- ಕುಮಟಳ್ಳಿಗೆ ಅಥಣಿ ಟಿಕೆಟ್, ರಮೇಶ್ ಜಾರಕಿಹೊಳಿ ಮೇಲುಗೈ
- ಅಥಣಿ ಕ್ಷೇತ್ರದ ಜನರ ತೀರ್ಮಾನದಂತೆ ರಾಜೀನಾಮೆ ಎಂದ ಸವದಿ
ಭಾರತೀಯ ಜನತಾ ಪಕ್ಷ ಅಳೆದು ಸುರಿದು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುತ್ತಿದ್ದಂತೆಯೇ ಮಾಜಿ ಉಪಮುಖ್ಯಮಂತ್ರಿ, ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ, ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸವದಿ, ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಬಿಜೆಪಿಯ ಹಿರಿಯ ಲಿಂಗಾಯತ ಕೋಮಿನ ನಾಯಕ ಲಕ್ಷ್ಮಣ ಸವದಿ ಅಥಣಿ ವಿಧಾನಸಭೆ ಕ್ಷೇತ್ರದವರು. ಆದರೆ 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ, ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಅಥಣಿ ಕ್ಷೇತ್ರದಿಂದ ಶಾಸಕರಾಗಿದ್ದ ಕಾಂಗ್ರೆಸ್ಸಿನ ಮಹೇಶ್ ಕುಮಟಳ್ಳಿಯವರನ್ನು ಬಿಜೆಪಿಗೆ ಸೆಳೆಯುವಲ್ಲಿ ಸಫಲರಾಗಿದ್ದರು.
ಕಾಂಗ್ರೆಸ್ಗೆ ರಾಜೀನಾಮೆ ನೀಡಿ ಬಿಜೆಪಿ ಸೇರಿದಾಗ, ಅಥಣಿಯಲ್ಲಿ ಮರುಚುನಾವಣೆ ನಡೆದಾಗ, ಮಹೇಶ್ ಕುಮಟಳ್ಳಿ ಮತ್ತೆ ಶಾಸಕರಾಗಿ ಆಯ್ಕೆಯಾಗಿದ್ದರು. ಅದರ ಹಿಂದೆ ರಮೇಶ್ ಜಾರಕಿಹೊಳಿಯ ಬೆಂಬಲವಿತ್ತು.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಿಜೆಪಿ ಸರ್ಕಾರ ರಚನೆಯಾದಾಗ, ರಮೇಶ್ ಜಾರಕಿಹೊಳಿ ಮಂತ್ರಿಯಾದರು. ಮಹೇಶ್ ಕುಮಟಳ್ಳಿ ಮಂತ್ರಿ ಸ್ಥಾನದಿಂದ ವಂಚಿತರಾದರೂ, ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಮಹೇಶ್ ಕುಮಟಳ್ಳಿಗೇ ಟಿಕೆಟ್ ಕೊಡಬೇಕೆಂದು ರಮೇಶ್ ಜಾರಕಿಹೊಳಿ ತಾಕೀತು ಮಾಡಿದರು. ಕೊಡದೇ ಇದ್ದರೆ, ನನಗೂ ಬೇಡ ಎಂದು ಬಿಜೆಪಿ ಹೈಕಮಾಂಡನ್ನೇ ಬ್ಲಾಕ್ ಮೇಲ್ ಮಾಡಿದರು.
ಆದರೆ ಅದೇ ಅಥಣಿ ಕ್ಷೇತ್ರದಿಂದ ಮೂಲ ಬಿಜೆಪಿ ಅಭ್ಯರ್ಥಿಯಾಗಿದ್ದ ಲಕ್ಷ್ಮಣ ಸವದಿ ಕೂಡ, ಮುಂದಿನ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ನಾನೇ ಎಂದು ಹೇಳಿಕೊಂಡು ಕ್ಯಾನ್ವಾಸ್ ಕೂಡ ಶುರು ಮಾಡಿದ್ದರು.
ಆದರೆ ನಿನ್ನೆ ಬಿಡುಗಡೆಯಾದ ಬಿಜೆಪಿಯ ಮೊದಲ ಪಟ್ಟಿಯಲ್ಲಿ ಅಥಣಿ ಕ್ಷೇತ್ರ ಮಹೇಶ್ ಕುಮಟಳ್ಳಿ ಪಾಲಾಗಿದೆ. ಲಕ್ಷ್ಮಣ ಸವದಿಗೆ ಚುನಾವಣೆಗೆ ಮುಂಚೆಯೇ ಬಿಜೆಪಿ ಶಾಕ್ಆ ನೀಡಿದೆ.
ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಲಕ್ಷ್ಮಣ ಸವದಿ ಇಂದು, ಏಪ್ರಿಲ್ 12ರಂದು, ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ಕರೆದು, ಬಿಜೆಪಿಗೆ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದೇನೆ ಎಂದು ಅಧಿಕೃತವಾಗಿ ಘೋಷಣೆ ಮಾಡಿದರು.
ಮುಂದುವರೆದು, ನಾಳೆ ಕ್ಷೇತ್ರದ ಜನರ ಜತೆ ಚರ್ಚಿಸಿ ಘೋಷಣೆ ಮಾಡುತ್ತೇನೆ. ಬಿಜೆಪಿ ಟಿಕೆಟ್ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ? ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ ಎಂದು ಸ್ಪಷ್ಟಪಡಿಸಿದರು.
ಈ ಎಲ್ಲ ಬೆಳವಣಿಗೆಗಳ ನಡುವೆಯೇ, ಲಕ್ಷ್ಮಣ ಸವದಿ ನಿವಾಸಕ್ಕೆ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಭೇಟಿ ನೀಡಿದ್ದಾರೆ. ಈ ಭೇಟಿ, ಕಾಂಗ್ರೆಸ್ ಆಪ್ತ ಸ್ನೇಹಿತನ ಮೂಲಕ ಲಕ್ಷ್ಮಣ್ ಸವದಿಯವರನ್ನು ಸೆಳೆಯಲು ಯತ್ನಿಸುತ್ತಿರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿದೆ.