- ವರುಣಾದಲ್ಲಿ ಸೋಮಣ್ಣ ವಿರುದ್ಧ ಸಿಡಿದ ಯುವಕರು
- ಮೂಲಭೂತ ಸೌಕರ್ಯ ಒದಗಿಸಿಕೊಡದ ನಾಯಕನಿಗೆ ತರಾಟೆ
ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಸತಿ ಸಚಿವ ಸೋಮಣ್ಣನವರಿಗೆ ಆರಂಭಿಕ ವಿಘ್ನ ಎದುರಾಗಿದೆ.
ಕ್ಷೇತ್ರದೊಳಗೆ ಪ್ರಚಾರ ಕಾರ್ಯಕ್ಕೆ ತೆರಳಿದ್ದ ಸಚಿವ ಸೋಮಣ್ಣರನ್ನು ಅಡ್ಡಗಟ್ಟಿದ ಸ್ಥಳೀಯ ಬಿಜೆಪಿ ಯುವಕರ ಗುಂಪೊಂದು ಮೂಲಸೌಕರ್ಯದ ಬೇಡಿಕೆ ಇಟ್ಟು ಮುಜುಗರಕ್ಕೀಡು ಮಾಡಿದೆ.
ಎಂದಿನಂತೆ ಇಂದು( ಏಪ್ರಿಲ್ 19ರಂದು) ವಸತಿ ಸಚಿವರು ಹಾಗೂ ಸಂಸದ ಪ್ರತಾಪ್ ಸಿಂಹ ಅವರನ್ನೊಳಗೊಂಡ ತಂಡ ಪ್ರಚಾರ ಕಾರ್ಯಕ್ಕಾಗಿ ತೆರಳಿತ್ತು.
ಈ ವೇಳೆ ವಸತಿ ಮಂತ್ರಿಗಳಿಗೆ ಎದುರಾದ ಯುವಕರ ಗುಂಪೊಂದು ಸಚಿವರಿಗೆ ಸ್ಥಳೀಯ ಅಗತ್ಯತೆಗೆ ಅನುಗುಣವಾಗಿ ಕೆಲ ಪ್ರಶ್ನೆಗಳನ್ನು ಕೇಳಿದೆ.
ವಸತಿ ಸಚಿವರಾಗಿರುವ ನೀವು ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಿರಿ. ಆಗಿನಿಂದಲೂ ನಿಮಗೆ ನಮ್ಮೂರಿಗೊಂದು ಸಮುದಾಯ ಭವನ ಹಾಗೂ ಕೆಲವರಿಗೆ ಮನೆ ಕಟ್ಟಿಸಿಕೊಡಲು ಕೇಳಿಕೊಂಡಿದ್ದೆವು. ಆಗ ಇದರ ಬಗ್ಗೆ ಏನೂ ಮಾತನಾಡದ ನೀವು ಈಗ ವೋಟು ಕೇಳಲು ಬಂದಿದ್ದೀರಾ ನಿಮಗೆ ನೈತಿಕತೆ ಇದೆಯೇ ಎಂದು ಕೇಳಿದ್ದಾರೆ.
ಯುವಕರ ಮಾತಿನಿಂದ ಸಚಿವರು ಕಸಿವಿಸಿಗೊಂಡ ವೇಳೆ ಮಧ್ಯೆ ಪ್ರವೇಶಿಸಿದ ಸಂಸದ ಪ್ರತಾಪ್ ಸಿಂಹ ಇವೆಲ್ಲದರ ಬಗ್ಗೆ ಮಾತನಾಡೋಣ ಎಂದು ಹೇಳುವ ವೇಳೆ ಮತ್ತೆ ಅವರನ್ನೂ ಪ್ರಶ್ನಿಸಿದ ಹುಡುಗರು ನಮ್ಮ ಸಂಸದರು ಎನಿಸಿಕೊಂಡ ನೀವು ನಮಗೆ ಮಾಡಿಕೊಟ್ಟಿರುವ ಸಾಧನೆಗಳೇನು ಅನ್ನೋದನ್ನ ಹೇಳ್ತಿರಾ ಎಂದು ಕೇಳಿ ಅವರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? :ಚುನಾವಣೆ 2023 | ಬಿಜೆಪಿ ತೊರೆದ ರೌಡಿಶೀಟರ್ ಫೈಟರ್ ರವಿ; ಪಕ್ಷೇತರನಾಗಿ ಸ್ಪರ್ಧೆ
ಹೀಗೆ ಕೆಲ ಕಾಲ ವಾಗ್ವಾದ ನಡೆಸಿದ ಯುವಕರನ್ನು ಕಡೆಗೂ ಸಮಾಧಾನ ಮಾಡಿ ಕಳುಹಿಸುವಲ್ಲಿ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿ, ಕ್ಷೇತ್ರದಲ್ಲಾದ ಮೊದಲ ಹಿನ್ನಡೆ ವಿಚಾರವನ್ನು ಮುಚ್ಚಿಟ್ಟುಕೊಂಡು ವಸತಿ ಸಚಿವರು ಪ್ರಚಾರಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಟ್ಟರು.