ಕುಂದಾಪುರ ಸೀಮೆಯ ಕನ್ನಡ | ಗಂಜಿ ಊಟದ ಗಮ್ಮತ್ತು

Date:

ನಂಚಕಂಬುಕೆ ಲಿಂಬೆ ಚಟ್ನಿ, ಬದ್ನಿಕಾಯ್ ಬಜ್ಜಿ, ಹಪ್ಪಳ, ಸಂಡಿಗೆ, ಹುರುಳಿ ಅಥ್ವಾ ಬೆಳ್ಳುಳ್ಳಿ ಚಟ್ನಿಪುಡಿ, ಮಾವಿನಕಾಯಿ ಗೊಜ್ಜು, ಹೊಡಿ ತಾಳ್ಳ್ ಒಂದ್ ಬದೆಂಗೆ ಆರೇ. ಒಣ್ಕಟಿ ಜಗ್ ಬಜ್ಜಿ, ಮೀನಿನ ರವಾ ಫ್ರೈ, ಊರ ಕೋಳಿ ಸುಕ್ಕಾ ಇನ್ನೊಂದು ಬದೆಂಗೆ. ಎಲ್ಗರಿಗೂ ಸರಿ-ಸಮ ಹೊಂದು ಊಟ ಅಂದ್ರೆ ಗಂಜಿ ಊಟ ಕಾಣಿ 

ನೀವ್ ಎಂತದೇ ಹೇಳಿ, ಗಂಜಿ ಊಟ ಮಾಡ್ರ್ ಮೇಲೆ ಜೀವಕ್ಕೆ ಆಪು ಹಿತ, ಮನ್ಸಿಗೆ ಆಪು ಖುಷಿ ಬೇರೆ ಊಟದಂಗೆ ಸಿಕ್ಕುದಿಲ್ಲ ಕಾಣಿ. ಬೆಳಗಾತ ಮಾಮುಲಿ ತಿಂಡಿ ತಿಂದ್ರೆ ಇನ್ನೊಂದ್ ಘಳ್ಗಿ ಒಳಗೆ ಹಸು ಆತ್. ಆರೇ ಒಂದ್ ಬಟ್ಲ್ ಗಂಜಿ ತೆಳಿ ಉಂಡ್ರೆ ಮಧ್ಯಾಹ್ನದವರೆಗೂ ಹಸುವೆ ಆತಿಲ್ಲ. ನಮ್ ಬದೆಂಗೆ ಮನೆಂಗೆ ಬೆಳಗಾತ ಎದ್ಕಂಡ್ ದುಡುಕೆ ಹೋಪು ಗಂಡ್ಸ್ರ, ಹೆಂಗ್ಸ್ರ್ ಎಲ್ಲರೂ ಗಂಜಿ ತೆಳಿ ಉಂಡ್ಕಂಡ್ ಹೊರೆ ಹೊಟ್ಟಿ ಗಟ್ಟಿ. ಕೆಲ್ಸ ಮಾಡುವತಿಗೆ ನಿತ್ರಾಣ ಆತಿಲ್ಲಾ. ನಾವೆಲ್ಲಾ ಶಾಲಿಗೆ ಹೋಪಂಗೆ ನಮ್ ಅಮ್ಮಾ ನಮಗೆಲ್ಲಾ ಬೆಳಿಗ್ಗೆ ಕೊಚ್ಚಲಕ್ಕಿ ಗಂಜಿ ಮಾಡಿ ಊಟ ಮಾಡ್ಸಿ ಶಾಲಿಗೆ ಕಳ್ಸತ್ತಿದ್ದಳ್. ನಾವ್ 3-4 ಕಿಲೋಮೀಟರ್ ನೆಡ್ಕಂಡ್ ಹೊಯ್ ಶಾಲೆಂಗೆ ಮಧ್ಯಾಹ್ನದವರೆಗೆ ಆರಾಮ್ ಇರ್ತಿದಿತ್. ಹಸುವೆ ಆತಿರಲ್ಲಾ. ಗಂಜಿ ತೆಳಿ ಯಾವತ್ತೂ ಜೀವಕ್ಕೆ ಶಕ್ತಿ ಕೊಡತ್. ಹಸು ಆಪುದ್ ತಣಿಸತ್ತ್. ಮುಂಚಿನ ಕಾಲ್ದರ್ ಮೂರ್ ಹೊತ್ತೂ ಗಂಜಿ ತೆಳಿ ಉಂಡ್ಕಂಡ್ ಮೈ ಬಗ್ಗಿಸಿ ದುಡ್ಮಿ ಮಾಡ್ತಿದಿರ್ ಕಷ್ಟ ಪಡ್ತಿದಿರ್. ಗಂಜಿ ಊಟ ಮಾಡಿ ನೂರಾರು ಕಾಲ ಬಾಳ್ದರ್ ಇದ್ರ್.

