- ಮೋಹಿತ್ ಬೌಲಿಂಗ್ನಲ್ಲಿ ಹಾರ್ದಿಕ್ ಹಸ್ತಕ್ಷೇಪದಿಂದ ಸೋಲು ಟೀಕೆ
- ನೀರು ಕಳುಹಿಸಿ ಕೊಟ್ಟಿದ್ದನ್ನ ಪ್ರಶ್ನಿಸಿದ ಸುನೀಲ್ ಗವಾಸ್ಕರ್
ಐಪಿಎಲ್ 16ನೇ ಆವೃತ್ತಿಯ ಫೈನಲ್ ಮುಗಿದು ದಿನ ಕಳೆದರೂ ಅಭಿಮಾನಿಗಳು ಕೊನೆಯ ಓವರ್ನ ಗುಂಗಿನಿಂದ ಇನ್ನೂ ಹೊರ ಬಂದಿಲ್ಲ. ಮೋಹಿತ್ ಶರ್ಮಾ ಅವರು ಎಸೆದ ಕೊನೆಯ ಓವರ್ ಈಗಲೂ ಚರ್ಚೆಯಾಗುತ್ತಿದೆ.
ಮಳೆಯಿಂದಾಗಿ ಅಡಚಣೆಗೊಳಗಾದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಗೆಲುವಿಗೆ, ಡಕ್ವರ್ಥ್ ಲೂಯಿಸ್ ನಿಯಮಾನುಸಾರ 15 ಓವರ್ಗಳಲ್ಲಿ 171 ರನ್ ಗುರಿ ನೀಡಲಾಗಿತ್ತು. ಅಂತಿಮ ಓವರ್ನಲ್ಲಿ 13 ರನ್ಗಳ ಗುರಿ ಸಿಎಸ್ಕೆ ಮುಂದಿತ್ತು. ಆದರೆ ಗುಜರಾತ್ ಟೈಟನ್ಸ್ ಪರವಾಗಿ ಕೊನೆಯ ಓವರ್ ಎಸೆದ ಅನುಭವಿ ವೇಗಿ ಮೋಹಿತ್ ಶರ್ಮಾ, ಮೊದಲ 4 ಎಸೆತಗಳಲ್ಲಿ ಕೇವಲ 3 ರನ್ ಬಿಟ್ಟುಕೊಟ್ಟಿದ್ದರು. ಮೋಹಿತ್ ಅವರ ಬಲವಾದ ಯಾರ್ಕರ್ ಎಸೆತಗಳನ್ನು ಎದುರಿಸಲು ಶಿವಂ ದುಬೆ ಮತ್ತು ರವೀಂದ್ರ ಜಡೇಜಾ ಬಹಳ ಕಷ್ಟಪಟ್ಟಿದ್ದರು.
ಅಂತಿಮ ಓವರ್ನ 4 ಎಸೆತಗಳ ಬಳಿಕ ಗುಜರಾತ್ ಗೆಲುವಿನಂಚಿನಲ್ಲಿತ್ತು. ಚೆನ್ನೈ ತಂಡದ 6ನೇ ಫೈನಲ್ ಸೋಲಿಗೆ ಕ್ಷಣಗಣನೆ ಆರಂಭವಾಗಿತ್ತು. ಆದರೆ ಈ ವೇಳೆ ಗುಜರಾತ್ ಟೈಟನ್ಸ್ ಅನವಶ್ಯಕವಾಗಿ ʻಡ್ರಿಂಕ್ಸ್ ಬ್ರೇಕ್ʼ ತೆಗೆದುಕೊಂಡಿತು. ಕೋಚ್ ನೆಹ್ರಾ ಅವರ ʻಸಂದೇಶʼವನ್ನು ಇತರೆ ಆಟಗಾರ, ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಬೌಲರ್ ಮೋಹಿತ್ ಶರ್ಮಾಗೆ ತಲುಪಿಸಿದ್ದರು. ಇದಾದ ಬಳಿಕ ನಾಯಕನ ಸಲಹೆ ಕೇಳಿದ ಮೋಹಿತ್ ಮುಖ ಸಪ್ಪೆಯಾಗಿತ್ತು. ತನ್ನ ಬೌಲಿಂಗ್ ಟ್ರ್ಯಾಕ್ ಅನ್ನು ಒಲ್ಲದ ಮನಸ್ಸಿನಿಂದ ಶರ್ಮಾ ಬದಲಿಸಿದ್ದರು.
