- ದೆಹಲಿ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಬಿಜೆಪಿ ಸೇರಿದ ಅನಿಲ್ ಆ್ಯಂಟನಿ
- ಪುತ್ರ ಅನಿಲ್ ಆ್ಯಂಟನಿ ನಿರ್ಧಾರ ತಪ್ಪು ಎಂದ ಕೇರಳದ ಮಾಜಿ ಸಿಎಂ
ಹಿರಿಯ ಕಾಂಗ್ರೆಸ್ ನಾಯಕ, ಕೇರಳ ಮಾಜಿ ಮುಖ್ಯಮಂತ್ರಿ ಎ ಕೆ ಆ್ಯಂಟನಿ ಅವರ ಪುತ್ರ ಅನಿಲ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ದೆಹಲಿಯ ಬಿಜೆಪಿಯ ಕೇಂದ್ರ ಕಚೇರಿಯಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಅವರ ಸಮ್ಮುಖದಲ್ಲಿ ಅನಿಲ್ ಆ್ಯಂಟನಿ ಕಮಲ ಪಕ್ಷ ಸೇರಿದ್ದಾರೆ.
2002ರ ಗುಜರಾತ್ ಗಲಭೆಯಲ್ಲಿ ನರೇಂದ್ರ ಮೋದಿ ಪಾತ್ರವಿರುವ ಬಿಬಿಸಿ ಸಾಕ್ಷ್ಯಚಿತ್ರದ ಬಗ್ಗೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ ಕಾರಣ ಅನಿಲ್ ಆ್ಯಂಟನಿ ಪಕ್ಷದ ನಾಯಕರಿಂದ ಟೀಕೆಗೊಳಗಾಗಿದ್ದರು. ಈ ಹಿನ್ನಲೆಯಲ್ಲಿ ಅವರು ಜನವರಿಯಲ್ಲಿ ಕಾಂಗ್ರೆಸ್ ತ್ಯಜಿಸಿದ್ದರು.
ಅನಿಲ್ ದೆಹಲಿಯ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರಾದ ಪಿಯೂಶ್ ಗೋಯಲ್, ವಿ ಮುರಳೀಧರನ್ ಹಾಗೂ ಕೇರಳ ಬಿಜೆಪಿ ಮುಖ್ಯಸ್ಥ ಕೆ ಸುರೇಂದ್ರನ್ ಭಾಗಿಯಾಗಿದ್ದರು.
ತಪ್ಪು ನಿರ್ಧಾರವೆಂದ ಎ ಕೆ ಆ್ಯಂಟನಿ
ಪುತ್ರ ಅನಿಲ್ ಆ್ಯಂಟನಿ ಬಿಜೆಪಿ ಸೇರ್ಪಡೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಹಿರಿಯ ನಾಯಕ ಎ ಕೆ ಆ್ಯಂಟನಿ, “ಅನಿಲ್ನ ತಪ್ಪು ನಿರ್ಧಾರದಿಂದ ನನಗೆ ಬಹಳ ನೋವಾಗಿದೆ. ವಿವಿಧತೆಯಲ್ಲಿ ಏಕತೆ ಮತ್ತು ಧಾರ್ಮಿಕ ಸಾಮರಸ್ಯವು ಭಾರತದ ಪರಂಪರೆಯಾಗಿದೆ. 2014ರಲ್ಲಿ ಮೋದಿ ಸರ್ಕಾರ ಬಂದ ನಂತರ ವ್ಯವಸ್ಥಿತವಾಗಿ ಏಕತೆ ಮತ್ತು ಜಾತ್ಯಾತೀತ ತತ್ವವನ್ನು ಹಾಳುಮಾಡುತ್ತಿದ್ದಾರೆ. ಬಿಜೆಪಿಯು ಏಕರೂಪತೆಯ ಮೇಲೆ ನಂಬಿಕೆಯಿರಿಸಿದೆ. ಅವರು ದೇಶದ ಸಂವಿಧಾನ ಮೌಲ್ಯಗಳನ್ನು ಹಾಳುಮಾಡುತ್ತಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ?: ತಾಜ್ಮಹಲ್ ಧ್ವಂಸಗೊಳಿಸಿ ದೇವಸ್ಥಾನ ನಿರ್ಮಾಣಕ್ಕೆ ಬಿಜೆಪಿ ಶಾಸಕನ ಒತ್ತಾಯ
ಬಿಬಿಸಿ ಪ್ರಾಯೋಜಿತ ಚಾನಲ್ ಎಂದಿದ್ದ ಅನಿಲ್ ಆ್ಯಂಟನಿ
ಬಿಬಿಸಿಯು ಭಾರತದ ವಿರುದ್ಧ ಪೂರ್ವಾಗ್ರಹಗಳ ಇತಿಹಾಸ ಹೊಂದಿರುವ ಪ್ರಾಯೋಜಿತ ಚಾನಲ್ ಆಗಿದ್ದು, ದೇಶದ ಸಾರ್ವಭೌಮತೆಯನ್ನು ಹಾಳು ಮಾಡುತ್ತಿದೆ. ಭಾರತದ ಜನರು ಭಾರತೀಯ ಸಂಸ್ಥೆಗಳ ಮೇಲೆ ಬಿಬಿಸಿಯ ಅಭಿಪ್ರಾಯಗಳಿಗೆ ಆದ್ಯತೆ ನೀಡಿ ದೇಶವನ್ನು ದುರ್ಬಲಗೊಳಿಸುವುದು ಅಪಾಯಕಾರಿ ಎಂದುಅನಿಲ್ ಟ್ವೀಟ್ ಮಾಡಿದ್ದರು.
ಅನಿಲ್ ಹಲವು ಬಾರಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಲೇ ಬಂದಿದ್ದರು. 2024ರ ಸಾರ್ವತ್ರಿಕ ಚುನಾವಣೆ ಸಂದರ್ಭ, “ಕಾಂಗ್ರೆಸ್ ಅನ್ನು ಕಸದ ಬುಟ್ಟಿಗೆ ಹಾಕಲು ದೇಶದ ಜನತೆಗೆ ಉತ್ತಮ ಅವಕಾಶ” ಎಂದು ಹೇಳಿದ್ದರು. ಇದಾದ ಬಳಿಕ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಬಹಿರಂಗವಾಗಿ ಬೆಂಬಲ ನೀಡಿದ್ದರು.
ವಾಹಿನಿಯೊಂದರ ಚರ್ಚೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹೇಳಿಕೆಯನ್ನು ಟೀಕಿಸಿದ್ದ ಅನಿಲ್ ಆ್ಯಂಟನಿ, “ಸ್ಮೃತಿ ಅವರು ಸ್ವತಃ ಪ್ರತಿಭೆಯಿಂದ ಮೇಲೆ ಬಂದ ಮಹಿಳಾ ನಾಯಕಿ” ಎಂದಿದ್ದರು.