ದೂರದರ್ಶನದ ಮೊದಲ ಇಂಗ್ಲಿಷ್ ಸುದ್ದಿ ನಿರೂಪಕರಲ್ಲಿ ಒಬ್ಬರಾಗಿದ್ದ ಗೀತಾಂಜಲಿ ಅಯ್ಯರ್ ಬುಧವಾರ ನಿಧನರಾಗಿದ್ದಾರೆ.
1971ರಲ್ಲಿ ದೂರದರ್ಶನಕ್ಕೆ ಸೇರಿದ್ದ ಅಯ್ಯರ್, ಮೂರು ದಶಕಗಳ ವೃತ್ತಿಜೀವನದಲ್ಲಿ ನಾಲ್ಕು ಬಾರಿ ಅತ್ಯುತ್ತಮ ನಿರೂಪಕಿ ಪ್ರಶಸ್ತಿಯನ್ನು ಪಡೆದಿದ್ದರು.
ಅತ್ಯುತ್ತಮ ಮಹಿಳಾ ಸಾಧಕರಿಗೆ ನೀಡಲಾಗುವ ʻಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿʼಯನ್ನು1989 ರಲ್ಲಿ ಪಡೆದಿದ್ದ ಗೀತಾಂಜಲಿ ಅಯ್ಯರ್, ವರ್ಲ್ಡ್ ವೈಡ್ ಫಂಡ್ನ ಭಾರತದ ಪ್ರಮುಖ ದಾನಿಗಳ ಮುಖ್ಯಸ್ಥರಾಗಿದ್ದರು.
ಕೋಲ್ಕತ್ತಾದ ಲೊರೆಟೊ ಕಾಲೇಜಿನಲ್ಲಿ ಇಂಗ್ಲಿಷ್ನಲ್ಲಿ ಪದವಿ ಪೂರ್ತಿಗೊಳಿಸಿದ್ದ ಅಯ್ಯರ್, ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಿಂದ ಡಿಪ್ಲೊಮಾ ಪಡೆದಿದ್ದರು.ದೂರದರ್ಶನದಲ್ಲಿ ಸುದ್ದಿ ನಿರೂಪಕಿಯಾಗಿ ಯಶಸ್ವಿ ವೃತ್ತಿಜೀವನದ ನಂತರ, ಕಾರ್ಪೊರೇಟ್ ಸಂವಹನ, ಸರ್ಕಾರಿ ಸಂಪರ್ಕ ಮತ್ತು ಮಾರ್ಕೆಟಿಂಗ್ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದರು. ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ನಲ್ಲಿ ಸಲಹೆಗಾರರಾಗಿದ್ದ ಗೀತಾಂಜಲಿ ಅಯ್ಯರ್, “ಖಂಡಾನ್” ಧಾರಾವಾಹಿಯಲ್ಲಿ ನಟಿಸಿದ್ದಾರೆ.