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ಕಲಬುರಗಿ ಸೀಮೆ | ಮಾತು ಮುಗಿವಷ್ಟರಲ್ಲಿ ಅವಳ ಮಗಳು ‘ಮಮ್ಮಿ ಮೈಯಾಗ ದೇವರು ಬರತಾರ’ ಅಂದಳು!

ನಮ್ ಉಡುಪಿಕುಂದಾಪ್ರ ಬದೆಂಗೆ ಯಾರ ಹತ್ರ ಆರೂ ಕೇಂಡ್ ಕಾಣಿ. ಮದಿ ಮನಿ ಗಡ್ಜ್ ಊಟ ಬೇಕಾ ಅಥ್ವಾ ಗಂಜಿ ಮತ್ತೆ ಬೆಳ್ಳುಳ್ಳಿ ಚಟ್ನಿ ಸಾಕಾ ಅಂದ್ಹೇಳಿ. ಅದ್ರಂಗೆ ಹತ್ತರಂಗೆ ಏಳ್ ಜನ ಗಂಜಿ ಊಟವೇ ಸಾಕ್ ಅಂತ್ರ್. ಗಂಜಿ ಊಟದ ರುಚಿಯೇ ಅಂತದ್. ಈಗಿನ ಕಾಲ್ದರ್ ಹೆಚ್ಚಾಯ್ ಗಂಜಿ ಊಟ ಉಂಬು ಖಾಯಸ್ ಮಾಡುದಿಲ್ಲ ಬಿಡಿ. ಗಂಜಿ ಊಟ ಉಂಬರ್ ಬಡವರ, ನಿರ್ಗತಿಕರ ಅಂಬು ಆಲೋಚನಿ ಕೆಲವರ ಮನ್ಸಿನಂಗೆ ಇತ್. ಅದ ಕಾಲಕಾಲಕ್ಕೆ ಬದಲಾವಣೆ ಆತೇ ಇರತ್. ನಿಜ ಹೇಳ್ಕಂದರೆ ಈಗಲೂ ಎರಡ್ ಹೊತ್ತ್ ಗಂಜಿ ಊಟ ಮಾಡುವರೇ ನಿಜವಾದ ಶ್ರೀಮಂತರು. ಈ ಕಾಲದಂಗೆ ಒಳ್ಳೆಯ ಆರೋಗ್ಯ ಇಪ್ಪನೇ ನಿಜವಾದ ಶ್ರೀಮಂತ. ಒಳ್ಳೆ ಆರೋಗ್ಯದ ಗುಟ್ಟು ಗಂಜಿ ಊಟದಂಗೆ ಇತ್. ನಮಗೆಲ್ಲಾ ಏಗಳಾರೂ ಹುಷಾರ್ ಇಲ್ಲದೇ ಆರೇ ಡಾಕ್ಟರ್ ಔಷಧಿ ಬರ್ದ್ ಕೊಡುವತಿಗೆ, “ಗಂಜಿ ಊಟ ಮಾಡಿ,” ಅಂದ್ಹೇಳಿ ಹೇಳ್ತ್ರ್ ಅಲ್ದಾ. ಅದ ನಾವ್ ಬೇಗ ಹುಷಾರ್ ಆಯ್ಲಿ ಅಂದ್ಹೇಳಿ ಅಲ್ದಾ? 

