- ₹1.50 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಹೇಳಿದ್ದ ಬಿಬಿಎಂಪಿ
- ಅನುದಾನ ಬಿಡುಗಡೆಗೆ ಏ.1ರಿಂದ ಆರ್ಥಿಕ ವರ್ಷ ಆರಂಭ ಎಂದು ಸಬೂಬು
ಈ ವರ್ಷ ಬೆಂಗಳೂರು ಧರ್ಮರಾಯಸ್ವಾಮಿಯ ಐತಿಹಾಸಿಕ ದ್ರೌಪದಿ ಕರಗ ಉತ್ಸವಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ₹50 ಲಕ್ಷ ಅನುದಾನ ಕಡಿತಗೊಳಿಸಿದೆ. ಈ ಹಿಂದೆ, ₹1.50 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಪಾಲಿಕೆ ಹೇಳಿತ್ತು. ಇದೀಗ, ₹1 ಕೋಟಿ ಅನುದಾನ ನೀಡಿದ್ದು, ಕೊನೆಯ ಹಂತದಲ್ಲಿ ಅನುದಾನ ಕಡಿತಗೊಳಿಸಿದೆ ಎಂದು ಕರಗೋತ್ಸವ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಅನುದಾನ ಕಡಿತದ ಬಗ್ಗೆ ಈ ದಿನ.ಕಾಮ್ ಜತೆಗೆ ಮಾತನಾಡಿದ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ಕಮಿಟಿ ಅಧ್ಯಕ್ಷ ಸತೀಶ್, “ಇಲ್ಲಿಯವರೆಗೂ 40 ಲಕ್ಷದ 30 ಸಾವಿರ ಹಣವನ್ನು ಬಿಬಿಎಂಪಿ ನೀಡಿದೆ. ಏಪ್ರಿಲ್ 1ರಿಂದ ಆರ್ಥಿಕ ವರ್ಷ ಆರಂಭವಾಗುತ್ತದೆ. ಹಾಗಾಗಿ, ಉಳಿದ ₹75 ಲಕ್ಷ ಏಪ್ರಿಲ್ ತಿಂಗಳು ಕಳೆದಾದ ಮೇಲೆ ಕೊಡುತ್ತೇವೆಂದು ಹೇಳಿದ್ದಾರೆ. ಇನ್ನೂ ಮೂರು ದಿನದಲ್ಲಿ ಕರಗ ಮಹೋತ್ಸವದ ಖರ್ಚು-ವೆಚ್ಚಗಳ ಲೆಕ್ಕ ಹಾಕಿ ಆಡಿಟ್ ವರದಿ ಮಾಡಿ ಬಿಬಿಎಂಪಿಗೆ ನೀಡುತ್ತೇವೆ” ಎಂದರು.