ಎನ್‌ಸಿಇಆರ್‌ಟಿ ಪರಿಷ್ಕೃತ ಪಠ್ಯ | ಮೊಘಲರು, ಜಾತಿ ವ್ಯವಸ್ಥೆ ಮುಂತಾದ ಐತಿಹಾಸಿಕ ಸಂಗತಿಗಳು ಕಡಿತ

Date:

ಎನ್‌ಸಿಇಆರ್‌ಟಿ ರೂಪಿಸಿದ ನೂತನ ಪರಿಷ್ಕೃತ ಪಠ್ಯದಲ್ಲಿ 2002ರ ಗುಜರಾತ್‌ ಗಲಭೆಯ ಎಲ್ಲ ಮಾಹಿತಿಯನ್ನು ಕೈಬಿಟ್ಟಿದೆ. ಭಾರತದಲ್ಲಿ ಮೊಘಲ್‌ ಆಡಳಿತದ ಯುಗ, ಜಾತಿ ವ್ಯವಸ್ಥೆ, ಸಾಮಾಜಿಕ ಚಳವಳಿಗಳ ಕುರಿತ ಮಾಹಿತಿ ಅಳಿಸಲಾಗಿದೆ.

ಶಿಕ್ಷಣ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಪರಿಷತ್ತು (ಎನ್‌ಸಿಇಆರ್‌ಟಿ) ಪುನಃ 6 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ 2023-24ನೇ ಶೈಕ್ಷಣಿಕ ಸಾಲಿನಿಂದ ಪಠ್ಯ ಪರಿಷ್ಕರಿಸಿದೆ.

ಎಲ್ಲ ಶಾಲೆಗಳು ಶಿಕ್ಷಣ ಪರಿಷತ್ತು ನೀಡುವ ಪಠ್ಯವನ್ನು ಬೋಧಿಸುತ್ತವೆ. ಈ ಬಾರಿ ಬೇಸಿಗೆ ರಜೆ ಮುಗಿಸಿ ಹೊಸ ತರಗತಿಗೆ ಪಾದಾರ್ಪಣೆ ಮಾಡುವ ವಿದ್ಯಾರ್ಥಿಗಳಿಗೆ ಹೊಸ ಇತಿಹಾಸ, ಸಮಾಜ ವಿಜ್ಞಾನ ಪಠ್ಯಪುಸ್ತಕಗಳು ಕೈಸೇರುತ್ತವೆ.

ಕೇಂದ್ರದಲ್ಲಿ ಎನ್‌ಡಿಎ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರ ವಹಿಸಿಕೊಂಡ ನಂತರ ಶಿಕ್ಷಣ ಪರಿಷತ್ತು ಇತಿಹಾಸ ಪಠ್ಯದಲ್ಲಿ ಭಾರೀ ಬದಲಾವಣೆ ಮಾಡಿದೆ. ಅಲ್ಲದೆ ಪ್ರಮುಖ ಐತಿಹಾಸಿಕ ಘಟನಾವಳಿಗಳು ಪಠ್ಯದಿಂದ ಕಾಣೆಯಾಗಿರುವುದನ್ನು ಇಲ್ಲಿ ಗಮನಿಸಬಹುದು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಎನ್‌ಸಿಇಆರ್‌ಟಿ ರೂಪಿಸಿದ ನೂತನ ಪರಿಷ್ಕೃತ ಪಠ್ಯದಲ್ಲಿ 2002ರ ಗುಜರಾತ್‌ ಗಲಭೆಯ ಎಲ್ಲ ಮಾಹಿತಿಯನ್ನು ಕೈಬಿಟ್ಟಿದೆ. ಅಲ್ಲದೆ ಭಾರತದಲ್ಲಿ ಮೊಘಲ್‌ ಆಡಳಿತದ ಯುಗ, ಜಾತಿ ವ್ಯವಸ್ಥೆ, ಸಾಮಾಜಿಕ ಚಳವಳಿಗಳು ಮತ್ತು ಪ್ರತಿಭಟನೆಗಳ ಕುರಿತ ಅಧ್ಯಾಯಗಳನ್ನು ಕೈಬಿಟ್ಟಿದೆ.

