದಿರ ಕಾಣಿಕೆ ಪ್ರಕರಣವನ್ನು ಉಲ್ಲೇಖಿಸಿದ ಪಪ್ಪು ಯಾದವ್, “ನಾನು ಕಾಣೆಯಾಗಿರುವ ಚಿನ್ನ ಮತ್ತು ಬೆಳ್ಳಿಯ ಬಗ್ಗೆ ಪ್ರಶ್ನೆ ಕೇಳಿದ್ದೇನೆ. ಅದರಲ್ಲಿ ಯಾವುದೇ ತಪ್ಪಿಲ್ಲ. ನಾನು ಸನಾತನ ವಿರೋಧಿಯಲ್ಲ. ಸಾಮಾನ್ಯ ಜನರ ನಂಬಿಕೆಗೆ ಧಕ್ಕೆಯಾಗಿರುವ ಕುರಿತು ಪ್ರಧಾನಮಂತ್ರಿಯವರಿಂದ ಉತ್ತರ ಕೇಳುತ್ತಿದ್ದೇವೆ” ಎಂದು ಹೇಳಿದ್ದರು.
ಸಂಜೆ ಸುಮಾರು 6.15ರ ವೇಳೆಗೆ ಪತ್ರಕರ್ತರ ನಡುವೆ ನಿಂತಿದ್ದ ಆರೋಪಿ ಸುಮಿತ್ ಏಕಾಏಕಿ ಪಪ್ಪು ಯಾದವ್ ಅವರತ್ತ ಚಪ್ಪಲಿ ಎಸೆದನು. ಇದರಿಂದ ಗೊಂದಲ ಉಂಟಾಗಿ, ಪಪ್ಪು ಯಾದವ್ ಅವರ ಬೆಂಬಲಿಗರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಆರೋಪಿಗಳ ಬಳಿ ಚಾಕು ಪತ್ತೆಯಾಗಿದೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಯುತ್ತಿದೆ.

ಘಟನೆಯ ಬಳಿಕ ಮಾತನಾಡಿದ ಪಪ್ಪು ಯಾದವ್, “ನನ್ನನ್ನು ಕೊಲ್ಲಲು ನಿರಂತರ ಸಂಚು ನಡೆಯುತ್ತಿದೆ. ಹಲವರು ನನ್ನನ್ನು ಜೀವಂತವಾಗಿ ಸುಟ್ಟುಹಾಕುತ್ತೇವೆ ಅಥವಾ ಹತ್ಯೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇಂದು ಇಷ್ಟು ಜನ ಇರದಿದ್ದರೆ ನಾನು ಬದುಕಿರುತ್ತಿರಲಿಲ್ಲ” ಎಂದು ಆರೋಪಿಸಿದರು. ರಾಮಮಂದಿರ ಪ್ರತಿಭಟನಾ ನಾಟಕದ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ಗೆ ಹೆದರುವುದಿಲ್ಲ ಎಂದೂ ಅವರು ಹೇಳಿದರು.
ಪಪ್ಪು ಯಾದವ್ ಅವರ ಪರ ವಕೀಲ ಕನಿಷ್ಕ್ ಅರೋರಾ, ದಾಳಿಯ ಸಾಧ್ಯತೆ ಬಗ್ಗೆ ಮುಂಚಿತವಾಗಿಯೇ ಮಾಹಿತಿ ನೀಡಿದ್ದರೂ ಸಮರ್ಪಕ ಭದ್ರತೆ ಒದಗಿಸಿಲ್ಲ ಎಂದು ದೆಹಲಿ ಪೊಲೀಸರ ವಿರುದ್ಧ ಆರೋಪಿಸಿದರು.
ಇದನ್ನೂ ಓದಿ: ರಾಜ್ಯ ಸಂಪುಟ ವಿಸ್ತರಣೆ ಫೈನಲ್; ಇಂದು 20 ಮಂದಿ ಸಚಿವರ ಪ್ರಮಾಣ ವಚನ, ಇಲ್ಲಿದೆ ಪಟ್ಟಿ
ಕಾಂಗ್ರೆಸ್ ನಾಯಕ ಪವನ್ ಖೇರಾ, ಸಿಪಿಐ(ಎಂ) ಸಂಸದ ವಿ. ಶಿವದಾಸನ್ ಸೇರಿದಂತೆ ಹಲವು ಪ್ರತಿಪಕ್ಷ ನಾಯಕರು ಈ ಘಟನೆಯನ್ನು ಖಂಡಿಸಿ, ಸಂಸದರ ಭದ್ರತೆ ಒದಗಿಸುವಲ್ಲಿ ದೆಹಲಿ ಪೊಲೀಸರು ವಿಫಲರಾಗಿದ್ದಾರೆ ಎಂದು ಟೀಕಿಸಿದರು. ಇತ್ತ ಶಿವಸೇನೆ ನಾಯಕಿ ಶೈನಾ ಎನ್ಸಿ ದಾಳಿಯನ್ನು ಖಂಡಿಸಿದರೂ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡದಂತೆ ಪಪ್ಪು ಯಾದವ್ ಅವರಿಗೆ ಸಲಹೆ ನೀಡಿದ್ದಾರೆ.
ಆರೋಪಿ ಸುಮಿತ್ನ ಸ್ನೇಹಿತ ಹ್ಯಾಪಿ ಶರ್ಮಾ, ಪಪ್ಪು ಯಾದವ್ ಸಾಧು-ಸಂತರು ಹಾಗೂ ಭಗವಾನ್ ರಾಮನ ಬಗ್ಗೆ ಅವಹೇಳನ ಮಾಡಿದ್ದಾರೆ ಎಂದು ಭಾವಿಸಿ ಅವರನ್ನು ಪ್ರಶ್ನಿಸಲು ಬಂದಿದ್ದೇವೆ. ನಮ್ಮ ಮೇಲೆ ಮೊದಲು ಹಲ್ಲೆ ನಡೆದ ನಂತರವೇ ಚಪ್ಪಲಿ ಎಸೆಯಲಾಯಿತು ಎಂದು ಹೇಳಿದ್ದಾನೆ. ಆದರೆ ಈ ಕುರಿತು ದೆಹಲಿ ಪೊಲೀಸರು ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.




