ಚಟ್ನಾಳ ಗ್ರಾಮದಲ್ಲಿ ವಿಶೇಷ ಶಕ್ತಿಯಿದ್ದು, ಅಂತರಂಗ ಶುದ್ಧಿಯಿಂದ ಸೇವೆಗೈಯುವ ಪರಂಪರೆ ಇಲ್ಲಿದೆ. ಗುರುಬಸವ ಪಟ್ಟದ್ದೇವರು ಹಾಗೂ ಶಾಂತಾ ಬಹೆನಜಿಯಂತಹ ತ್ಯಾಗಿಗಳಿಂದ ಮೂಲಗೆ ಮನೆತನಕ್ಕೆ ವಿಶೇಷ ಗೌರವ ದೊರೆತಿದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಬಸವಲಿಂಗ ಪಟ್ಟದ್ದೇವರು ಅಭಿಪ್ರಾಯಪಟ್ಟರು.
ಔರಾದ್ ತಾಲೂಕಿನ ಚಟ್ನಾಳ ಗ್ರಾಮದಲ್ಲಿ ಚಟ್ನಾಳ ಗ್ರಾಮಸ್ಥರ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ ʼಚಟ್ನಾಳ ಸಂಭ್ರಮʼ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿ, “ಎಲ್ಲರೂ ಶಿಕ್ಷಣ, ಅಧ್ಯಾತ್ಮದೊಂದಿಗೆ ನಿಷ್ಠೆಯ ಕಾಯಕದಲ್ಲಿ ತೊಡಗಿಸಿಕೊಂಡು ಅಂತರಂಗ ಶುದ್ಧಿಗೆ ಹೆಚ್ಚು ಒತ್ತು ನೀಡಬೇಕು. ಚಟ್ನಾಳ ಗ್ರಾಮವು ಬಸವಕಲ್ಯಾಣದಂತೆ ಪವಿತ್ರ ನೆಲವಾಗಿ ರೂಪುಗೊಳ್ಳಬೇಕು” ಎಂದು ಹಾರೈಸಿದರು.
“ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದ್ದೇವರ ಪೂರ್ವಾಶ್ರಮ ಊರು ಚಟ್ನಾಳದಲ್ಲಿ ವಿಶೇಷವಾದ ಆಧ್ಯಾತ್ಮಿಕ ಶಕ್ತಿ ಅಡಗಿದೆ. ಒಂದು ದಶಕದ ಬಳಿಕ ಈ ಗ್ರಾಮಕ್ಕೆ ಭೇಟಿ ನೀಡಿದ್ದು, ನನಗೆ ಹಂಡೆ ಹಾಲು ಕುಡಿದಷ್ಟು ಸಂತಸ ತಂದಿದೆ. ಗುರುಬಸವ ಪಟ್ಟದ್ದೇವರು ಬಸವಾದಿ ಶರಣರ ತತ್ವ ಚಿಂತನೆಗಳನ್ನು ನಾಡಿನೆಲ್ಲೆಡೆ ಬಿತ್ತುವ ಮುಖಾಂತರ ಜನಮಾನಸದ ಹೃದಯ ಗೆಲ್ಲುತ್ತಿದ್ದಾರೆ” ಎಂದರು.
ನೇತ್ರತ್ವ ವಹಿಸಿದ ಪೂಜ್ಯ ಗುರುಬಸವ ಪಟ್ಟದ್ದೇವರು ಮಾತನಾಡಿ, “ಗ್ರಾಮದ ಅನೇಕ ಮಕ್ಕಳಲ್ಲಿ ಅಗಾಧ ಪ್ರತಿಭೆ ಅಡಗಿದ್ದು, ಅದನ್ನು ಸದ್ಬಳಕೆ ಮಾಡಿಕೊಂಡು ಬದುಕಿನ ಯಶಸ್ಸು ಕಾಣಬೇಕು. ರಕ್ತ ಸಂಬಂಧಕ್ಕಿಂತ ಭಕ್ತಿ ಸಂಬಂಧವೇ ದೊಡ್ಡದ್ದು, ಇಡೀ ಊರು ಒಂದು ಕುಟುಂಬದಂತೆ ಶಾಂತಿ, ಪ್ರೀತಿಯಿಂದ ಇರಬೇಕು. ದುರ್ಗುಣ, ದುಶ್ಚಟಗಳಿಂದ ದೂರವಿದ್ದು ಉತ್ತಮ ಬದುಕು ರೂಪಿಸಿಕೊಳ್ಳಬೇಕು. ಗ್ರಾಮದಲ್ಲಿ ಶಾಂತಿ, ಸಾಮರಸ್ಯದಿಂದ ಸಂಸ್ಕೃತಿ ಪರಂಪರೆ ಉಳಿಸಿ ಬೆಳೆಸಲು ಶ್ರಮಿಸಬೇಕು” ಎಂದು ತಿಳಿಸಿದರು.