ಕೋವಿಡ್‌ ಪರಿಣಾಮ ಕಲಿಕೆಯಲ್ಲಿ ಹಿನ್ನಡೆ ಅನುಭವಿಸಿದ ವಿದ್ಯಾರ್ಥಿಗಳಿಗೆ ಸಹಾಯವಾಗುವಂತೆ ಅವರ ಶೀಘ್ರ ಚೇತರಿಕೆಗೆ ಪಠ್ಯದ ಹೊರೆ ಕಡಿಮೆ ಮಾಡಲು ಶಿಕ್ಷಣ ಪರಿಷತ್ತು ಕಳೆದ ವರ್ಷ ಕೈಗೊಂಡ ಪಠ್ಯವನ್ನು ತರ್ಕಬದ್ಧಗೊಳಿಸುವಿಕೆಯ ಯೋಜನೆಯ ಪರಿಣಾಮ ಪಠ್ಯದಲ್ಲಿನ ಈ ಬದಲಾವಣೆಯಾಗಿದೆ.

ಎನ್‌ಸಿಇಆರ್‌ಟಿ ಕಳೆದ ವರ್ಷ ಪಠ್ಯಪುಸ್ತಕಗಳಲ್ಲಿ ರೂಪಿಸಿದ ಎಲ್ಲ ಪರಿಷ್ಕೃತ ಅಂಶಗಳ ಸಮಗ್ರ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಆದರೆ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರಿಂದ ಈ ಬದಲಾವಣೆಗಳನ್ನು ಪರಿಚಯಿಸಲು ಸಾಧ್ಯವಾಗಲಿಲ್ಲ. ಆದರೆ 2023-24 ಶೈಕ್ಷಣಿಕ ವರ್ಷಕ್ಕೆ ಬದಲಾವಣೆ ಮಾಡಿರುವ ಪಠ್ಯಗಳು ಮರುಮುದ್ರಣವಾಗಿ ಮಾರುಕಟ್ಟೆಗೆ ಬಂದಿವೆ.

ಪಠ್ಯಪುಸ್ತಕಗಳಲ್ಲಿ ರೂಪಿಸಿದ ಕೆಲವು ಪ್ರಮುಖ ಬದಲಾವಣೆಗಳು

• ಮೊಘಲರ ಕಾಲದ ಪಠ್ಯ ಮತ್ತು ಭಾರತದ ಮುಸ್ಲಿಂ ಆಡಳಿತಗಾರರ ಕುರಿತ ವಿಷಯಗಳಲ್ಲಿ ಭಾರೀ ಕಡಿತವಾಗಿದೆ. ತುಘಲಕ್‌, ಖಲ್ಜಿ ಮತ್ತು ಲೋದಿ ಮತ್ತು ಮೊಘಲ್ ಸಾಮ್ರಾಜ್ಯ ಸೇರಿದಂತೆ ಹಲವು ರಾಜವಂಶಗಳಿಂದ ಆಳಲ್ಪಟ್ಟ ದೆಹಲಿ ಸುಲ್ತಾನರ ಹಲವಾರು ಪುಟಗಳನ್ನು 7 ನೇ ತರಗತಿಯ ಇತಿಹಾಸ ಪಠ್ಯಪುಸ್ತಕವಾದ ‘ನಮ್ಮ ಹಳತುಗಳು – ಭಾಗ II ನಿಂದ ತೆಗೆದುಹಾಕಲಾಗಿದೆ.

• 7ನೇ ತರಗತಿಯ ಪಠ್ಯಪುಸ್ತಕದಲ್ಲಿನ ಮೊಘಲ್ ಸಾಮ್ರಾಜ್ಯದ ಅಧ್ಯಾಯ, ಹುಮಾಯೂನ್, ಷಹಜಹಾನ್, ಬಾಬರ್, ಅಕ್ಬರ್, ಜಹಾಂಗೀರ್ ಮತ್ತು ಔರಂಗಜೇಬ್‌ನಂತಹ ಮೊಘಲ್ ಚಕ್ರವರ್ತಿಗಳ ಸಾಧನೆ ವಿವರಿಸುವ ಎರಡು ಪುಟಗಳ ಮಾಹಿತಿಯನ್ನು ಕಡಿತಗೊಳಿಸಲಾಗಿದೆ.

