- ರಿತ್ವಿಕ್ ದತ್ತಾ ಅವರ ಲೈಫ್ ಸಂಸ್ಥೆ ವಿರುದ್ಧ ಕೇಂದ್ರ ಗೃಹ ಸಚಿವಾಲಯ ದೂರು
- 2013-14ರಲ್ಲಿ ಅರ್ಥ್ ಜಸ್ಟೀಸ್ ಸಂಸ್ಥೆಯಿಂದ ₹41 ಲಕ್ಷ ವಿದೇಶಿ ದೇಣಿಗೆ ಆರೋಪ
ಪೆರಿಸರವಾದಿ ವಕೀಲ ರಿತ್ವಿಕ್ ದತ್ತಾ ಅವರ ವಿರುದ್ಧ ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯ (ಎಫ್ಸಿಆರ್ಎ) ಉಲ್ಲಂಘನೆಯ ಆರೋಪದ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.
ರಿತ್ವಿಕ್ ಅವರ ಅರಣ್ಯ ಮತ್ತು ಪರಿಸರ ಸಂಬಂಧಿ ಕಾನೂನು ಹೋರಾಟ ಸಂಸ್ಥೆ (ಲೈಫ್) ಭಾರತೀಯ ಕಲ್ಲಿದ್ದಲು ಯೋಜನೆಗಳ ವಿರುದ್ಧ ಮೊಕದ್ದಮೆ ಹೂಡುವ ದುರುದ್ದೇಶ ಹೊಂದಿದ್ದಾರೆ. ಅದಕ್ಕಾಗಿ ಅಮೆರಿಕ ಮೂಲದ ಅರ್ಥ್ ಜಸ್ಟೀಸ್ (ಇಜೆ) ಸಂಸ್ಥೆಯಿಂದ ಹಣ ಪಡೆದಿದ್ದಾರೆ. ಇದು ಎಫ್ಸಿಆರ್ಎ ಉಲ್ಲಂಘನೆ ಎಂದು ಆರೋಪಿಸಿ ಕೇಂದ್ರ ಗೃಹ ಸಚಿವಾಲಯದ ದೂರು ನೀಡಿತ್ತು.
ಭಾರತದ ಬಹುತೇಕ ಕಲ್ಲಿದ್ದಲು ಯೋಜನೆಗಳು ಅದಾನಿ ಸಮೂಹದ ನೇತೃತ್ವದಲ್ಲಿರುವುದು ಬಹಿರಂಗ ಸತ್ಯ. ಹೀಗಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿರುವುದು ಆಶ್ಚರ್ಯದ ವಿಚಾರವೂ ಅಲ್ಲ. ಕೇಂದ್ರದ ದೂರಿನ ಹಿನ್ನೆಲೆಯಲ್ಲಿ ಸಿಬಿಐ ಕ್ರಮ ಕೈಗೊಂಡಿದ್ದು, ಪರಿಸರ ವಕೀಲ ರಿತ್ವಿಕ್ ದತ್ತಾ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.
ರಿತ್ವಿಕ್ ಅವರು ಭಾರತದಲ್ಲಿ ಪರಿಸರ ರಕ್ಷಿಸುವ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ರಿತ್ವಿಕ್ ದತ್ತಾ ಅವರಿಗೆ 2021ನೇ ಸಾಲಿನ ಲೈವ್ಲಿಹುಡ್ ಪ್ರಶಸ್ತಿ ದೊರೆತಿದೆ. ಸ್ವೀಡನ್ ದೇಶ ನೀಡುವ ಈ ಪ್ರಶಸ್ತಿ ನೊಬೆಲ್ ಪ್ರಶಸ್ತಿಗೆ ಪರ್ಯಾಯ ಎಂದು ಹೇಳಲಾಗುತ್ತದೆ.
ಲೈಫ್ ಸಂಸ್ಥೆಯು ‘ವೃತ್ತಿಪರ ಶುಲ್ಕಗಳು’ ಎಂಬ ಸೋಗಿನಲ್ಲಿ ಅಮೆರಿಕದ ಇಜೆ ಸಂಸ್ಥೆಯಿಂದ ಹಣವನ್ನು ಪಡೆದಿದೆ.ಅಭಿವೃದ್ಧಿ ಯೋಜನೆಗಳನ್ನು ಗುರಿಯಾಗಿಸಿ ಸ್ಥಗಿತಗೊಳಿಸಲು ಈ ಹಣವನ್ನು ಬಳಸಲಾಗುತ್ತಿತ್ತು ಎಂದು ಕೇಂದ್ರ ಸರ್ಕಾರ ತನ್ನ ದೂರಿನಲ್ಲಿ ಹೇಳಲಾಗಿದೆ.