ಕುಂದಾಪ್ರದಂಗೆ ಹೆಚ್ಚಾಯ್ ಎಲ್ಲರ್ ಮನೆಂಗೆ ಕೊಚ್ಚಲಕ್ಕಿ ಗಂಜಿ ಮಾಡುದ್. ಅಪರೂಪಕ್ಕೆ ಬೆಳ್ತಕ್ಕಿ ಗಂಜಿಯೂ ಮಾಡ್ತ್ರ್. ಗಂಜಿ ಒಟ್ಟಿಗೆ ನಂಚಕಂಬುಕೆ ಚಟ್ನಿ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ ನಾನಾ ಬಗೆ ಇರತ್. ನಮ್ ಮನೆಂಗೆ ಬ್ಯಾಸಿಗಿ ರಜೆಂಗೆ ನನ್ ಅಮ್ಮ ಬೆಳಗಾತ ಹನ್ನೊಂದ್ ಗಂಟಿಗೆ ಆಟ ಆಡಿ ಬಂದ್ ನಮ್ಗೆಲ್ಲಾ ಬೆಳ್ತಕ್ಕಿ ಗಂಜಿ, ಬೆಳ್ಳುಳ್ಳಿ ಚಟ್ನಿ ಮಾಡಿ ಬಳ್ಸತ್ತಿದ್ದಳ್. ಬಿಸಲಂಗೆ ಆಟ ಆಡಿ ಬಂದ ನಮ್ಗೆ ಅದೇ ಪರಮಾನ್ನ. ಕೊಚ್ಚಲಕ್ಕಿ ಗಂಜಿ ಸಮಾ ಬೆಂದ್ ಅನ್ನ ಮೆದೂ ಆರೇ ಭಾರಿ ಲಾಯ್ಕ್ ಆತ್ ಉಂಬುಕೆ. ಒಂದ್ ಚಮಚ ತುಪ್ಪ ಒಂದ್ ಹೊಳ್ ಅಪ್ಪೆಮಿಡಿ ಉಪ್ಪಿನಕಾಯಿ ನಂಚಕಂಬುಕೆ ಇದ್ರೆ ಸ್ವರ್ಗದ್ ಬಾಗಿಲಂಗೆ ನಿಂತ್ಕಂಡಂಗೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಉದ್ಯೋಗ, ವಿದ್ಯಾಭ್ಯಾಸದ ನಿಮಿತ್ತ ಪರವೂರಂಗೆ ಇಪ್ ಗಂಡ್ ಮಕ್ಕಳ್ ಬ್ಯಾಚುಲರ್ ರೂಮಂಗೆ ಸಲೀಸ್ ಕೆಲ್ಸ ಅಂದ್ಹೇಳಿ ಗಂಜಿ ಮಾಡ್ಕಂಡ್, ಅದರೊಟ್ಟಿಗೆ ನಂಚಕಂಬುಕೆ ಊರಿಂದ ಬಪ್ಪಂಗೆ ತಂದದ್ದ್ ಉಪ್ಪಿನಕಾಯೋ, ಉಪ್ಪಿನ ಹೊಡಿಯೋ ಹಾಯ್ಕಂಡ್ ಉಂತ್ರ್. ಅಡ್ಗಿ ಮಾಡುಕೆ ಕಲುವತೆಂಗೆ ಮೊದಲ ಕಲುದೆ ಗಂಜಿ ಮಾಡುದ್. ಕಡಿಕೆ ಹೊತೆ-ಹೊತೆ ಬೇರೆ ಬೇರೆ ಪದಾರ್ಥ, ತಿಂಡಿ ಮಾಡುಕೆ ಕಲುದ್.