• 12ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿನ ಕಿಂಗ್ಸ್ ಅಂಡ್ ಕ್ರಾನಿಕಲ್ಸ್: ದಿ ಮೊಘಲ್ ಕೋರ್ಟ್ಸ್ (ಭಾರತೀಯ ಇತಿಹಾಸದ ಸಂಗತಿಗಳು – ಭಾಗ II) ಅಧ್ಯಾಯವನ್ನು ತೆಗೆದುಹಾಕಲಾಗಿದೆ. ಈ ಅಧ್ಯಾಯವು ಮೊಘಲರ ಆಡಳಿತದ ಬಗ್ಗೆ ವಿವರಿಸುತ್ತದೆ. ಅಕ್ಬರ್‌ ಮತ್ತು ಇತರ ಅರಸರ ಪ್ರಮುಖ ಯುದ್ಧಗಳು, ಕಟ್ಟಡ ನಿರ್ಮಾಣಗಳು ಮತ್ತು ಮೊಘಲರ ನ್ಯಾಯಾಲಯದ ವಿಧಾನವನ್ನು ಪರಿಚಯಿಸುತ್ತದೆ.

• 7 ನೇ ತರಗತಿಯ ಇತಿಹಾಸ ಪಠ್ಯಪುಸ್ತಕದ ‘ನಮ್ಮ ಹಳತು – ಭಾಗ II’ ಅಧ್ಯಾಯದಲ್ಲಿ ದೇಶದ ಮೇಲೆ ಆಕ್ರಮಣ ಮಾಡಿದ ಮತ್ತು ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದ ಅಫ್ಘಾನಿಸ್ತಾನದ ಮಹಮ್ಮದ್ ಘಜ್ನಿಯ ಕುರಿತ ಉಲ್ಲೇಖವನ್ನು ತಿರುಚಲಾಗಿದೆ.

ಮೊದಲಿಗೆ ಆತನ ಹೆಸರಿನ ಮೊದಲಿಗೆ ಇದ್ದ ಸುಲ್ತಾನ ಎಂಬ ಪಟ್ಟವನ್ನು ಕೈಬಿಡಲಾಗಿದೆ. ಎರಡನೆಯದಾಗಿ “ಘಜ್ನಿ ಭಾರತದ ಮೇಲೆ ಪ್ರತಿ ವರ್ಷವೂ ದಾಳಿ ಮಾಡಿದ” ಎಂಬ ವಾಕ್ಯವನ್ನು “ಘಜ್ನಿ ಧಾರ್ಮಿಕ ಉದ್ದೇಶದಿಂದ ಭಾರತದ ಮೇಲೆ 17 ಬಾರಿ (ಕ್ರಿ.ಶ. 1000-1025) ದಾಳಿ ನಡೆಸಿದ” ಎಂದು ಎನ್‌ಸಿಇಆರ್‌ಟಿ ಪರಿಷ್ಕರಿಸಿದೆ.

• ತುರ್ತು ಪರಿಸ್ಥಿತಿ ಸಮಯದಲ್ಲಿ ದೇಶದ ಜನತೆ ಅನುಭವಿಸಿದ ಸಂಕಷ್ಟದ ಸ್ಥಿತಿಗಳ ಕುರಿತ ಮಾಹಿತಿಯನ್ನು ಕಡಿತಗೊಳಿಸಲಾಗಿದೆ. 12ನೇ ತರಗತಿಯ ಸ್ವಾತಂತ್ರ್ಯಾ ನಂತರದ ಭಾರತ ಎಂಬ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಕುರಿತ ಅಧ್ಯಾಯದಲ್ಲಿ ಐದು ಪುಟಗಳ ಮಾಹಿತಿಯನ್ನು ತೆಗೆಯಲಾಗಿದೆ.

