ಬ್ಯಾಟರಾಯನಪುರ ಕ್ಷೇತ್ರ | ಕಾಂಗ್ರೆಸ್‌ನ ಭರವಸೆ ನಾಯಕ ಕೃಷ್ಣ ಬೈರೇಗೌಡ ಗೆಲುವಿಗೆ ನೀರೆರೆದ ಬಿಜೆಪಿ ಬಂಡಾಯ

Date:

ಯಾವುದೇ ವಿಷಯ ಇರಲಿ ಆಳವಾದ ಜ್ಞಾನದೊಂದಿಗೆ, ಚುರುಕಾಗಿ ವಿಷಯ ಮಂಡಿಸುವುದು ಕೃಷ್ಣ ಬೈರೇಗೌಡರ ಹೆಗ್ಗಳಿಕೆ. ಸರ್ಕಾರದ ಪ್ರತಿನಿಧಿಯಾಗಿ ದೇಶ, ವಿದೇಶಗಳಲ್ಲಿ ಭಾಗಿಯಾಗುವ ಮೂಲಕ ಕಾಂಗ್ರೆಸ್‌ನ ಭರವಸೆಯ ನಾಯಕರಾಗಿ ಅವರು ಹೊರಹೊಮ್ಮಿದ್ದಾರೆ. ಕೃಷ್ಣ ಬೈರೇಗೌಡ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಬ್ಯಾಟರಾಯನಪುರ ಕ್ಷೇತ್ರದಲ್ಲಿ ಬಿಜೆಪಿ ಕಸರತ್ತು ನಡೆಸಿದೆ.

ಕಾಂಗ್ರೆಸ್‌ನಲ್ಲಿ ಹೊಸ ತಲೆಮಾರಿನ ಮುಂಚೂಣಿ ನಾಯಕರಾಗಿ ಹೊರಹೊಮ್ಮಿರುವ ಹಾಲಿ ಶಾಸಕ ಕೃಷ್ಣ ಬೈರೇಗೌಡ ಮೇಧಾವಿ ರಾಜಕಾರಣಿಯಾಗಿ ಗುರುತಿಸಿಕೊಂಡವರು. ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಲ್ಲಿ ಕೃಷ್ಣ ಬೈರೇಗೌಡ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಈ ಬಾರಿಯ ಚುನಾವಣೆಯಲ್ಲೂ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು ಉತ್ತರ ಲೋಕಸಭಾ ವ್ಯಾಪ್ತಿಯಲ್ಲಿ ಬರುವ ಬ್ಯಾಟರಾಯನಪುರ ಕ್ಷೇತ್ರವನ್ನು ವಶಪಡಿಸಿಕೊಳ್ಳುವುದಕ್ಕೆ ಬಿಜೆಪಿ ಸತತವಾಗಿ ಪ್ರಯತ್ನಿಸಿದ್ದರೂ ಬ್ಯಾಟರಾಯನಪುರ ಮತದಾರರು ಮಾತ್ರ ಬಿಜೆಪಿಯನ್ನು ತಿರಸ್ಕರಿಸುತ್ತಲೇ ಬಂದಿದ್ದಾರೆ. ಈ ಬಾರಿ ಹೇಗಾದರೂ ಮಾಡಿ ಗೆಲ್ಲಲೇಬೇಕು ಎಂಬ ಹಠ ತೊಟ್ಟಿರುವ ಬಿಜೆಪಿ, ಕೃಷ್ಣ ಬೈರೇಗೌಡ ಗೆಲುವಿನ ನಾಗಾಲೋಟಕ್ಕೆ ಕಡಿವಾಣ ಹಾಕಲು ಹೊಸ ಮುಖ ಪರಿಚಯಿಸಿದೆ.

