ಜಗತ್ತಿನಾದ್ಯಂತ ಭಾರಿ ಇಂಧನ ಬಿಕ್ಕಟ್ಟು ಮತ್ತು ಮಧ್ಯಪ್ರಾಚ್ಯದಲ್ಲಿ 10,000ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ ಅಮೆರಿಕ – ಇರಾನ್ ನಡುವಿನ ಭೀಕರ ಯುದ್ಧ ಅಂತ್ಯ ಕಂಡಿದೆ. ಉಭಯ ರಾಷ್ಟ್ರಗಳು ಶಾಂತಿ ಒಪ್ಪಂದಕ್ಕೆ ಸ್ವಿಟ್ಜರ್ಲ್ಯಾಂಡ್ನಲ್ಲಿ ಶುಕ್ರವಾರ ಸಹಿ ಹಾಕಲಿವೆ. ಒಪ್ಪಂದದ ಭಾಗವಾಗಿ ಅಮೆರಿಕವು ಇರಾನ್ ಬಂದರುಗಳ ಮೇಲಿನ ನೌಕಾ ನಿರ್ಬಂಧಗಳನ್ನು ಸಡಿಲಿಸಲಿದೆ. ಪ್ರತಿಯಾಗಿ, ಇರಾನ್ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ವಾಣಿಜ್ಯ ಹಡಗುಗಳ ಸಂಚಾರಕ್ಕೆ ಜೂನ್ 19ರಿಂದ ಮುಕ್ತಗೊಳಿಸಲಿದೆ ಎಂದು ಅಮೆರಿಕ ಘೋಷಿಸಿದೆ.
ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ ಜಾಗತಿಕ ರಾಜಕೀಯ ಮತ್ತು ಇಂಧನ ಮಾರುಕಟ್ಟೆಯಲ್ಲಿ ಹೊಸ ಆಶಾವಾದವನ್ನು ಮೂಡಿಸಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಗಳು ಭಾರಿ ಕುಸಿತ ಕಂಡಿದ್ದು, ಬ್ರೆಂಟ್ ಕಚ್ಚಾ ತೈಲ ಮತ್ತು ಡಬ್ಲ್ಯುಟಿಐ ತೈಲದ ಬೆಲೆಗಳು ಮೂರು ತಿಂಗಳಲ್ಲಿ ಕನಿಷ್ಠ ಮಟ್ಟಕ್ಕೆ ಇಳಿದಿವೆ. ಬ್ರೆಂಟ್ ತೈಲವು ಪ್ರತಿ ಬ್ಯಾರಲ್ಗೆ 82.97 ಡಾಲರ್ಗಳಿಗೆ ಇಳಿದಿದ್ದರೆ, ಡಬ್ಲ್ಯೂಟಿಐ ತೈಲವು 80.69 ಡಾಲರ್ಗೆ ಕುಸಿತ ಕಂಡಿದೆ.
ಇದು ಭಾರತದ ಪಾಲಿಗೆ ಅತ್ಯಂತ ದೊಡ್ಡ ಆರ್ಥಿಕ ಆಶಾವಾದವನ್ನು ಹುಟ್ಟುಹಾಕಿದೆ. ತೈಲ ಬೆಲೆಗಳ ಕುಸಿತದಿಂದಾಗಿ ಭಾರತದ ಇಂಧನ ಆಮದು ವೆಚ್ಚವು ಭಾರಿ ಪ್ರಮಾಣದಲ್ಲಿ ತಗ್ಗಲಿದ್ದು, ದೇಶದ ಚಾಲ್ತಿ ಖಾತೆ ಕೊರತೆಯು (CAD) ಸುಮಾರು 10 ರಿಂದ 15 ಶತಕೋಟಿ ಡಾಲರ್ನಷ್ಟು ಕಡಿಮೆಯಾಗುವ ಸಾಧ್ಯತೆಯಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಆದಾಗ್ಯೂ, ಕಚ್ಚಾ ತೈಲ ದರದಲ್ಲಿನ ಭಾರೀ ಕುಸಿತವು ಸಾಮಾನ್ಯ ಭಾರತೀಯರಿಗೆ ಲಾಭ ತಂದುಕೊಡುವುದೇ ಎಂಬ ಪ್ರಶ್ನೆಗೆ ಉತ್ತರವಂತೂ ಇಲ್ಲ! ಮೋದಿ ಸರ್ಕಾರವು ಪೆಟ್ರೋಲ್-ಡೀಸೆಲ್ ಬೆಲೆ ಇಳಿಸುವ ಯಾವುದೇ ಸೂಚನೆಗಳೂ ಕಾಣುತ್ತಿಲ್ಲ!