• ಸಮಕಾಲೀನ ಭಾರತದಲ್ಲಿ ಸಾಮಾಜಿಕ ಆಂದೋಲನಗಳಾಗಿ ಮಾರ್ಪಟ್ಟ ಪ್ರತಿಭಟನೆಗಳನ್ನು ವಿವರಿಸುವ ಮೂರು ಅಧ್ಯಾಯಗಳನ್ನು 6 ರಿಂದ 12 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ. ಉದಾಹರಣೆಗೆ, ‘ಜನಪ್ರಿಯ ಚಳವಳಿಗಳ ಉದಯ’ ಎಂಬ ಅಧ್ಯಾಯವನ್ನು 12 ನೇ ತರಗತಿಯ ಸ್ವಾತಂತ್ರ್ಯ ಬಂದ ನಂತರ ಭಾರತದ ರಾಜಕೀಯ ಎಂಬ ಪಠ್ಯಪುಸ್ತಕದಿಂದ ಕೈಬಿಡಲಾಗಿದೆ.

• 6ನೇ ತರಗತಿಯ ಇತಿಹಾಸ ಪಠ್ಯಪುಸ್ತಕದಲ್ಲಿ (ನಮ್ಮ ಹಳತು – ಭಾಗ I) ವರ್ಣಗಳ ವಿಭಾಗ ಕುರಿತ ಅಧ್ಯಾಯವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ‘ಕಿಂಗ್‌ಡಮ್, ಕಿಂಗ್ಸ್ ಮತ್ತು ಎ ಅರ್ಲಿ ರಿಪಬ್ಲಿಕ್’ ಅಧ್ಯಾಯದಿಂದ ವರ್ಣಗಳ ಆನುವಂಶಿಕ ಸ್ವಭಾವ, ಜನರನ್ನು ಅಸ್ಪೃಶ್ಯರು ಎಂದು ವರ್ಗೀಕರಿಸುವುದು ಮತ್ತು ವರ್ಣ ವ್ಯವಸ್ಥೆಯನ್ನು ತಿರಸ್ಕರಿಸುವ ವಾಕ್ಯಗಳನ್ನು ತೆಗೆದುಹಾಕಲಾಗಿದೆ.

•2002ರ ಗುಜರಾತ್ ಗಲಭೆಗಳ ಎಲ್ಲ ಉಲ್ಲೇಖಗಳ ಕುರಿತ ಮಾಹಿತಿಯನ್ನು ಎಲ್ಲ ಎನ್‌ಸಿಇಆರ್‌ಟಿ ಸಮಾಜ ವಿಜ್ಞಾನ ಪಠ್ಯಪುಸ್ತಕಗಳಿಂದ ಕೈಬಿಡಲಾಗಿದೆ.

ಉದಾಹರಣೆಗೆ, ಪ್ರಸ್ತುತ 12ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಕೊನೆಯ ಅಧ್ಯಾಯದಲ್ಲಿ ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜಕೀಯ ಎಂಬ ಶೀರ್ಷಿಕೆಯಡಿ ಗಲಭೆಯ ಕುರಿತು ಇದ್ದ ಎರಡು ಪುಟಗಳನ್ನು ಅಳಿಸಲಾಗಿದೆ. ಮೊದಲ ಪುಟವು ಘಟನೆಗಳ ಕಾಲಾನುಕ್ರಮ ಹೊಂದಿತ್ತು.

“ರಾಜಕೀಯ ಉದ್ದೇಶಗಳಿಗೆ ಧಾರ್ಮಿಕ ಭಾವನೆಗಳನ್ನು ಬಳಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಗುಜರಾತ್‌ನಲ್ಲಿ ಸಂಭವಿಸಿದ ನಿದರ್ಶನಗಳು ನಮ್ಮನ್ನು ಎಚ್ಚರಿಸುತ್ತವೆ. ಇದು ಪ್ರಜಾಸತ್ತಾತ್ಮಕ ರಾಜಕೀಯಕ್ಕೆ ಅಪಾಯ ತಂದೊಡ್ಡಿದೆ” ಎಂದು ಅಳಿಸಿದ ಮೊದಲನೇ ಪುಟದಲ್ಲಿ ಉಲ್ಲೇಖಿಸಲಾಗಿತ್ತು.