ಮೊದಲ 4 ಎಸೆತಗಳನ್ನು ಅತ್ಯುತ್ತಮ ಯಾರ್ಕರ್ ಆಗಿ ಪರಿವರ್ತಿಸಿದ್ದ ಮೋಹಿತ್, 5ನೇ ಎಸೆತವನ್ನು ಬ್ಯಾಟ್ ಎದುರಿನಲ್ಲಿ ಸಿಕ್ಸರ್ ಬಾರಿಸಲು ಸುಲಭವಾಗುವಂತೆ ಮತ್ತು ಅಂತಿಮ ಎಸೆತವನ್ನು ಫುಲ್ಟಾಸ್ ಆಗಿ ಎಸೆದಿದ್ದರು. ಇದು ಜಡೇಜಾ ಅವರಿಗೆ ಸಿಕ್ಸ್ ಮತ್ತು ಫೋರ್ ಹೊಡೆಯಲು ವರವಾಗಿ ಪರಿಣಮಿಸಿತ್ತು. ಪಂದ್ಯದ ಫಲಿತಾಂಶ ಅಂತಿಮ ಎರಡು ಎಸೆತಗಳಲ್ಲಿ ತಲೆಕೆಳಗಾಗಿತ್ತು.
ಪಂದ್ಯದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಗುಜರಾತ್ ಟೈಟನ್ಸ್ ನಡೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇದೀಗ ಮಾಜಿ ಕ್ರಿಕೆಟ್ ದಿಗ್ಗಜ ಆಟಗಾರರಾದ ವಿರೇಂದ್ರ ಸೆಹ್ವಾಗ್ ಮತ್ತು ಸುನಿಲ್ ಗವಾಸ್ಕರ್ ಅವರೂ ಗುಜರಾತ್ ನಾಯಕ ಹಾರ್ದಿಕ್ ಪಾಂಡ್ಯ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಹಾರ್ದಿಕ್ ಹಸ್ತಕ್ಷೇಪದಿಂದ ಸೋಲು ಎಂದ ಸೆಹ್ವಾಗ್
ʻಕ್ರಿಕ್ಬಝ್ʼಗೆ ನೀಡಿದ ಸಂದರ್ಶನದಲ್ಲಿ ಸೆಹ್ವಾಗ್, “ಮೋಹಿತ್ ಓವರ್ನ ಅಂತಿಮ ಎರಡು ಎಸೆತಗಳಲ್ಲಿ ಲೈನ್ ಮತ್ತು ಲೆಂತ್ ತಪ್ಪಲು ಹಾರ್ದಿಕ್ ಅವರ ಹಸ್ತಕ್ಷೇಪವೇ ಕಾರಣ. ಹಾರ್ದಿಕ್ ಸಲಹೆ ಬೌಲರ್ ಯೋಜನೆಯನ್ನು ಅಸ್ತವ್ಯಸ್ತಗೊಳಿಸಿತು” ಎಂದಿದ್ದಾರೆ.