ಈ ಲೇಖನ ಓದಿದ್ದೀರಾ?: ಬತ್ತಿದ ಜೈವಿಕ ಚೈತನ್ಯ: ‘ಚೈಲ್ಡ್ ಫ್ರೀ’ ಪರಿಕಲ್ಪನೆ ಹೆಚ್ಚಳ, ಫಲವತ್ತತೆ ಕುಸಿತಕ್ಕೆ ಕಾರಣವೇನು?
ಇನ್ನು, ಇರಾನ್ ಮೇಲಿನ ಅಮೆರಿಕದ ಆರ್ಥಿಕ ನಿರ್ಬಂಧಗಳು ತೆರವಾಗುವುದರಿಂದ ಭಾರತ-ಇರಾನ್ ನಡುವಿನ ದ್ವಿಪಕ್ಷೀಯ ವ್ಯಾಪಾರ ಮತ್ತು ತೈಲ ಆಮದು ಸಂಬಂಧಗಳು ಮತ್ತೆ ಚುರುಕುಗೊಳ್ಳಲಿವೆ. ಭಾರತವು ಆರ್ಥಿಕವಾಗಿ ಮತ್ತು ಆಯಕಟ್ಟಿನ ದೃಷ್ಟಿಯಿಂದ ಹೂಡಿಕೆ ಮಾಡಿರುವ ಇರಾನ್ನ ಚಾಬಹಾರ್ ಬಂದರು ಮತ್ತು ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (INSTC) ಅಭಿವೃದ್ಧಿ ಯೋಜನೆಗಳಿಗೂ ಇದು ಹೊಸ ವೇಗವನ್ನು ನೀಡಲಿದ್ದು, ರಷ್ಯಾ ಮತ್ತು ಮಧ್ಯ ಏಷ್ಯಾದ ದೇಶಗಳೊಂದಿಗೆ ಭಾರತದ ಸಂಪರ್ಕ ಸುಲಭವಾಗಲಿದೆ.
ಆದಾಗ್ಯೂ, ಈ ಶಾಂತಿ ಒಪ್ಪಂದವು ಜಾಗತಿಕ ಮಟ್ಟದಲ್ಲಿ ಕೆಲವು ಪ್ರಮುಖ ರಾಜತಾಂತ್ರಿಕ ಸವಾಲುಗಳನ್ನೂ ಸೃಷ್ಟಿಸಿದೆ. ಅಮೆರಿಕದ ಬಾಲಂಗೋಚಿಯಾಗಿರುವ ಇಸ್ರೇಲ್, ಇನ್ನೂ ಲೆಬನಾನ್ ಮತ್ತು ಸಿರಿಯಾ ಮೇಲಿನ ದಾಳಿಯನ್ನು ಮುಂದುವರೆಸಿದೆ. ಇಸ್ರೇಲ್ನ ಈ ಕ್ರೌರ್ಯವು ಮಧ್ಯಪ್ರಾಚ್ಯದ ಶಾಂತಿ ಪ್ರಕ್ರಿಯೆಗೆ ಯಾವುದೇ ಕ್ಷಣದಲ್ಲಾದರೂ ಕುತ್ತು ತರಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.