• ಅಳಿಸಲಾದ ಎರಡನೇ ಪುಟದಲ್ಲಿ ಮೂರು ಪತ್ರಿಕೆಗಳ ವರದಿಯ ಜೊತೆಗೆ 2001-2002ರಲ್ಲಿ ಗುಜರಾತ್‌ ಸರ್ಕಾರ ಗಲಭೆಗಳನ್ನು ನಿರ್ವಹಿಸಿದ ಬಗ್ಗೆ ಎನ್‌ಎಚ್‌ಆರ್‌ಸಿ ವರದಿಯ ಬಗ್ಗೆ ಅವಲೋಕನ ಕುರಿತ ಒಂದು ಭಾಗವನ್ನು ಹೊಂದಿದೆ. ಅಲ್ಲದೆ ಆಗ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ನರೇಂದ್ರ ಮೋದಿ ಅವರಿಗೆ ಹೇಳಿದ ರಾಜಧರ್ಮದ ಕುರಿತ ಉಲ್ಲೇಖವನ್ನೂ ತೆಗೆದುಹಾಕಲಾಗಿದೆ.

ಈ ಸುದ್ದಿ ಓದಿದ್ದೀರಾ? ನಕಲಿ ಬಿಡ್ಡರ್‌ಗಳ ಮೂಲಕ ಕಲ್ಲಿದ್ದಲು ಹರಾಜಿನಲ್ಲಿ ಏಕಸ್ವಾಮ್ಯ ಮೆರೆದ ಅದಾನಿ ಸಮೂಹ

2014 ರಿಂದ ಎನ್‌ಸಿಇಆರ್‌ಟಿ ನಡೆಸಿದ ಮೂರನೇ ಪಠ್ಯಪುಸ್ತಕ ಪರಿಷ್ಕರಣೆ ಇದಾಗಿದೆ. 2017ರಲ್ಲಿ ಮೊದಲಿಗೆ ಪಠ್ಯ ಪರಿಷ್ಕರಿಸಲಾಗಿತ್ತು. ಇದರಲ್ಲಿ 182 ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗಳು, ತಿದ್ದುಪಡಿಗಳು ಮತ್ತು ಹೊಸ ದತ್ತಾಂಶ ಸೇರ್ಪಡೆ ಸೇರಿದಂತೆ 1,334 ಬದಲಾವಣೆಗಳನ್ನು ಮಾಡಲಾಗಿತ್ತು.

ವಿದ್ಯಾರ್ಥಿಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಲು ಆಗಿನ ಶಿಕ್ಷಣ ಸಚಿವ ಪ್ರಕಾಶ್ ಜಾವಡೇಕರ್ ಅವರ ಆದೇಶದ ಮೇರೆಗೆ 2019ರಲ್ಲಿ ಎರಡನೇ ಬಾರಿಗೆ ಪಠ್ಯ ಪರಿಷ್ಕರಣೆ ನಡೆಸಲಾಯಿತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಶುರು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಆರಂಭವಾಗಲಿದ್ದು, ಕಾಂಗ್ರೆಸ್ ಅಧ್ಯಕ್ಷ...

ನೌಕಾಪಡೆಯ ನೂತನ ಮುಖ್ಯಸ್ಥರಾಗಿ ಡಿ ಕೆ ತ್ರಿಪಾಠಿ ನೇಮಕ

ಭಾರತದ ಮುಂದಿನ ನೌಕಾಪಡೆಯ ಮುಖ್ಯಸ್ಥರನ್ನಾಗಿ ಡಿ ಕೆ ತ್ರಿಪಾಠಿ ಅವರನ್ನು ಕೇಂದ್ರ...

ಲೋಕಸಭಾ ಚುನಾವಣೆ | 21 ರಾಜ್ಯಗಳ 102 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಇಂದು

ಲೋಕಸಭಾ ಚುನಾವಣೆ ಯ ಮೊದಲ ಹಂತದ ಮತದಾನ ಇಂದು ನಡೆಯಲಿದ್ದು, ದೇಶದ...

ಜೈಲಿನಲ್ಲಿ ಅರವಿಂದ್ ಕೇಜ್ರಿವಾಲ್ ಕೊಲ್ಲಲು ಸಂಚು: ಎಎಪಿ ಗಂಭೀರ ಆರೋಪ

ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರನ್ನು ಕೊಲ್ಲಲು ಸಂಚು ನಡೆಯುತ್ತಿದೆ ಎಂದು...