- ಚುನಾವಣಾ ಕಣದಲ್ಲಿ ಪ್ರಧಾನಿ ಮೋದಿ ಟೀಕಿಸಿದ ಮಲ್ಲಿಕಾರ್ಜುನ ಖರ್ಗೆ
- ರಾಹುಲ್ ಗಾಂಧಿ ಅನರ್ಹಗೊಳಿಸಿ ಹೇಡಿತನ ಪ್ರದರ್ಶಿಸಿದ ಬಿಜೆಪಿ
ಸರ್ಕಾರದ ಆಸ್ತಿ ಮಾರುವುದು, ಸರ್ಕಾರದ ಆಸ್ತಿಯನ್ನು ಒಂದೇ ವ್ಯಕ್ತಿಗೆ ಕೊಡುವುದು ಹಾಗೂ ಜನರ ದುಡ್ಡುನ್ನು ದೊಡ್ಡ ಕುಳಗಳಿಗೆ ಕೊಟ್ಟದೇ ಬಿಜೆಪಿಯ ದೊಡ್ಡ ಸಾಧನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾನುವಾರ ಮಾತನಾಡಿದ ಅವರು, “ಆದಾನಿಯ ಸಂಪತ್ತಿನಲ್ಲಿ ಎರಡು ವರ್ಷಗಳಲ್ಲಿ ಹಠಾತ್ತನೆ 12 ಲಕ್ಷ ಕೋಟಿ ರೂಪಾಯಿ ಆಸ್ತಿ ಹೆಚ್ಚಳವಾಗಿದೆ. ಇದನ್ನು ರಾಹುಲ್ ಗಾಂಧಿ ಪ್ರಶ್ನಿಸಿ, ಸತ್ಯ ಹೇಳಲು ಹೊರಟರೆ, ಅದನ್ನು ಎದುರಿಸಲಾಗದ ನರೇಂದ್ರ ಮೋದಿ ಸರ್ಕಾರ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿ ತನ್ನ ಹೇಡಿತನ ಜಾಹೀರುಗೊಳಿಸಿದೆ” ಎಂದು ಕಿಡಿಕಾರಿದರು.
“ಸಂಸತ್ತಿನಲ್ಲಿ ನಾನು ಮತ್ತು ರಾಹುಲ್ ಗಾಂಧಿ ಮಾಡಿದ ಭಾಷಣಗಳನ್ನು ಕಿತ್ತು ಎಸೆಯುತ್ತಿದ್ದಾರೆ. ಮೋದಿ ಸರ್ಕಾರಕ್ಕೆ ಸತ್ಯ ಎದುರಿಸುವ ತಾಕತ್ತು ಇಲ್ಲ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಲಂಚ, ಮಿತಿಮೀರಿದ ಭ್ರಷ್ಟಾಚಾರ, ಪಠ್ಯ ಬದಲಾವಣೆ ಹಾಗೂ ಇತಿಹಾಸ ತಿರುಚಿದ್ದೇ ಈ ಬಿಜೆಪಿ ಸರ್ಕಾರದ ಸಾಧನೆ” ಎಂದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಂಗೆ ಆಗುತ್ತವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವಾಗ ಗಲಾಟೆ ಆಗಿದೆ ತೋರಿಸಿ. ಶಾ ಅವರು ತಕ್ಷಣ ಈ ರೀತಿಯ ಪ್ರಚೋದನಾಕಾರಿ ಹೇಳಿಕೆ ನಿಲ್ಲಿಸಲಿ. ಬಡ ಜನರೊಳಗಡೆ ಬಿಜೆಪಿ ಅವರು ಜಗಳ ಹಚ್ಚಿಸುತ್ತಿದ್ದಾರೆ” ಎಂದು ದೂರಿದರು.
