- ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧಿಸಿದ ಲೋಕಾಯುಕ್ತ ಪೊಲೀಸರು.
- ಕ್ಯಾತಸಂದ್ರ ಟೋಲ್ ಬಳಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಶಕ್ಕೆ
ಕೆಎಸ್ಐಡಿಎಲ್ ಲಂಚ ಪ್ರಕರಣದ ಪ್ರಮುಖ ಆರೋಪಿ ಮಾಡಳ್ ವಿರೂಪಾಕ್ಷಪ್ಪ ಬಂಧನವಾಗಿದೆ.
ನಿರೀಕ್ಷಣಾ ಜಾಮೀನು ವಜಾ ಆದ ಬಳಿಕ ನಾಪತ್ತೆಯಾಗಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ತುಮಕೂರಿನ ಹೊರ ವಲಯದ ಕ್ಯಾತಸಂದ್ರ ಟೋಲ್ ಬಳಿ ಲೋಕಾಯಕ್ತ ಪೊಲೀಸರು ಬಂಧಿಸಿದ್ದಾರೆ.
ಇನ್ನೋವಾ ಕಾರಿನಲ್ಲಿ ಬೆಂಗಳೂರು ಕಡೆಗೆ ಬರುತ್ತಿದ್ದ ಅವರನ್ನು ಅಡ್ಡಗಟ್ಟಿದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಾಡಾಳ್ ವಿರೂಪಾಕ್ಷಪ್ಪ ಬಂಧನವೀಗ ಆಡಳಿತ ಪಕ್ಷಕ್ಕೆ ಭಾರೀ ಮುಜುಗರ ತರಿಸಿದೆ.
ಮಾಡಾಳ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್, ಅಕ್ರಮ ಟೆಂಡರ್ ಮಂಜೂರಿಗಾಗಿ ಗುತ್ತಿಗೆದಾರರಿಂದ ಲಂಚಪಡೆಯುತ್ತಿದ್ದ. ಈ ವೇಳೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.ಬಂಧನದ ವೇಳೆ 8ಕೋಟಿ ರೂಪಾಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಸುದ್ದಿ ಓದಿದ್ದೀರಾ? : ಜಾಮೀನು ರದ್ದಾಗುತ್ತಿದ್ದಂತೆ ಮಾಡಾಳ್ ನಾಪತ್ತೆ; ಬಂಧನಕ್ಕೆ ವಿಶೇಷ ತಂಡ ರಚಿಸಿದ ಲೋಕಾಯುಕ್ತ ಪೊಲೀಸರು
ಘಟನೆ ನಡೆದ ಒಂದು ವಾರದವರೆಗೆ ತಲೆಮರೆಸಿಕೊಂಡಿದ್ದ ಶಾಸಕ ಮಾಡಾಳ್ ವಿರೂಪಾಕ್ಷಪ್ಪ, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಇಂದು ಅದೇ ಜಾಮೀನನ್ನು ಹೈಕೋರ್ಟ್ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಮಾಡಾಳ್ ಬಂಧನವಾಗಿದೆ.