ನಮ್ ಊರ ಮನೆಂಗೆ ಒಂದ್ ಕಾಲದಂಗೆ ಉಂಬುಕೆ ಎಂತ ಅಂದ್ಹೇಳಿ ಯಾರ ಹತ್ರ ಆರೂ ಕೇಂಡ್ರೆ ಸಿಕ್ಕು ಉತ್ತರವೇ, “ಗಂಜಿ, ಉಪ್ಪಿನ ಹೊಡಿ,” ಅಂದ್ಹೇಳಿ. ಗಂಜಿ ಊಟದೊಟ್ಟಿಗೆ ನಂಚಕಂಬುಕೆ ಸುಮಾರ್ ನಮೂನಿ ಉಪ್ಪಿನಕಾಯಿ, ಚಟ್ನಿ, ಬಜ್ಜಿ, ಗೊಜ್ಜು, ತಾಳ್ಳ್, ಉಪ್ಪಿನಕಾಯಿ ಇದ್ದೋ. ಆರೇ ಹೆಚ್ಚಿನರ್ ಖಾಯಸ್ ಮಾಡುದ್ ಬೆಳ್ಳುಳ್ಳಿ ಚಟ್ನಿ ಅಲ್ದೀರೇ ಚಟ್ಲಿ ಉಪ್ಪಿನ ಹೊಡಿ. ಬಿಸಿ-ಬಿಸಿ ಗಂಜಿ ಬಟಲಂಗೆ ಹಾಕಿ, ಅದರ ಮೇಲೆ ಒಂದ್ ಚಮಚ ತುಪ್ಪ ಬಿದ್ರೆ ಸಾಕ್, ಅದೇ ಭೃಷ್ಟಾನ್ನ ಭೋಜನ ಅನ್ಲಕ್.

ನಂಚಕಂಬುಕೆ ಲಿಂಬೆ ಚಟ್ನಿ, ಬದ್ನಿ ಕಾಯ್ ಬಜ್ಜಿ, ಹಪ್ಪಳ, ಸಂಡಿಗೆ, ಹುರುಳಿ ಅಥ್ವಾ ಬೆಳ್ಳುಳ್ಳಿ ಚಟ್ನಿ ಪುಡಿ, ಮಾವಿನ ಕಾಯಿ ಗೊಜ್ಜು, ಹೊಡಿ ತಾಳ್ಳ್ ಒಂದ್ ಬದೆಂಗೆ ಆರೇ. ಒಣ್ಕಟಿ ಜಗ್ ಬಜ್ಜಿ, ಯಾವುದಾರೂ ಮೀನಿನ ರವಾ ಫ್ರೈ, ಊರ ಕೋಳಿ ಸುಕ್ಕಾ ಇನ್ನೊಂದು ಬದೆಂಗೆ. ಈ ವೆಜ್ ಊಟ ಮಾಡುವವರಿಗೂ ನಾನ್ ವೆಜ್ ಊಟ ಮಾಡುವವರಿಗೂ ಸರಿ ಸಮ ಹೊಂದು ಊಟ ಅಂದ್ರೆ ಗಂಜಿ ಊಟ ಕಾಣಿ. 

ಈ ನುಡಿಗಟ್ಟು ಓದಿದ್ದೀರಾ?: ದೇಸಿ ನುಡಿಗಟ್ಟು – ರಾಣೆಬೆನ್ನೂರು ಸೀಮೆ | ‘ಟೀಸೀನೂ ಬ್ಯಾಡ, ನೀರಾವರಿನೂ ಬ್ಯಾಡ…’