ವಕೀಲ ರಿತ್ವಿಕ್ ದತ್ತಾ ಅವರ ಲೈಫ್ ಸಂಸ್ಥೆಯ ವಕೀಲರ ಸಮೂಹ ಆರ್ಥಿಕತೆಗೆ ಸಂಬಂಧಿಸಿದ ವಿಚಾರದಲ್ಲಿ ಇಜೆ ಸಂಸ್ಥೆಗೆ ಕಾನೂನು ಸಲಹೆ ನೀಡುತ್ತಿಲ್ಲ. ಆದರೆ ಅಭಿವೃದ್ಧಿ ಯೋಜನೆಗಳನ್ನು ಸ್ಥಗಿತಗೊಳಿಸಲು ವಿದೇಶಿ ಹಣ ಪಡೆಯುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
2013-14ರ ಹಣಕಾಸು ವರ್ಷದಲ್ಲಿ ರಿತ್ವಿಕ್ ಅವರು ಇಜೆ ಸಂಸ್ಥೆಯಿಂದ ₹41 ಲಕ್ಷ ವಿದೇಶಿ ದೇಣಿಗೆ ಪಡೆದಿದ್ದರು. ಬಳಿಕ ಲೈಫ್ ಸಂಸ್ಥೆ ಸ್ಥಾಪಿಸಿದ್ದರು ಎಂದು ಸಿಬಿಐ ಆರೋಪಿಸಿದೆ.
ಇಜೆ ಎಂಬುದು ಅಮೇರಿಕದ ಸರ್ಕಾರೇತರ ಸಂಸ್ಥೆ. ಇದು ಪರಿಸರ ರಕ್ಷಣೆಯ ಉದ್ದೇಶದಿಂದ ಕಲ್ಲಿದ್ದಲು ಯೋಜನೆಗಳ ವಿರುದ್ಧ ಮೊಕದ್ದಮೆ ಹೂಡಲು ನಾನಾ ದೇಶಗಳಲ್ಲಿನ ಕಾನೂನು ವೃತ್ತಿಪರರಿಗೆ ಹಣ ನೀಡುತ್ತದೆ. ಈ ಹಿನ್ನೆಲೆಯಲ್ಲಿ ಇಜೆ ಸಂಸ್ಥೆಯಿಂದ ರಿತ್ವಿಕ್ ಅವರಿಗೆ ಹಣದ ಹರಿವು ಮುಂದುವರೆದಿತ್ತು.
ಇಜೆ ಮತ್ತು ಅಮೆರಿಕದಲ್ಲಿನ ಸ್ಯಾಂಡ್ಲರ್ ಫೌಂಡೇಶನ್ ಭಾರತದ ಅಸ್ತಿತ್ವದಲ್ಲಿರುವ ಅಥವಾ ಪ್ರಸ್ತಾವಿತ ಕಲ್ಲಿದ್ದಲು ಯೋಜನೆಗಳನ್ನು ಸ್ಥಗಿತಗೊಳಿಸುವ ಉದ್ದೇಶದಿಂದ ಕಾನೂನು ಚಟುವಟಿಕೆಗಳಿಗೆ ಧನಸಹಾಯ ನೀಡಲು ಪ್ರಸ್ತಾಪಿವೆ. ಇದು ಎಫ್ಸಿಆರ್ಎ ಉಲ್ಲಂಘನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಸುದ್ದಿ ಓದಿದ್ದೀರಾ? ಅತಿ ಹೆಚ್ಚು ತಾಪಮಾನದ ವರ್ಷಗಳಲ್ಲಿ 2022ಕ್ಕೆ 5ನೇ ಸ್ಥಾನ: ಡಬ್ಲ್ಯುಎಂಒ
ಭಾರತದ ಕಲ್ಲಿದ್ದಲು ಯೋಜನೆ ಸ್ಥಗಿತಗೊಳಿಸುವ ಉದ್ದೇಶದಿಂದ ವಿದೇಶದಿಂದ ದೇಣಿಗೆ ಪಡೆಯುವುದು ಭಾರತದ ರಾಷ್ಟ್ರೀಯ ಆರ್ಥಿಕ ಭದ್ರತೆಗೆ ಹಾನಿಕರ ಎಂದು ದೂರಿನಲ್ಲಿ ಹೇಳಲಾಗಿದೆ.
ಲೈಫ್ ಸಂಸ್ಥೆಗೆ ಇಸಿಎಫ್ (ಐರೋಪ್ಯ ಕ್ಲೈಮೇಟ್ ಫೌಂಡೇಷನ್) ಕಾನೂನು ಚಟುವಟಿಕೆಗಳಿಗಾಗಿ 1,20,000 ಅಮೆರಿಕ ಡಾಲರ್ ಅನ್ನು ಇಜೆ ಮೂಲಕ ರವಾನೆಯಾಗಿದೆ ಎಂದೂ ದೂರಿನಲ್ಲಿ ಹೇಳಲಾಗಿದೆ.