ಕರ್ನಾಟಕ ವಿಧನಸಭಾ ಚುನಾವಣೆಯಲ್ಲಿ ರಾಜ್ಯದ ಗಮನ ಸೆಳೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿತ್ತು.
ಪ್ರಖರ ಹಿಂದುತ್ವವಾದಿ ಅರುಣ್ ಕುಮಾರ್ ಪುತ್ತಿಲ ಮತ್ತು ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪರವರ ನಡುವಿನ ಪೈಪೋಟಿಯಿಂದಾಗಿ, ಕಾಂಗ್ರೆಸ್ನ ಅಶೋಕ್ ಕುಮಾರ್ ರೈ ಗೆಲುವಿನ ಹಾದಿ ಸುಗಮವಾಗಿತ್ತು.
ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಅರುಣ್ ಕುಮಾರ್ ಪುತ್ತಿಲ ಬೆಂಬಲಿಗರು ಮತ್ತು ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮತ್ತಷ್ಟು ಜೋರಾಗಿದೆ.
ಪುತ್ತೂರು ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಸೋಮವಾರ ಬ್ಯಾನರ್ ಒಂದು ಪ್ರತ್ಯಕ್ಷವಾಗಿದ್ದು, ಅದರಲ್ಲಿ ಮಾಜಿ ಸಿಎಂ ಸದಾನಂದ ಗೌಡ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಲಾಗಿತ್ತು. ಜೊತೆಗೆ ʻಭಾವಪೂರ್ಣ ಶ್ರದ್ಧಾಂಜಲಿ ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರದ್ಧಾಂಜಲಿ. ನೊಂದ ಹಿಂದೂ ಕಾರ್ಯಕರ್ತರು’ ಎಂದು ಬ್ಯಾನರ್ನಲ್ಲಿ ಬರೆಯಲಾಗಿತ್ತು.
ಈ ಬ್ಯಾನರ್ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪರ-ವಿರೋಧದ ಚರ್ಚೆ ಜೋರಾಗಿದೆ.
ಈ ಸುದ್ದಿ ಓದಿದ್ದೀರಾ?; ದಕ್ಷಿಣ ಕನ್ನಡ | ಬಿಜೆಪಿ ಭದ್ರಕೋಟೆ ಮತ್ತಷ್ಟು ಸುಭದ್ರ; ಪುತ್ತೂರಲ್ಲಿ ಸೋತ ಪುತ್ತಿಲ
ಬಿಜೆಪಿ ಪ್ರತಿಭಟನೆ
ರಾಜ್ಯ ಬಿಜೆಪಿ ನಾಯಕರಿಗೆ ಶ್ರದ್ಧಾಂಜಲಿ ಕೋರಿ ಬ್ಯಾನರ್ ಅಳವಡಿಸಿರುವುದನ್ನು ವಿರೋಧಿಸಿ ಮಾಜಿ ಶಾಸಕ ಸಂಜೀವ ಮಠಂದೂರು, ಆಶಾ ತಿಮ್ಮಪ್ಪ ನೇತೃತ್ವದಲ್ಲಿ ತಾಲೂಕು ಆಡಳಿತ ಸೌಧದ ಎದುರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಮಾಜಿ ಶಾಸಕ ಮಠಂದೂರು, ರಾಜ್ಯ ಬಿಜೆಪಿ ನಾಯಕರ ತೇಜೋವಧೆ ಮಾಡಿದ ಹಿಂದೂ ಕಾರ್ಯಕರ್ತರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ದಾರೆ.
ಇದಕ್ಕೂ ಮೊದಲು ಪುತ್ತೂರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ ಬಿಜೆಪಿ ನಿಯೋಗ, ಕೃತ್ಯ ಎಸಗಿದ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದೆ.
ಬ್ಯಾನರ್ ತೆರವು, ಇಬ್ಬರ ಬಂಧನ
ಸರ್ಕಾರಿ ಬಸ್ ನಿಲ್ದಾಣದ ಬಳಿ ಬಿಜೆಪಿ ನಾಯಕರ ಫೋಟೋಗಳನ್ನು ಹಾಕಿ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು., ಚಪ್ಪಲಿ ಹಾರ ಹಾಕಿರುವ ಬ್ಯಾನರ್ ಅನ್ನು ನಗರಸಭೆಯಿಂದ ತೆರವುಗೊಳಿಸಲಾಗಿದೆ. ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ನರಿಮೊಗರು ಸಮೀಪದ ವಿಶ್ವನಾಥ್ ಮತ್ತು ಮಾಧವ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.