- ಶಾಲಾ ಪಠ್ಯದಲ್ಲಿನ ಚಕ್ರವರ್ತಿ ಸೂಲಿಬೆಲೆ ಪಠ್ಯ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ಅಸಮಾಧಾನ
- ನಮ್ಮ ಮಕ್ಕಳಿಗೆ ಗೌರವಯುತ ನೀತಿಯುಕ್ತ ಶಿಕ್ಷಣ ಕೊಡಿಸುವ ಬದ್ದತೆ ನಮಗಿದೆ ಎಂದ ಸಚಿವ
ನಮ್ಮ ಮಕ್ಕಳಿ ಗೌರವಯುತ ಹಾಗೂ ಜವಾಬ್ದಾರಿಯುತ ನೈತಿಕ ಶಿಕ್ಷಣವನ್ನು ನಾವು ಕೊಡಿಸುತ್ತೇವೆ. ವಾಟ್ಸ್ಆ್ಯಪ್ ಯೂನಿವರ್ಸಿಟಿಗಳಿಂದ ಪಿಎಚ್ಡಿ ಪಡೆದು ಬಂದವರ ಪಾಠ ಓದುವ ದುರಂತ ಅವರಿಗೆ ಎದುರಾಗದಿರಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಚಕ್ರವರ್ತಿ ಸೂಲಿಬೆಲೆ ಪಠ್ಯ ತೆಗೆಯುವ ವಿಚಾರಕ್ಕೆ ಸ್ಪಷ್ಟೀಕರಣ ನೀಡಿ, ಅವರ ವಿರುದ್ಧ ಹರಿಹಾಯ್ದರು.
ಪಠ್ಯ ಪರಿಷ್ಕರಣೆ ಮಾಡುವುದರಲ್ಲಿ ಎರಡು ಮಾತಿಲ್ಲ. ಈ ವೇಳೆ ಚಕ್ರವರ್ತಿ ಸೂಲಿಬೆಲೆ ಬರೆದಿರುವ ಪಠ್ಯ ತೆಗೆಯುತ್ತೇವೆ. ಅವನು ಯಾವ ಪಿಹೆಚ್ಡಿ ಮಾಡಿದ್ದಾರೆ. ಇವರೆಲ್ಲಾ ವಾಟ್ಸ್ಆ್ಯಪ್ ಯೂನಿವರ್ಸಿಟಿಯಲ್ಲಿ ಓದಿದವರು ಎಂದರು.
ನಾನು ಆತನ ಪಠ್ಯವನ್ನು ಓದಿಲ್ಲ. ಹಾಗೆಯೇ ಸೂಲಿಬೆಲೆ ಬರೆದಿರುವ ಪಠ್ಯವನ್ನು ನಮ್ಮ ಮಕ್ಕಳು ಓದುವುದು ಬೇಡ. ಯಾವ ಆಧಾರದಲ್ಲಿ ಸೂಲಿಬೆಲೆ ಬರೆದಿರುವ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಸೇರ್ಪಡೆ ಮಾಡಿದ್ದರು ಎಂದು ಬಿಜೆಪಿಯವರು ತಿಳಿಸಲಿ ಎಂದು ಪ್ರಿಯಾಂಕ್ ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ?:ಜೂನ್ 30ರೊಳಗೆ ಎಲ್ಲ 224 ಶಾಸಕರಿಗೂ ಆಸ್ತಿ ವಿವರ ಸಲ್ಲಿಸಲು ಲೋಕಾಯುಕ್ತ ಗಡುವು
ಭಗತ್ ಸಿಂಗ್ ಬಗ್ಗೆ ಅಪಾರವಾದ ಗೌರವ ಇದೆ. ಅವರನ್ನೂ ಒಳಗೊಂಡಂತೆ ಹಲವು ಪ್ರಮುಖರ ಇತಿಹಾಸ ನಮ್ಮ ಬಳಿ ಇದೆ. ಅವರ ನಿಜವಾದ ಇತಿಹಾಸ ನಾವು ಹೇಳುತ್ತೇವೆ. ಇತಿಹಾಸವನ್ನು ತಿರುಚದೆಯೇ ನೈಜವಾಗಿ ಇರುವ ಪಾಠವನ್ನು ನಾವು ಸೇರಿಸುತ್ತೇವೆ, ಸೂಲಿಬೆಲೆಗಿಂತ ಒಳ್ಳೆ ಸಾಹಿತಿಗಳು ನಮ್ಮಲ್ಲಿ ಇಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಸೂಲಿಬೆಲೆ ಕಟ್ಟು ಕತೆಗಳನ್ನು ಹೇಳುತ್ತಾರೆ. ವಾಸ್ತವವನ್ನು ಎಂದೂ ಹೇಳಿಲ್ಲ, ಹೀಗಿರುವಾಗ ಇಂತಹವನ ಪುಸ್ತಕವನ್ನು ನಮ್ಮ ಮಕ್ಕಳು ಓದಬೇಕಾ? ಈ ಪಾಠ ನಮ್ಮ ಮಕ್ಕಳು ಕಲಿತರೆ ಭವಿಷ್ಯ ಏನಾಗಬೇಕು ಎಂದು ಒಂದು ಕ್ಷಣ ಯೋಜಿಸಿದ್ದೀರಾ ಎಂದರು.
ಪಠ್ಯದಲ್ಲಿ ಯಾವುವು ಕೇಸರಿಕರಣವಾಗಿವೆಯೋ ಅವನ್ನೆಲ್ಲಾ ತೆಗೆದು ಮೌಲ್ಯಯುತ ಪಠ್ಯ ಕ್ರಮ ರೂಪಿಸುತ್ತೇವೆ ಎಂದು ಸಚಿವರು ಹೇಳಿದರು.