- ಕೇಂದ್ರ ಸರ್ಕಾರದಿಂದ ಸಿಬಿಐ, ಇಡಿ, ಐಟಿ ಸಂಸ್ಥೆಗಳ ದುರ್ಬಳಕೆ
- ಜೋಶಿ ಅವರು ರಾಜ್ಯದ ಜನರಲ್ಲಿ, ಶೆಟ್ಟರ್ ಬಳಿ ಕ್ಷಮೆ ಕೇಳಬೇಕು
ಜಗದೀಶ್ ಶೆಟ್ಟರ್ ಆಶ್ರಯದಲ್ಲಿ ರಾಜಕೀಯ ಆರಂಭಿಸಿದ ಪ್ರಲ್ಹಾದ್ ಜೋಶಿ ಅವರು ತಮ್ಮ ಅಧಿಕಾರ ದರ್ಪದಿಂದ ಎರಡು ದಿನಗಳ ಹಿಂದೆ ಅವರ ಮನವೊಲಿಕೆ ಪ್ರಯತ್ನದ ವೇಳೆ ಐಟಿ ದಾಳಿಯ ಬೆದರಿಕೆ ಹಾಕಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಮತ್ತು ಮಾಜಿ ಎಮ್ಎಲ್ಸಿ ರಮೇಶ್ ಬಾಬು ಆರೋಪಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, “ದೇಶದ ಎಲ್ಲ ರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರ ಸಿಬಿಐ, ಇಡಿ, ಐಟಿ ಸಂಸ್ಥೆಗಳನ್ನು ಕಾಂಗ್ರೆಸ್ ಸೇರಿದಂತೆ ಎಲ್ಲ ವಿರೋಧ ಪಕ್ಷಗಳ ಮೇಲೆ ದುರುಪಯೋಗ ಮಾಡಿಕೊಂಡಿರುವುದನ್ನು ನೋಡಿದ್ದೇವೆ” ಎಂದರು.
“ಕೇಂದ್ರ ಸಚಿವ ಜೋಶಿ ಅವರು ನೀವು ಬಿಜೆಪಿ ತೊರೆದರೆ ಮುಂದಿನ ದಿನಗಳಲ್ಲಿ ಐಟಿ, ಇಡಿ, ಸಿಬಿಐ ಕ್ರಮ ಎದುರಿಸಬೇಕಾಗುತ್ತದೆ ಎಂಬ ಬೆದರಿಕೆ ಹಾಕಿದ್ದಾರೆ. ಮೂಲತಃ ಜಗದೀಶ್ ಶೆಟ್ಟರ್ ಅವರು ವಕೀಲರಾಗಿದ್ದು, ಅವರು ಜೋಶಿ ಅವರಿಗೆ ತಾವು ವಕೀಲರು ನಿಮ್ಮ ಬೆದರಿಕೆಗೆ ಜಗ್ಗುವುದಿಲ್ಲ ಎಂದು ಹೇಳಿ ಬಿಜೆಪಿ ಬಿಡುವ ದೃಢ ನಿರ್ಧಾರಕ್ಕೆ ಬಂದರು” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಚುನಾವಣೆ 2023 | ಜೋಶಿ ಹಣಿಯಲು ಖೆಡ್ಡಾ ತೋಡಿ ಅಖಾಡಕ್ಕಿಳಿದ ಶೆಟ್ಟರ್
“ಕೇಂದ್ರ ಸಚಿವರಾಗಿ ಜೋಶಿ ಅವರು ಮಾಜಿ ಮುಖ್ಯಮಂತ್ರಿಗೆ ಇಡಿ, ಐಟಿ ಬೆದರಿಕೆ ಒಡ್ಡಿರುವುದು ಸರಿಯಲ್ಲ. ಹೀಗಾಗಿ ಜೋಶಿ ಅವರು ರಾಜ್ಯದ ಜನರಿಗೆ ಹಾಗೂ ಜಗದೀಶ್ ಶೆಟ್ಟರ್ ಅವರ ಬಳಿ ಕ್ಷಮೆ ಕೇಳಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕೇಂದ್ರದ ಅಧಿಕಾರ ದುರ್ಬಳಕೆ ಮಾಡಿಕೊಂಡು ತನಿಖಾ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರಿಗೆ ಬೆದರಿಕೆ ಹಾಕಲು ಮುಂದಾಗಿರುವುದು ಸರಿಯಲ್ಲ. ಇದೆಲ್ಲದಕ್ಕೂ ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ” ಎಂದರು.
“ಕರ್ನಾಟಕ ರಾಜ್ಯ ಕಂಡಿರುವ ಕೆಲವೇ ಸಜ್ಜನ ರಾಜಕಾರಣಿಗಳಲ್ಲಿ ಜಗದೀಶ್ ಶೆಟ್ಟರ್ ಅವರೂ ಒಬ್ಬರು. ಬಹಳ ಪ್ರಾಮಾಣಿಕವಾಗಿ ಸಾರ್ವಜನಿಕ ಜೀವನದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂದು ಅವರ ಸ್ವಾಭಿಮಾನಕ್ಕೆ ಆಗಿರುವ ಧಕ್ಕೆ, ರಾಜಕೀಯ ಜೀವನಕ್ಕೆ ಆಗಿರುವ ಪೆಟ್ಟಿನಿಂದ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದಾರೆ” ಎಂದು ಹೇಳಿದರು.