- ಪಾಸ್ಪೋರ್ಟ್ ಸಂಬಂಧ ರಾಹುಲ್ ಗಾಂಧಿ ಅರ್ಜಿ ವಿಚಾರಣೆ ಮುಂದೂಡಿದ ನ್ಯಾಯಾಲಯ
- ಸಂಸದ ಸ್ಥಾನದಿಂದ ಅನರ್ಹಗೊಂಡು ರಾಜತಾಂತ್ರಿಕ ದಾಖಲೆ ಮರಳಿಸಿದ್ದ ರಾಹುಲ್ ಗಾಂಧಿ
ಹೊಸ ಸಾಮಾನ್ಯ ಪಾಸ್ಪೋರ್ಟ್ ನೀಡಲು ಅನುಮತಿ ಕೋರಿ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿ ಉತ್ತರ ನೀಡಲು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ನ್ಯಾಯಾಲಯ ಬುಧವಾರ(ಮೇ 24) ಅನುಮತಿ ನೀಡಿದೆ.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಆರೋಪಿಯಾಗಿರುವ ಕಾರಣ ರಾಹುಲ್ ಗಾಂಧಿಯವರಿಗೆ ಸಾಮಾನ್ಯ ಪಾಸ್ಪೋರ್ಟ್ ದೊರೆತಿರಲಿಲ್ಲ. ಇದೀಗ, ಹೊಸದಾಗಿ ಪಾಸ್ಪೋರ್ಟ್ ಪಡೆಯುವ ಸಂಬಂಧ ಅವರು ನ್ಯಾಯಾಲಯದಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಇಲ್ಲಿನ ಸ್ಥಳೀಯ ನ್ಯಾಯಾಲಯ ಮೇ 26ಕ್ಕೆ ಮುಂದೂಡಿದೆ.
ರಾಹುಲ್ ಗಾಂಧಿ ವಿರುದ್ಧದ ಪ್ರಕರಣಗಳು ನ್ಯಾಯಾಲಯದ ಮುಂದೆ ಬಾಕಿಯಿರುವುದರಿಂದ ಅವರಿಗೆ ಪ್ರಯಾಣಿಸಲು ಅವಕಾಶ ನೀಡುವುದರಿಂದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಸ್ವಾಮಿ ವಾದಿಸಿದರು. ಆದರೆ, ರಾಹುಲ್ ಗಾಂಧಿ ಪರ ವಾದ ಮಂಡಿಸಿದ ವಕೀಲ ತರನ್ನುಮ್ ಚೀಮಾ, “ರಾಹುಲ್ ಅವರಿಗೆ ನ್ಯಾಯಾಲಯ ಯಾವುದೇ ಪ್ರಯಾಣದ ನಿರ್ಬಂಧವನ್ನು ವಿಧಿಸಿಲ್ಲ” ಎಂದು ಹೇಳಿದರು.
ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರು, “ಪ್ರಯಾಣದ ಹಕ್ಕು ಮೂಲಭೂತ ಹಕ್ಕು. 2015ರ ಪ್ರಕಾರ ವಿಚಾರಣಾ ನ್ಯಾಯಾಲಯದಿಂದ ಜಾಮೀನು ಪಡೆದಾಗ ರಾಹುಲ್ ಗಾಂಧಿ ಅವರಿಗೆ ಯಾವುದೇ ನಿರ್ಬಂಧವನ್ನು ವಿಧಿಸಲಾಗಿಲ್ಲ” ಎಂದು ಹೇಳಿದರು. ಈ ನಡುವೆ, ನ್ಯಾಯಾಲಯವು ಸ್ವಾಮಿ ಅವರಿಗೆ ಲಿಖಿತ ಉತ್ತರವನ್ನು ಸಲ್ಲಿಸಲು ಅವಕಾಶ ನೀಡಿದ್ದು, ಮೇ 26ರಂದು ಹೆಚ್ಚಿನ ವಿಚಾರಣೆ ನಡೆಸುವುದಾಗಿ ಹೇಳಿದೆ.
ಸಂಸದ ಸ್ಥಾನದಿಂದ ಅನರ್ಹರಾದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ ಅನ್ನು ಮರಳಿಸಿದ್ದು, ಹೊಸದಾಗಿ ಸಾಮಾನ್ಯ ಪಾಸ್ಪೋರ್ಟ್ ಪಡೆಯುವುದು ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಅವರು ‘ನಿರಪೇಕ್ಷಣಾ ಪತ್ರ’ ನೀಡುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಮಾನಹಾನಿ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯದಿಂದ ಶಿಕ್ಷೆಗೆ ಒಳಗಾಗಿರುವ ರಾಹುಲ್ ಗಾಂಧಿ ಅವರು ಕೆಲವು ತಿಂಗಳ ಹಿಂದೆ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು. ಇದರ ಬೆನ್ನಲ್ಲೇ ಅವರು ರಾಜತಾಂತ್ರಿಕ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಈ ಕಾರಣದಿಂದ ಅವರು ‘ಸಾಮಾನ್ಯ ಪಾಸ್ಪೋರ್ಟ್ ಪಡೆದುಕೊಳ್ಳಲು ‘ನಿರಪೇಕ್ಷಣಾ ಪತ್ರ’ ನೀಡುವಂತೆ ಕೋರಿ ಮಂಗಳವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಕೇಜ್ರೀವಾಲ್ ಸರ್ಕಾರದ ವಿರುದ್ಧ ಮೋದಿ ಸೇಡಿನ ಕ್ರಮ
ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ವೈಭವ್ ಮೆಹ್ತಾ ಅವರು ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದ್ದಾರೆ. ಅರ್ಜಿದಾರರ ಸಂಸತ್ ಸದಸ್ಯತ್ವವು 2023ರ ಮಾರ್ಚ್ನಲ್ಲಿ ಅಂತ್ಯಗೊಂಡಿದೆ. ಅದರಂತೆ ಅವರು ರಾಜತಾಂತ್ರಿಕ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಇದೀಗ ಹೊಸದಾಗಿ ಸಾಮಾನ್ಯ ಪಾಸ್ಪೋರ್ಟ್ ಪಡೆಯುವುದಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅದಕ್ಕಾಗಿ ನ್ಯಾಯಾಲಯವು ಅನುಮತಿ ಹಾಗೂ ನಿರಪೇಕ್ಷಣಾ ಪತ್ರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ನ್ಯಾಯಾಲಯವು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಹಾಗೂ ಇತರರಿಗೆ 2015ರ ಡಿಸೆಂಬರ್ 19ರಂದು ಜಾಮೀನು ನೀಡಿದೆ.