ಯಾವುದೇ ಔಪಚಾರಿಕ ರಕ್ಷಣಾ ತರಬೇತಿಯಿಲ್ಲ, ಅತ್ಯಾಧುನಿಕ ಮೋಟಾರ್ ಬೋಟ್ ಕೂಡ ಇಲ್ಲ. ಆದರೂ, 10ನೇ ತರಗತಿಗೆ ಶಾಲೆಯಿಂದ ಹೊರಗುಳಿದಿದ್ದ (ಡ್ರಾಪ್ಔಟ್) 25 ವರ್ಷದ ಯುವಕನೊಬ್ಬ ಅಸ್ಸಾಂನ ಭೀಕರ ಪ್ರವಾಹದಲ್ಲಿ ಸುಮಾರು 2,000 ಜನರ ಜೀವ ಉಳಿಸುವ ಮೂಲಕ ಅಪ್ರತಿಮ ಸಾಹಸ ಮೆರೆದಿದ್ದಾನೆ.
ಜುಲೈ 19ರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶ್ರವಣ್ ಕುಮಾರ್ ಎಂಬ ಈ ಯುವಕ ಬಿಹುಬೋರ್ನ ದಿಕ್ಹೌ ನದಿ ತೀರಕ್ಕೆ ತೆರಳಿದ್ದ. ಪ್ರವಾಹದಲ್ಲಿ ತೇಲಿಬರುವ ಮರದ ದಿಮ್ಮಿಗಳನ್ನು ಸಂಗ್ರಹಿಸಿ, ಉರುವಲಾಗಿ ಬಳಸುವುದು ಆತನ ವಾಡಿಕೆಯಾಗಿತ್ತು. ಆದರೆ, ಅಂದು ನದಿಯ ರಭಸ ಮತ್ತು ದೈತ್ಯ ಮರಗಳು ಕೊಚ್ಚಿಕೊಂಡು ಬರುತ್ತಿದ್ದ ವೇಗವನ್ನು ಕಂಡು ಆತನಿಗೆ ಮುಂಬರುವ ಭೀಕರ ಪ್ರವಾಹದ ಮುನ್ಸೂಚನೆ ಸಿಕ್ಕಿತ್ತು. ಸೂರ್ಯೋದಯದ ಹೊತ್ತಿಗೆ ಆತನ ಊಹೆ ನಿಜವಾಗಿ, ಇಡೀ ಪ್ರದೇಶವೇ ಜಲಾವೃತಗೊಳ್ಳಲಾರಂಭಿಸಿತು.
ಈ ವೇಳೆ ಸ್ವತಃ ಶ್ರವಣ್ ಮನೆಯೊಳಗೂ ನೀರು ನುಗ್ಗಿತ್ತು. ಆತನ ತಾಯಿ ಮತ್ತು ಸಹೋದರ ಮನೆಯ ವಸ್ತುಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದರು. ಶ್ರವಣ್ ತನ್ನ ಮನೆಗೆ ಹೋಗಿ ಕುಟುಂಬದವರಿಗೆ ಸಹಾಯ ಮಾಡಬಹುದಿತ್ತು. ಆದರೆ, “ನಾನು ನನ್ನ ಮನೆಯವರನ್ನು ಮಾತ್ರ ರಕ್ಷಿಸಲು ಹೋದರೆ, ಉಳಿದವರನ್ನು ಕಾಪಾಡುವವರು ಯಾರು?” ಎಂದು ನಿರ್ಧರಿಸಿದ ಆತ, ಊರಿನ ಜನರ ರಕ್ಷಣೆಗೆ ಮುಂದಾದ. ಸ್ಥಳೀಯವಾಗಿ ಬಳಸುವ ‘ತುಲುಂಗಾ ನಾವೊ’ ಎಂಬ ಸಾಂಪ್ರದಾಯಿಕ ಮರದ ದೋಣಿಯನ್ನು ಬಳಸಿಕೊಂಡು, ತನ್ನ ಸ್ನೇಹಿತರ ಪಡೆಯೊಂದಿಗೆ ಕಾರ್ಯಾಚರಣೆಗಿಳಿದ.
