ದೇಶದ ಅರಣ್ಯ ಮತ್ತು ಮೂಲನಿವಾಸಿ ಪ್ರದೇಶಗಳ ಶಾಲೆಗಳಲ್ಲಿ ಸರ್ಕಾರಗಳ ನಿರ್ಲಕ್ಷ್ಯ ಮತ್ತು ಮೂಲಸೌಕರ್ಯಗಳ ಕೊರತೆಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಿಂದ ‘ಆದಿವಾಸಿ ಸ್ಕೂಲ್ ಠೀಕ್ ಕರೋ’ (ಆದಿವಾಸಿ ಶಾಲೆಗಳನ್ನು ಸರಿಪಡಿಸಿ) ಅಭಿಯಾನಕ್ಕೆ ಚಾಲನೆ ನೀಡಲಿದೆ.
ಸೆಪ್ಟೆಂಬರ್ 16ರಂದು ನಾಗ್ಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ, ಸೆಪ್ಟೆಂಬರ್ 17ರಿಂದ ಈ ಚಳವಳಿ ಗಡ್ಚಿರೋಲಿಯಲ್ಲಿ ಅಧಿಕೃತವಾಗಿ ಆರಂಭವಾಗಲಿದೆ ಎಂದು ತಿಳಿಸಿದರು. ಸಿಜೆಪಿಯ ಪ್ರತಿನಿಧಿಗಳು ಆದಿವಾಸಿ ಭಾಗಗಳ ವಸತಿ ಹಾಗೂ ಇತರ ಸರ್ಕಾರಿ ಶಾಲೆಗಳಿಗೆ ನೇರವಾಗಿ ಭೇಟಿ ನೀಡಿ, ಅಲ್ಲಿನ ಕಟ್ಟಡ, ಶೌಚಾಲಯ, ಕುಡಿಯುವ ನೀರು, ಗಡಿಗೋಡೆ ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಲಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಸಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ: ಬಿಜೆಪಿ ಗೂಂಡಾಗಳ ಕೃತ್ಯ ಎಂದ ದೀಪ್ಕೆ
“ಕಳೆದ 80 ವರ್ಷಗಳಿಂದ ಬಂದ ಯಾವುದೇ ಸರ್ಕಾರಗಳೂ ಆದಿವಾಸಿ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸೂಕ್ತ ಆದ್ಯತೆ ನೀಡಿಲ್ಲ. ರಾಜಕೀಯ ಪಕ್ಷಗಳು ತಮ್ಮ ಜಿಲ್ಲಾ ಕಚೇರಿಗಳನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತವೆ. ಆದರೆ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಆದಿವಾಸಿ ವಸತಿ ಶಾಲೆಗಳನ್ನು ಸರಿಪಡಿಸಲು ಹಣವಿಲ್ಲ ಎನ್ನುತ್ತವೆ” ಎಂದು ಅಭಿಜೀತ್ ದೀಪ್ಕೆ ಆರೋಪಿಸಿದರು.
This video cannot be played in your browser. Open the video directly
“ಮಹಾರಾಷ್ಟ್ರದಲ್ಲಿ ಕಳೆದ ಎರಡು ವರ್ಷಗಳಲ್ಲಿ 590ಕ್ಕೂ ಹೆಚ್ಚು ಆದಿವಾಸಿ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಹಾವಿನಕಾಟದಿಂದ ಮೃತರಾಗಿದ್ದಾರೆ. ಇಂತಹ ಘಟನೆಗಳು ಮುಂಬೈ ಅಥವಾ ಪುಣೆಯಂತಹ ಪ್ರಮುಖ ನಗರಗಳ ಶಾಲೆಯಲ್ಲಿ ನಡೆದಿದ್ದರೆ ಇಡೀ ದೇಶವೇ ಪ್ರತಿಭಟಿಸುತ್ತಿತ್ತು, ಆದರೆ ಗಡಿಭಾಗದ ಮಕ್ಕಳ ಸಾವು ನಿರ್ಲಕ್ಷಕ್ಕೊಳಗಾಗುತ್ತಿದೆ” ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇಶದ 720 ಏಕಲವ್ಯ ಮಾದರಿ ವಸತಿ ಶಾಲೆಗಳ ಪೈಕಿ 477 ಶಾಲೆಗಳು ಕಾರ್ಯನಿರ್ವಹಿಸುತ್ತಿಲ್ಲ ಹಾಗೂ ಉನ್ನತ ಶಿಕ್ಷಣದಲ್ಲಿ ಆದಿವಾಸಿ ವಿದ್ಯಾರ್ಥಿಗಳ ದಾಖಲಾತಿ ಶೇ. 22.8 ರಷ್ಟಿದೆ ಎಂದು ಗಂಭೀರ ಆರೋಪ ಮಾಡಿದರು. “ಕೇವಲ 7.8% ಜಿಡಿಪಿ ಬೆಳವಣಿಗೆ ಅಥವಾ 5 ಟ್ರಿಲಿಯನ್ ಡಾಲರ್ ಅರ್ಥವ್ಯವಸ್ಥೆಯ ಬಗ್ಗೆ ಮಾತನಾಡುವುದು ಸಾಲದು, ಸರ್ಕಾರಗಳು ಗ್ರಾಮೀಣ ಮತ್ತು ಆದಿವಾಸಿ ಮಕ್ಕಳ ಶಿಕ್ಷಣದ ಸುರಕ್ಷತೆಗೂ ಗಮನ ನೀಡಬೇಕು” ಎಂದು ಪ್ರತಿಪಾದಿಸಿದರು.
ಒಂದು ತಿಂಗಳ ಹಿಂದೆ ಸಿಜೆಪಿ ದೇಶವ್ಯಾಪಿ ‘ಸ್ಕೂಲ್ ಠೀಕ್ ಕರೊ’ ಅಭಿಯಾನವನ್ನು ಆರಂಭಿಸಿದ್ದು, ಅದರ ಮುಂದುವರಿದ ಭಾಗವಾಗಿ ಈಗ ಆದಿವಾಸಿ ಪ್ರದೇಶಗಳ ಶಾಲೆಗಳ ಮೇಲೆ ವಿಶೇಷ ಗಮನ ಹರಿಸಲು ಈ ನಿರ್ದಿಷ್ಟ ಚಳವಳಿಯನ್ನು ಕೈಗೆತ್ತಿಕೊಳ್ಳಲಾಗಿದೆ.





