ಗ್ರಾಮ ಪಂಚಾಯಿತಿ ನೌಕರರ ಸಮಸ್ಯೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಸಂಘಟಿತ ಹೋರಾಟಕ್ಕೆ ಆದ್ಯತೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ಮುದ್ದೇಬಿಹಾಳ ತಾಲೂಕು ಘಟಕದ ನೂತನ ಅಧ್ಯಕ್ಷ ಎ.ಪಿ. ಕೊಲಕಾರ (ಮಡಿಕೇಶ್ವರ) ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ವತಿಯಿಂದ ನಡೆದ ಸದಸ್ಯರ ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
“ಗ್ರಾಮ ಪಂಚಾಯಿತಿ ನೌಕರರು ಸೇವೆಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಅವುಗಳ ಪರಿಹಾರಕ್ಕಾಗಿ ಸರ್ಕಾರದ ಮಟ್ಟದಲ್ಲಿ ನಿರಂತರ ಒತ್ತಡ ತರುವ ಕೆಲಸವನ್ನು ಸಂಘ ಕೈಗೊಳ್ಳಲಿದೆ. ನೌಕರರ ಹಕ್ಕುಗಳ ರಕ್ಷಣೆಗೆ ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಿದರೆ ಮಾತ್ರ ಬೇಡಿಕೆಗಳು ಈಡೇರುತ್ತವೆ. ಆದ್ದರಿಂದ ಸಂಘದ ಪ್ರತಿಯೊಂದು ಚಟುವಟಿಕೆಯಲ್ಲಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು” ಎಂದು ಕರೆ ನೀಡಿದರು.
ಸಭೆಯಲ್ಲಿ ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಅಯ್ಯಣ್ಣ ಬಾಗೇವಾಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಾಲ್ ಅಹ್ಮದ್ ಹಾಗೂ ಜಿಲ್ಲಾ ಉಪಾಧ್ಯಕ್ಷ ಡಾ. ಎಂ.ಕೆ. ಗುಡಿಮನಿ ಅವರ ನೇತೃತ್ವದಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು.
ಸಂಘದ ಗೌರವಾಧ್ಯಕ್ಷರಾಗಿ ಅಬ್ದುಲ್ ರಜಾಕ್ ತಮದಡ್ಡಿ, ಅಧ್ಯಕ್ಷರಾಗಿ ಎ.ಪಿ. ಕೊಲಕಾರ (ಮಡಿಕೇಶ್ವರ), ಉಪಾಧ್ಯಕ್ಷರಾಗಿ ಬಂದಗಿಸಾಬ ವಾಲಿಕಾರ, ಸಂಗಮ್ಮ ಹೊನ್ನಳ್ಳಿ ಹಾಗೂ ಮಂಜುನಾಥ ಭಜಂತ್ರಿ, ಪ್ರಧಾನ ಕಾರ್ಯದರ್ಶಿಯಾಗಿ ಹುಸೇನಪ್ಪ ಮುಂದಿನಮನಿ, ಸಹಕಾರ್ಯದರ್ಶಿಗಳಾಗಿ ಬಸನಗೌಡ ಪಾಟೀಲ, ಬಸವರಾಜ ಲಮಾಣಿ, ಗುರುನಾಥ ರೂಡಗಿ, ವಿರೂಪಾಕ್ಷ ಗುರಿಕಾರ, ಗಣೇಶ ಸರೂರ, ನಾಗಪ್ಪ ಹರಿಜನ, ಮಂಜುನಾಥ ಮ್ಯಾಗೇರಿ ಮತ್ತು ವಿನೋದ ರಾಠೋಡ ಅವಿರೋಧವಾಗಿ ಆಯ್ಕೆಯಾದರು. ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಆನಂದ ಬಿರಾದಾರ, ಆನಂದ ತಳವಾರ, ಮಾಲಪ್ಪ ಎಸ್.ಎಂ. ದ್ಯಾಮಗೊಂಡ, ಬಾಳಪ್ಪ ವಾಲಿಕಾರ, ಡಿಟಿ ಸಂಘದ ಅಧ್ಯಕ್ಷ ವೆಂಕಟೇಶ ಭಜಂತ್ರಿ, ಜಿಲ್ಲಾ ಉಪಾಧ್ಯಕ್ಷ ಡಾ. ಎಂ.ಕೆ. ಗುಡಿಮನಿ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ನೌಕರರು ಇದ್ದರು.