ಎಷ್ಟೇ ಗಡ್ಜ್ ಗೌಲ್ ಊಟ, ಸಮಾನ ಊಟ ಎಂತದೇ ಉಂಡ್ರೂ ಗಂಜಿ ಊಟ ಉಂಡಷ್ಟ್ ಹಿತ ಆತಿಲ್ಲ. ಬಲ್ಲವನೇ ಬಲ್ಲ ಗಂಜಿ ಊಟದ ಸುಖವಾ ಅಂದಂಗ್ಹೇ. ಬಟಲಂಗೆ ಇದ್ದ್ ಅನ್ನ ಎಲ್ಲಾ ಉಂಡ ಬಟ್ಟಲ್ ಎತ್ತಿ ತೆಳಿ ಕುಡ್ದ್ರ ಮೇಲೆ ಒಂದ್ ತೆಗ್ ಬಂದ್ರೆ ಮನಸ್ಸಿಗೆ ನೆಮ್ಮದಿ. ನಾನ್ ಕಲ್ತದ್ ಶಾಲೆಂಗೆ ವಾರದಂಗೆ ಎರಡ್ ದಿನ ಮಧ್ಯಾಹ್ನ ಊಟಕ್ಕೆ ಗಂಜಿ ಇರ್ತಿದಿತ್. ಅದರೊಟ್ಟಿಗೆ ಈರುಳ್ಳಿ ಚಟ್ನಿ ಅಥ್ವಾ ಲಿಂಬು ಉಪ್ಪಿನಕಾಯಿ ಮಾಡ್ತಿದೀರ್ ಅಂದ್ಹೇಳಿ ನೆನ್ಪ್. ನಮ್ ಕರಾವಳಿ ಸೆಕಿಗೆ ಗಂಜಿ ತೆಳಿ ಉಂಡ್ರೆ ನಮ್ ದೇಹ ತಂಪ್ ಇರತ್. ಅದ್ಕೆ ನಮ್ ಹಿರಿಯರ್ ಗಂಜಿ ಊಟದ್ ರೂಢಿ ಮಾಡ್ಕಂಡ್ ಬಂದಿದಿರ್. ಈಗ ಎಲ್ಲರ್ ಮನೆಂಗೆ ಬೆಳಗಾತ ನಮೂನ್-ನಮೂನಿ ತಿಂಡಿ ಮಾಡ್ಕಂಡ್ ತಿಂತ್ರ. ಗಂಜಿ ತೆಳಿ ಊಟನಾ ಮರಿತೇ ಇದ್ರ್. ಆರೇ ಇತ್ತೀಚಿಗೆ ತುಂಬಾ ವರ್ಷದಿಂದ ನಮ್ ಉಡುಪಿ-ಕುಂದಾಪ್ರ-ಮಲ್ಪೆ ಬದೆಂಗೆ ಮಧ್ಯಾಹ್ನದ ಹೊತ್ತಂಗೆ ಒಂದ್ ರೌಂಡ್ ಹೊರೆ, ಸುಮಾರ್ ಗಂಜಿ ಊಟದ ಗೂಡಂಗಡಿ ಹೋಟೆಲ್ ಕಾಂಬುಕೆ ಸಿಕ್ತೋ. ಚಣ್ ಗೂಡಂಗಡಿ ಹೋಟೆಲ್ ಇಕ್ಕಟ್ ಟೇಬಲ್ ಮೇಲೆ ಘಮ-ಘಮ ಮೀನ್ ಫ್ರೈ ಒಟ್ಟಿಗೆ ಬಿಸಿ-ಬಿಸಿ ಗಂಜಿ ಉಂಬುದೇ ಒಂದ್ ಪರಮ ಸುಖ. ಏನಂತ್ರೀ?

(ಚಿತ್ರಗಳು: ಸಾಂದರ್ಭಿಕ)

ಪೋಸ್ಟ್ ಹಂಚಿಕೊಳ್ಳಿ:

ಅಭಿಷೇಕ್ ಪೈ
ಅಭಿಷೇಕ್ ಪೈ
ಬ್ಯಾಂಕೊಂದರಲ್ಲಿ ಉದ್ಯೋಗಿ. ಕವಿತೆ ಅಂದ್ರೆ ಪ್ರಾಣ. ಪ್ರವಾಸದ ಸುದ್ದಿ ಕೇಳಿದರೆ ಎಲ್ಲಿದ್ದರೂ 'ನಾ ರೆಡಿ' ಅನ್ನುವ ಉಮೇದು. ತನ್ನೂರು ಕುಂದಾಪುರದ ಭಾಷೆ-ಬದುಕಿನ ಬಗೆಗೆ ಅಪಾರ ಅಕ್ಕರೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಂಜನಗೂಡು ಸೀಮೆಯ ಕನ್ನಡ | ‘ನಮ್ಮೆಣ್ಣು ಬಾರಿ ಒಳ್ಳೆದು ಕಣ, ಆಸ್ತಿ ಬ್ಯಾಡಾಂತ ಸೈನ್ ಆಕೊಡ್ತದ!’

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಕಲಬುರಗಿ ಸೀಮೆಯ ಕನ್ನಡ | ನಂಗಂತೂ ಅತ್ತಿ ಹೇಳದೂ ಖರೆ ಅನಸ್ತದ, ಸೊಸಿ ಹೇಳದೂ ಖರೆನೇ ಅನಸ್ತದ!

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಬೀದರ್ ಸೀಮೆಯ ಕನ್ನಡ | ವಯಸ್ಸೀಗಿ ಬಂದ್ ಮ್ಯಾಲ ಎಲ್ಲರಿಗಿ ಲವ್ ಆಯ್ತದ್; ಆಗಿಲ್ಲಾಂದ್ರ…?

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...