- ಪಂಜಾಬ್ನ ಸೇನಾ ಠಾಣೆಯ ಮೇಲೆ ಉಗ್ರರ ದಾಳಿ
- ಖಲಿಸ್ತಾನಿ ಉಗ್ರ ತಂಡದಿಂದ ದಾಳಿಯ ಸಂಶಯ
ಪಂಜಾಬ್ನ ಭಟಿಂಡಾದ ಸೇನಾ ಠಾಣೆ ಮೇಲೆ ಬುಧವಾರ ಬೆಳಗಿನ ಜಾವ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ನಾಲ್ವರು ಯೋಧರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
“ಬಟಿಂಡಾ ಮಿಲಿಟರಿ ಠಾಣೆ ಗುರಿಯಾಗಿಸಿ ಬೆಳಗ್ಗೆ 4.35ರ ಸುಮಾರಿಗೆ ಠಾಣೆಯ ಮೇಲೆ ಅಪರಿಚಿತರು ದಾಳಿ ನಡೆಸಿದ್ದಾರೆ. ಈ ವೇಳೆ ಠಾಣೆಯಲ್ಲಿದ್ದ ನಾಲ್ವರು ಯೋಧರು ಸಾವನ್ನಪ್ಪಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ತಂಡಗಳು ಸ್ಥಳಕ್ಕೆ ಆಗಮಿಸಿದ್ದು, ಘಟನಾ ಪ್ರದೇಶವನ್ನು ಸುತ್ತುವರಿಯಲಾಗಿದೆ. ಸಾರ್ವಜನಿಕರ ಚಲನವಲನವನ್ನು ನಿರ್ಬಂಧಿಸಲಾಗಿದೆ. ದಾಳಿಕೋರರ ಪತ್ತೆಗೆ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ” ಎಂದು ಸೇನೆಯ ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ಧೀರಾ?: ಜೈಲಿಗೆ ತಳ್ಳಿದರೂ ಜನರ ಪರವಾಗಿ ಹೋರಾಟ; ವಯನಾಡಿನಲ್ಲಿ ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ಆಕ್ರೋಶ
ಖಲಿಸ್ತಾನಿ ಹೋರಾಟಗಾರ ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತಪಾಲ್ ಸಿಂಗ್ನ ಅನುಯಾಯಿಗಳು ಸಭೆಯೊಂದನ್ನು ನಡೆಸಲು ಸಿದ್ಧತೆ ನಡೆಸಿದ್ದಾರೆ. ಈ ಕುರಿತ ವಿಡಿಯೋವೊಂದು ವೈರಲ್ ಆಗಿದೆ. ಹೀಗಾಗಿ ಕೃತ್ಯದ ಹಿಂದೆ ಖಲಿಸ್ತಾನಿ ಹೋರಾಟಗಾರರು ಇರುವ ಶಂಕೆಯೂ ವ್ಯಕ್ತವಾಗಿದೆ.
ಸಿಂಗ್ನ ಆಪ್ತ ಪಾಪಲ್ಪ್ರೀತ್ಸಿಂಗ್ನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಅಮೃತ್ಪಾಲ್ ಬಂಧನಕ್ಕೆ ಪಂಜಾಬ್ ಪೋಲಿಸರು ತೀವ್ರ ಹುಡುಕಾಟದಲ್ಲಿದ್ದಾರೆ.
ಕಳೆದ ಕೆಲ ವಾರಗಳಲ್ಲಿ ಅಮೃತ್ಪಾಲ್ ಪಂಜಾಬ್ನ ವಿವಿಧೆಡೆ ಕಂಡುಬಂದಿದ್ದರೂ, ಪೊಲೀಸರ ಬಲೆಗೆ ಬಿದ್ದಿಲ್ಲ.
ಈ ನಡುವೆಯೇ ಸೇನಾ ಠಾಣೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ. ಅದಾಗಿಯೂ ಇದು ಭಯೋತ್ಪಾದಕ ದಾಳಿಯಲ್ಲ ಎಂದು ಬಟಿಂಡಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಗುಲ್ನೀತ್ ಸಿಂಗ್ ಖುರಾನಾ, ಸ್ಪಷ್ಟಪಡಿಸಿದ್ದಾರೆ.
“ಇದು ಭಯೋತ್ಪಾದಕ ಕೃತ್ಯವಲ್ಲ. ಹೊರಗಿನಿಂದ ಆಗಿರುವ ದಾಳಿಯೂ ಅಲ್ಲ. ಸಂಘಟನೆಯೊಂದು ನಡೆಸಿರುವ ಕೃತ್ಯವೆಂದು ಅನುಮಾನಿಸಲಾಗಿದೆ” ಎಂದು ಪಂಜಾಬ್ನ ಹೆಚ್ಚುವರಿ ಡಿಜಿಪಿ ಎಸ್ಪಿಎಸ್ ಪಾರ್ಮರ್ ಹೇಳಿದ್ದಾರೆ.
ಮೂಲಗಳ ಪ್ರಕಾರ, ಸೇನಾ ತುಕಡಿಯ ಕಚೇರಿಯ ಮೆಸ್ ಬಳಿ ಗುಂಡಿನ ದಾಳಿ ನಡೆದಿದೆ. ಕೆಲ ದಿನಗಳಿಂದ ಐಎಸ್ಎಸ್ಎಎಸ್ ರೈಫಲ್ ಮತ್ತು 28 ಸುತ್ತುಗಳ ಗುಂಡುಗಳೂ ಈ ಶಾಖೆಯಿಂದ ಕಣ್ಮತೆಯಾಗಿತ್ತು.
ಹೀಗಾಗಿ ಆರಂಭಿಕ ವರದಿಗಳ ಪ್ರಕಾರ ಶಾಖೆಯ ಒಳಗಿನ ಭಿನ್ನಾಭಿಪ್ರಾಯಗಳಿಂದ ದಾಳಿಯಾಗಿರುವ ಸಾಧ್ಯತೆಯಿದೆ ಎಂದು ಪಂಜಾಬ್ ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.