ಹೊಸ ಸಂಸತ್ ಭವನದ ಉದ್ಘಾಟನೆ ಇಂದು (ಭಾನುವಾರ) ನಡೆಯುತ್ತಿದೆ. ಇದೇ ವೇಳೆ, ಮಹಿಳಾ ಕುಸ್ತಿಪಟುಗಳು ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದು, ಅವರಿಗೆ ಬೆಂಬಲ ನೀಡಲು ಉತ್ತರ ಪ್ರದೇಶದ ರೈತರು ಟ್ರಾಕ್ಟರ್ಗಳಲ್ಲಿ ದೆಹಲಿಗೆ ತೆರಳಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕಾಯತ್ ಹೇಳಿದ್ದಾರೆ. ಈ ಬೆನ್ನಲ್ಲೇ, ರೈತರ ಧ್ವನಿಗೆ ಬೆದರಿರುವ ಕೇಂದ್ರ ಸರ್ಕಾರ, ದೆಹಲಿ ಗಡಿಗಳಲ್ಲಿ ಪೊಲೀಸ್ ಪಡೆ ನಿಯೋಜಿಸಿದೆ.
ಬಿಜೆಪಿ ಸಂಸದ, ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಬ್ರಿಜ್ಭೂಷಣ್ ಸಿಂಗ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿ ಮಹಿಳಾ ಕುಸ್ತಿಪಟುಗಳು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ, ಅವರ ಅಳಲನ್ನು ಸರ್ಕಾರ ಆಲಿಸುತ್ತಿಲ್ಲ. ಹೀಗಾಗಿ, ಸಂಸತ್ ಭವನ ಉದ್ಘಾಟನೆ ಸಮಯದಲ್ಲಿ ಭವನದ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಅವರಿಗೆ ರೈತರು ಬೆಂಬಲ ನೀಡುವುದಾಗಿ ಟಿಕಾಯತ್ ಹೇಳಿದ್ದಾರೆ.
ಟಿಕಾಯತ್ ಹೇಳಿಕೆ ನೀಡಿದ ಬೆನ್ನಲ್ಲೇ ದೆಹಲಿಯ ಸಿಂಘು, ಟಿಕ್ರಿ, ಗಾಝಿಯಾಬಾದ್, ಅಂಬಾಲ ಗಡಿಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಮತ್ತು ಹೊಸ ಸಂಸತ್ತಿನ ಕಟ್ಟಡ ಮತ್ತು ಸುತ್ತಮುತ್ತ ಬಿಗಿ ಭದ್ರತೆಗಾಗಿ ವಿವಿಧ ಹಂತಗಳಲ್ಲಿ ಬ್ಯಾರಿಕೇಡ್ಗಳನ್ನು ಅಳವಡಿಸಲಾಗಿದೆ. ದೆಹಲಿಯನ್ನು ಪ್ರವೇಶಿಸಲು ಮುಂದಾದ ಪಂಜಾಬ್-ಹರಿಯಾಣ ರೈತರನ್ನು ಅಂಬಾಲ ಗಡಿಯಲ್ಲಿ ಪೊಲೀಸರು ತಡದಿದ್ದಾರೆ.
ದೆಹಲಿ ಮೆಟ್ರೋ ರೈಲು ನಿಗಮವು ಕೇಂದ್ರ ಸಚಿವಾಲಯ ಮತ್ತು ಉದ್ಯೋಗ ಭವನ ಮೆಟ್ರೋ ನಿಲ್ದಾಣಗಳ ಎಲ್ಲ ಪ್ರವೇಶ ಮತ್ತು ನಿರ್ಗಮನ ಗೇಟ್ಗಳನ್ನು ಮುಚ್ಚಲಾಗಿದೆ. ಈ ನಿಲ್ದಾಣಗಳಲ್ಲಿ ಯಾರಿಗೂ ಪ್ರವೇಶವಿಲ್ಲವೆಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸುದ್ದಿ ಓದಿದ್ದೀರಾ?: ಬಿಜೆಪಿ ಸಂಸದ ಬ್ರಿಜ್ಭೂಷಣ್ನನ್ನು ತಕ್ಷಣ ಬಂಧಿಸಿ: ರಾಮ್ದೇವ್
ಕುಸ್ತಿಪಟುಗಳ ಪ್ರತಿಭಟನೆಯಲ್ಲಿ ರೈತರು ಪಾಲ್ಗೊಳ್ಳುತ್ತಿರುವ ಪೂರ್ವ ದೆಹಲಿಯ ಡಿಸಿಪಿ ಅಮೃತಾ ಗುಗುಲೋಟ್, “ಕಳೆದ ಬಾರಿ ರೈತರ ಪ್ರತಿಭಟನೆ ಕಾರಣದಿಂದಾಗಿ ಗಡಿಯನ್ನು ತಿಂಗಳುಗಟ್ಟಲೆ ಮುಚ್ಚಲಾಗಿತ್ತು. ಇಂತಹ ಸನ್ನಿವೇಶಗಳು ಮರುಕಳಿಸದಂತೆ ನಾವು ನಮ್ಮ ಪಡೆಗಳನ್ನು ಸಿದ್ಧಪಡಿಸಿದ್ದೇವೆ. ವಾಪಸಾಗುವಂತೆ ಪ್ರತಿಭಟನಾಕಾರರಿಗೆ ಮನವರಿಕೆ ಮಾಡಿಕೊಡುತ್ತೇವೆ,’’ ಎಂದು ಹೇಳಿದ್ದಾರೆ.
“ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳು ಹೊಸ ಸಂಸತ್ ಭವನದ ಬಳಿ ತಮ್ಮ ‘ಮಹಿಳಾ ಮಹಾಪಂಚಾಯತ್’ ನಡೆಸುವುದಾಗಿ ಹೇಳಿದ್ದಾರೆ. ಆದರೆ, ಅದಕ್ಕೆ ಅನಮತಿ ನೀಡಲಾಗಿಲ್ಲ. ಹಾಗಾಗಿ, ಯಾವುದೇ ಪ್ರತಿಭಟನಾಕಾರರಿಗೆ ಹೊಸ ಸಂಸತ್ ಭವನದತ್ತ ತೆರಳಲು ಅವಕಾಶ ನೀಡುವುದಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.