ಅಂದು ಬೆಳಿಗ್ಗೆ 10 ಗಂಟೆಯಿಂದ ಮರುದಿನದವರೆಗೆ ಈ ಯುವಕರ ಪಡೆ ವಿಶ್ರಮಿಸಲಿಲ್ಲ. ನುರಿತ ದೋಣಿ ಚಾಲಕರೂ ನೀರಿಗಿಳಿಯಲು ಹೆದರುತ್ತಿದ್ದ ಪರಿಸ್ಥಿತಿಯಲ್ಲಿ, ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದರು. ಪ್ರವಾಹಕ್ಕೆ ಸಿಲುಕಿದ್ದ ಮಕ್ಕಳು, ವೃದ್ಧರು, ಗರ್ಭಿಣಿಯರು ಹಾಗೂ ರೋಗಿಗಳನ್ನು ಸುರಕ್ಷಿತ ಸ್ಥಳಗಳಿಗೆ ಗುರ್ತಿಸಿ ಸ್ಥಳಾಂತರಿಸಿದರು. ಮನೆಗಳ ಛಾವಣಿಯ ಮೇಲೆ ಹಾಗೂ ಚಾವಣಿಯೊಳಗೆ (ಸೀಲಿಂಗ್) ಸಿಲುಕಿದ್ದವರನ್ನೂ ಕತ್ತಲಲ್ಲಿಯೇ ಹುಡುಕಿ ರಕ್ಷಿಸಿದರು. ಶಿವಸಾಗರ ಜಿಲ್ಲೆಯ ನಜೀರಾ ಉಪ-ವಿಭಾಗದ ಐದು ಹಳ್ಳಿಗಳಲ್ಲಿ ಸತತ ಕಾರ್ಯಾಚರಣೆ ನಡೆಸಿ ಸುಮಾರು 2,000 ಜನರನ್ನು ಶ್ರವಣ್ ಮತ್ತು ಆತನ ತಂಡ ರಕ್ಷಿಸಿದೆ.
ಶನಿವಾರದ ವರದಿಗಳ ಪ್ರಕಾರ, ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ ಕೊಂಚ ಸುಧಾರಿಸಿದ್ದು, ಸಂತ್ರಸ್ತರ ಸಂಖ್ಯೆ 1.92 ಲಕ್ಷದಿಂದ 1.78 ಲಕ್ಷಕ್ಕೆ ಇಳಿಕೆಯಾಗಿದೆ. ಆದರೆ, ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ 5ರಿಂದ 7ಕ್ಕೆ ಏರಿಕೆಯಾಗಿದೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ASDMA) ತಿಳಿಸಿದೆ.
ಗೋಲಾಘಾಟ್, ಶಿವಸಾಗರ, ಚರೈದೇವ್, ಬಾಜಾಲಿ, ಧೇಮಾಜಿ, ಸೋನಿತ್ಪುರ ಮತ್ತು ಜೋರ್ಹತ್ ಜಿಲ್ಲೆಗಳ 349 ಹಳ್ಳಿಗಳು ಜಲಾವೃತಗೊಂಡಿವೆ. ಇದರಲ್ಲಿ ಚರೈದೇವ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, 75,199 ಜನರು ಸಂತ್ರಸ್ತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಯಾವುದೇ ಹೊಸ ಪ್ರಾಣಹಾನಿ ವರದಿಯಾಗಿಲ್ಲ, ಈವರೆಗಿನ ಒಟ್ಟು ಸಾವಿನ ಸಂಖ್ಯೆ 82ರಲ್ಲೇ ಮುಂದುವರಿದಿದೆ. ಶಿವಸಾಗರದ ದಿಕ್ಹೌ ನದಿ ಮತ್ತು ಗೋಲಾಘಾಟ್ನ ಧನಸಿರಿ ನದಿಗಳು ಈಗಲೂ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ರಾಜ್ಯದಾದ್ಯಂತ 44 ಪರಿಹಾರ ಶಿಬಿರಗಳು ಕಾರ್ಯಾಚರಿಸುತ್ತಿದ್ದು, ಸುಮಾರು 15,000 ಜನರಿಗೆ ಆಶ್ರಯ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