ಈ ಸುದ್ದಿ ಓದಿದ್ದೀರಾ? ಬ್ಯಾಟರಾಯನಪುರ ಕ್ಷೇತ್ರ | ಕಾಂಗ್ರೆಸ್ನ ಭರವಸೆ ನಾಯಕ ಕೃಷ್ಣ ಬೈರೇಗೌಡ ಗೆಲುವಿಗೆ ನೀರೆರೆದ ಬಿಜೆಪಿ ಬಂಡಾಯ
“ನಮ್ಮ ಹೋರಾಟ ನ್ಯಾಯಕ್ಕಾಗಿ. ಈ ದೇಶದ ಜಾತ್ಯತೀತತೆಯ ಉಳಿವಿಗೋಸ್ಕರ ಇರುವ ಹೋರಾಟ. ನಾನು ಮತ್ತು ರಾಹುಲ್ ಗಾಂದಿ ಯಾರಿಗೂ ಹೆದರುವವರು ಅಲ್ಲ. ಈ ದೇಶದಲ್ಲಿ ಜನ ಸುಖ-ಸಂತೋಷ, ನೆಮ್ಮದಿಯಿಂದ ಕೂಡಿ ಬಾಳಬೇಕೆಂಬುದೇ ಕಾಂಗ್ರೆಸ್ ಪಕ್ಷದ ಪರಮ ಗುರಿ. ಆದರೆ ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ಜಾತಿಗಳ ಮಧ್ಯೆ ಜಗಳ ತಂದು ದಂಗೆ ಶುರು ಮಾಡುವುದೇ ಬಿಜೆಪಿಯ ಕೆಲಸ” ಎಂದು ಮಲ್ಲಿಕಾರ್ಜುನ ಖರ್ಗೆ ಹರಿಹಾಯ್ದರು.
“ಇದು ಮಹತ್ವದ ಚುನಾವಣೆ, ನಾವೆಲ್ಲ ಒಗ್ಗಟ್ಟಾಗಿ ಮತ್ತು ಒಮ್ಮತದಿಂದ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ. ನಾವು ಪ್ರಯತ್ನ ಮಾಡದೇ ಹೋದರೆ, ಮುಂಬರುವ ಹೊಸ ಪೀಳಿಗೆಗೆ ಕುತ್ತು ಬರುವ ಸಾಧ್ಯತೆ ಇದೆ” ಎಂದು ಆತಂಕ ವ್ಯಕ್ತಪಡಿಸಿದರು.
“ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿದ್ದಾರೆ. ಅಡುಗೆ ಅನಿಲ ಬೆಲೆ ಗಗನಕ್ಕೇರಿದೆ. ಯುಪಿಎ ಸರ್ಕಾರವಿದ್ದಾಗ ಅಡುಗೆ ಅನಿಲ ಬೆಲೆ ರೂ 450, ಇತ್ತು, ಇದು ರೂ 1100 ಇದೆ. ಜನರಿಗೆ ಕಷ್ಟವಾಗುತ್ತಿದೆ. ಜನರ ಕಷ್ಟಗಳಿಗೆ ಕಿವಿಯಾಗುವಲ್ಲಿ ಈ ಬಿಜೆಪಿ ಸರ್ಕಾರ ವಿಫಲವಾಗಿದೆ. ಹಳೆ ಡಬ್ಬಿಗಳಿಗೆ ಬಣ್ಣಬಳಿದು, ಅದನ್ನು ಮೋದಿ ಅವರು ಹಸಿರು ನಿಶಾನೆ ತೋರಿಸುವುದೇ ಬಿಜೆಪಿ ಸಾಧನೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಗಿರುವ ಕೆಲಸಗಳ ಕುರಿತು ಬಿಜೆಪಿಯವರು ಹೇಳುವುದಿಲ್ಲ. ಎಲ್ಲವನ್ನೂ ತಮ್ಮದೆಂದು ಹೇಳಿಕೊಳ್ಳುತ್ತಾರೆ” ಎಂದರು.