ಗುಲ್ಬರ್ಗಾ ವಿವಿ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಪ್ರಾಸ್ತಾವಿಕ ಮಾತನಾಡಿ, “ಭಾಲ್ಕಿ ಹಿರೇಮಠಕ್ಕೂ ಚಟ್ನಾಳ ಗ್ರಾಮಕ್ಕೂ ಅವಿನಾಭಾವ ಸಂಬಂಧವಿದೆ. ವ್ಯಸನ ಮುಕ್ತ ಸಮಾಜಕ್ಕಾಗಿ ಗುರುಬಸವ ಪಟ್ಟದ್ದೇವರ ನೇತ್ರತ್ವದಲ್ಲಿ ನಡೆಯುವ ʼಚನ್ನಬಸವ ಜೋಳಿಗೆʼ ಕಾರ್ಯಕ್ರಮ ಎಲ್ಲೆಡೆ ಪಸರಿಸಬೇಕು. ಪ್ರತಿವರ್ಷ ʼಚಟ್ನಾಳ ಸಂಭ್ರಮʼ ಹೆಸರಿನಲ್ಲಿ ಸಮಾರಂಭ ಆಯೋಜಿಸುವ ಮುಖಾಂತರ ಶೈಕ್ಷಣಿಕ, ಸಾಂಸ್ಕೃತಿಕ, ಆಧ್ಯಾತ್ಮಿಕವಾಗಿ ಸೌಹಾರ್ದತೆ ವಾತಾವರಣ ಕಟ್ಟುವ ಗುರಿಯಿದೆ. ಗುರು ಮುಟ್ಟಿ ಗುರುವಾದ ಗುರುಬಸವ ಪಟ್ಟದ್ದೇವರು ಅವರಂತಹ ಮಗನನ್ನು ಹೆತ್ತ ಸುಭಾಷ-ಪುತಳಬಾಯಿ ಮೂಲಗೆ ದಂಪತಿಯ ತ್ಯಾಗ ಅನನ್ಯವಾಗಿದೆ” ಎಂದು ಹೇಳಿದರು.
ಹಿರಿಯ ಪತ್ರಕರ್ತ ಬಸವರಾಜ ಮೊಗದುಮ್ ಕಾರ್ಯಕ್ರಮ ಉದ್ಘಾಟಿಸಿದರು. ಔರಾದ್ ತಾ.ಪಂ. ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ಬಸವಗುರು ಪೂಜೆ ನೆರವೇರಿಸಿದರು. ಗ್ರಾಮದ ಮುಖಂಡ ಚಂದ್ರಪ್ಪ ಕುಂಬಾರ ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ಬಸವ ಬಳಗದ ಜಿಲ್ಲಾಧ್ಯಕ್ಷ ಸಂಜೀವಕುಮಾರ ಜುಮ್ಮಾ, ರಾಜು ಜುಬರೆ ಪ್ರಾರ್ಥನೆ ನಡೆಸಿಕೊಟ್ಟರು.