“ಅತ್ಯುತ್ತಮ ಯಾರ್ಕರ್ ಎಸೆತಗಳನ್ನು ಎಸೆಯುತ್ತಿರುವ ವೇಳೆ ನೀವು ಹೋಗಿ ಬೌಲರ್ ಜೊತೆ ಏಕೆ ಮಾತನಾಡುತ್ತೀರಿ? 2 ಎಸೆತಗಳಲ್ಲಿ 10 ರನ್ಗಳ ಅಗತ್ಯವಿರುವಾಗ, ಅದುವರೆಗಿನ ಯಾರ್ಕರ್ ಎಸೆತವನ್ನೇ ಮುಂದುವರಿಸಬೇಕು ಎಂಬುದು ಬೌಲರ್ ಅರಿವಿನಲ್ಲಿರುತ್ತದೆ. ಹೀಗಿರುವಾಗ ನೀವು ಅವನ ಸಮಯವನ್ನು ಏಕೆ ವ್ಯರ್ಥ ಮಾಡುತ್ತೀರಿ? ಮೋಹಿತ್ ಹೆಚ್ಚಿನ ರನ್ ಬಿಟ್ಟುಕೊಟ್ಟಿದ್ದರೆ ನಾಯಕ ಸಲಹೆ ಕೊಡಬಹುದಿತ್ತು. ಆದರೆ ಬೌಲರ್ ತನ್ನ ಕೆಲಸವನ್ನು ಅತ್ಯುತ್ತಮವಾಗಿ ಮಾಡುತ್ತಿರುವ ವೇಳೆ ಆ ಓವರ್ ಅನ್ನು ಶೀಘ್ರವಾಗಿ ಮುಗಿಸಬೇಕು” ಎಂದು ಸೆಹ್ವಾಗ್ ಹೇಳಿದ್ದಾರೆ.
“ಕೊನೆಯ ಎರಡು ಎಸೆತಗಳಲ್ಲಿ ಕ್ಷೇತ್ರ ರಕ್ಷಣೆಯಲ್ಲಿ ಯಾವುದಾದರೂ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾ ಎಂಬ ಕಾಳಜಿಯೊಂದಿಗೆ ನಾಯಕ ಮಾತನಾಡಿರಬಹುದು. ಆದರೆ, ಹಾರ್ದಿಕ್ ಸ್ಥಾನದಲ್ಲಿ ನಾನಿರುತ್ತಿದ್ದರೆ ಬೌಲರ್ಗೆ ತೊಂದರೆ ಕೊಡುತ್ತಿರಲಿಲ್ಲ” ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಈ ದಿನ ಸಂಪಾದಕೀಯ | ಹದಗೆಟ್ಟ ರಸ್ತೆ, ಜಡವಾದ ವ್ಯವಸ್ಥೆ; ತಿರುಗುತ್ತಲೇ ಇದೆ ಸಾವಿನ ಚಕ್ರ
ನೀರು ಕಳುಹಿಸಿ ಕೊಟ್ಟಿದ್ದನ್ನು ಪ್ರಶ್ನಿಸಿದ ಗವಾಸ್ಕರ್
“ಅಂತಿಮ ಓವರ್ನ ಮೊದಲ 4 ಎಸೆತಗಳನ್ನು ಮೋಹಿತ್ ಅತ್ಯುತ್ತಮವಾಗಿಯೇ ಪೂರ್ಣಗೊಳಿಸಿದ್ದರು. ಆದರೆ ʻವಿಚಿತ್ರ ಕಾರಣʼಗಳಿಗಾಗಿ, ಬೌಲರ್ಗೆ ನೀರು ಕುಡಿಯಲು ಬ್ರೇಕ್ ನೀಡಲಾಯಿತು. ಬೌಲರ್ ಅತ್ಯುತ್ತಮ ಲಯ ಮತ್ತು ಆತ್ಮವಿಶ್ವಾಸದಲ್ಲಿರುವಾಗ ಯಾರೂ ಅವನಿಗೆ ಏನನ್ನೂ ಹೇಳಬೇಕಾಗಿಲ್ಲ. ಅವನ ಬಳಿ ಹೋಗುವುದು, ಮಾತನಾಡುವುದು ಸರಿಯಲ್ಲ. ನಾಯಕ ಮತ್ತು ಕೋಚ್ ಸಲಹೆಯಿಂದ ಬೌಲರ್ ಮೋಹಿತ್ ಶರ್ಮಾ ಅಸಮಾಧಾನಗೊಂಡವರಂತೆ ಕಾಣಿಸುತ್ತಿದ್ದರು” ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.