ಗ್ರಾಮದ ಸಾಧಕರಿಗೆ ಸನ್ಮಾನ
ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರ ಹೆತ್ತವರಾದ ಪುತಳಬಾಯಿ ಸುಭಾಷ ಮೂಲಗೆ ದಂಪತಿಗಳನ್ನು ಗ್ರಾಮಸ್ಥರು ಆತ್ಮೀಯವಾಗಿ ಸತ್ಕರಿಸಿದರು. ಸಂತಪೂರನ ಜ್ಞಾನ ಭಾರತಿ ಗುರುಕುಲ, ಅನುಭವ ಮಂಟಪ ಶಾಲೆಯಲ್ಲಿ ಓದುತ್ತಿರುವ ಗ್ರಾಮದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಭಾಲ್ಕಿ ಹಾನಗಲ್ ಕುಮಾರೇಶ್ವರ ಉಚಿತ ಪ್ರಸಾದ ನಿಲಯ ಮಕ್ಕಳಿಗೆ ʼಬಸವ ಆಸ್ತಿʼ ಪ್ರದರ್ಶನಗೊಂಡಿತು. ಇದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮದ ಸಾಧಕರಿಗೆ, ಸರ್ಕಾರಿ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಬೀದರ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಚಟ್ನಾಳ ಗ್ರಾಮದ ವಿದ್ಯಾರ್ಥಿಗಳಾದ ಕು.ರಾಮೇಶ್ವರಿ ನಾಗನಾಥ ಕತ್ತೆ ಅವರು ಜಂಗಮ ತತ್ವ, ಕು.ಅರ್ಪಿತಾ ದಿಲೀಪ ಮೂಲಗೆ ಅವರು ಪಾದೋದಕ ಪ್ರಸಾದ, ಕು.ಸ್ನೇಹಾ ದಿಗಂಬರ ಮೂಲಗೆ ಅವರು ಇಷ್ಟಲಿಂಗ ಪೂಜೆ, ಕು. ಶಿವಾನಿ ರಾಜಕುಮಾರ ಮಂಠಾಳೆ ಅವರು ಕಾಯಕ-ದಾಸೋಹ ತತ್ವದ ವಿಚಾರ ಮಂಡಿಸಿ ಗಮನ ಸೆಳೆದರು.
ಇದನ್ನೂ ಓದಿ : ₹25 ಕೋಟಿ ವೆಚ್ಚದಲ್ಲಿ ಬೀದರ್ ಕೋಟೆ, ಪಾಪನಾಶ ಕೆರೆ ಅಭಿವೃದ್ಧಿ
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಈಶ್ವರಿಯ ವಿವಿಯ ಶಾಂತಾ ಬಹೆನಜಿ, ಶೆಂಬೆಳ್ಳಿ ಗ್ರಾ.ಪಂ ಪಿಡಿಒ ನಾಗೇಶ ಮುಂಕ್ರಬೆ ಸೇರಿದಂತೆ ಪ್ರಮುಖರಾದ ಶಾಮರಾವ ಮ್ಯಾಕರೆ, ಧೂಳಯ್ಯ ಸ್ವಾಮಿ, ಅಭಿಷೇಕ ಸ್ವಾಮಿ, ಶ್ರೀಕಾಂತ ಸ್ವಾಮಿ, ರಮೇಶ ಮೂಲಗೆ, ಶಾಲಿವಾನ ಮೂಲಗೆ, ಮೌನೇಶ ಪಾಂಚಾಳ, ಸಂದೀಪ ಮೂಲಗೆ, ರವಿ ಕತ್ತೆ, ಚಂದ್ರಕಾಂತ ಪಾಟೀಲ್, ರಾಜಕುಮಾರ ಮೂಲಗೆ, ಶರಣಪ್ಪ ಗಾದಗೆ, ಶರಣಪ್ಪ ನಾಗಲಗಿದ್ದೆ, ಅಪಾರಾವ್ ಕತ್ತೆ, ದಿಲೀಪ ಮೂಲಗೆ ಮತ್ತಿತರರಿದ್ದರು. ಶಿಕ್ಷಕ ಚಿರಂಜೀವಿ ಪಾಟೀಲ್ ಸ್ವಾಗತಿಸಿದರು. ಪತ್ರಕರ್ತ ಬಾಲಾಜಿ ಕುಂಬಾರ ನಿರೂಪಿಸಿದರು. ವಿದ್ಯಾರ್ಥಿ ರೋಹಿತ ಮೂಲಗೆ ವಂದಿಸಿದರು.