ತಮ್ಮ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಚ್‌ ಸಿ ತಮ್ಮೇಶ್‌ ಗೌಡರಿಗೆ ಬ್ಯಾಟರಾಯನಪುರ ಟಿಕೆಟ್‌ ಕೊಡಿಸುವಲ್ಲಿ ಬಿ ವೈ ವಿಜಯೇಂದ್ರ ತಮ್ಮ ತಂದೆಯ ಮೂಲಕ ಯಶಸ್ವಿಯಾಗಿದ್ದಾರೆ. ಬಿಜೆಪಿಯ ಯುವ ಮೋರ್ಚಾದ ಮುಖಂಡರಾಗಿದ್ದ ತಮ್ಮೇಶ್‌ ಗೌಡರಿಗೆ ಟಿಕೆಟ್‌ ಸಿಗುತ್ತಿದ್ದಂತೆ ಯಡಿಯೂರಪ್ಪ ಪ್ರತಿಕ್ರಿಯಿಸಿ, “ಬ್ಯಾಟರಾಯನಪುರ ಕ್ಷೇತ್ರದಲ್ಲಿ ತಮ್ಮೇಶ್‌ ಗೌಡರನ್ನು ಗೆಲ್ಲಿಸದೇ ಇದ್ದರೆ ನನ್ನ ಮರ್ಯಾದೆ ಉಳಿಯುವುದಿಲ್ಲ. ಇವನಿಗೋಸ್ಕರ ಮೂರ್ನಾಲ್ಕು ಗಂಟೆ ಹೈಕಮಾಂಡ್‌ ನಾಯಕರೊಂದಿಗೆ ಚರ್ಚಿಸಿ ಟಿಕೆಟ್‌ ಕೊಡಿಸಲಾಗಿದೆ. ಇವನು ಗೆಲ್ಲದಿದ್ದರೆ ನಾನು ತಲೆಯೆತ್ತಿ ಓಡಾಡಲು ಆಗುವುದಿಲ್ಲ” ಎಂದು ಹೇಳುವ ಮೂಲಕ ‘ತಮ್ಮೇಶ್‌ ಗೌಡ ನನ್ನ ಅಭ್ಯರ್ಥಿ’ ಎಂಬುದನ್ನು ಬಿಎಸ್‌ವೈ ಬಲವಾಗಿ ಪ್ರತಿಪಾದಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಆದರೆ, ಬ್ಯಾಟರಾಯನಪುರ ಕ್ಷೇತ್ರದಲ್ಲಿ ಹೊರಗಿನವರಾದ ತಮ್ಮೇಶ್ ಗೌಡ ಅಭ್ಯರ್ಥಿಯಾಗಿರುವುದು ಸ್ಥಳೀಯ ಬಿಜೆಪಿ ನಾಯಕರಿಗೆ ಅಸಮಾಧಾನ ತರಿಸಿದೆ. ಸಚಿವ ಆರ್ ಅಶೋಕ ಅವರ ಸಹೋದರ ಸಂಬಂಧಿ ಎ ರವಿ, ಕೃಷ್ಣ ಬೈರೇಗೌಡ ವಿರುದ್ಧ ಮೂರು ಬಾರಿ ಸ್ಪರ್ಧಿಸಿ ಸೋಲು ಕಂಡಿದ್ದರು. ಕಳೆದ ಬಾರಿ ಕೇವಲ 5,671 ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಸತತ ಸೋಲಿನ ಅನುಕಂಪದ ಅಲೆಯನ್ನೇ ಗೆಲುವಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸುವ ಲೆಕ್ಕಾಚಾರದಲ್ಲಿ ಎ ರವಿ ಇದ್ದರು. ಆದರೆ, ಕೊನೆ ಕ್ಷಣದಲ್ಲಿ ರವಿಗೆ ಟಿಕೆಟ್ ತಪ್ಪಿದ್ದು, ಈಗ ಅವರು ಬಿಜೆಪಿ ವಿರುದ್ಧ ತೀವ್ರ ಅಸಮಾಧಾನ ಹೊಂದಿದ್ದಾರೆ.

ಮಾಜಿ ಕಾರ್ಪೊರೇಟರ್ ಮುನೀಂದ್ರ ಕುಮಾರ್, ಸ್ಥಳೀಯ ಮುಖಂಡ ಚಕ್ರಪಾಣಿ ಕೂಡ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಈಗ ಅವರು ಕೂಡ ತಮ್ಮೇಶ್‌ ಗೌಡರಿಗೆ ಅಷ್ಟು ಸಹಕಾರ ಕೊಡದೇ ಬಿಜೆಪಿ ಲೆಕ್ಕಾಚಾರಕ್ಕೆ ತಿರುಗು ಬಾಣವಾಗಿದ್ದಾರೆ. ಇದರಿಂದಾಗಿ ಬ್ಯಾಟರಾಯನಪುರದ ಒಳಬಂಡಾಯ ಬಿಜೆಪಿಗೆ ಮುಳುವಾಗುವ ಸಾಧ್ಯತೆಯೇ ಹೆಚ್ಚಿದೆ.

ಹೀಗಾಗಿ ಬಿಜೆಪಿ ಒಳಗಿನ ಬೇಗುದಿ ಕ್ಷೇತ್ರದಲ್ಲಿ ಚುನಾವಣೆ ಮೇಲೆ ಸಹಜವಾಗಿ ಪರಿಣಾಮ ಬೀರಲಿದ್ದು, ಎ ರವಿಯ ಸ್ವಂತ ಮತಗಳು ಮತ್ತು ಬಿಜೆಪಿ ಮತಗಳು ಸ್ವಲ್ಪ ಪ್ರಮಾಣದಲ್ಲಿ ಒಡೆದು ಹಂಚಿಕೆಯಾಗಲಿವೆ ಎಂಬ ಮಾತುಗಳು ಕ್ಷೇತ್ರದಲ್ಲಿ ವ್ಯಕ್ತವಾಗುತ್ತಿವೆ. ಬಿಜೆಪಿ ಒಳ ಜಗಳ ಸಹಜವಾಗಿ ಕೃಷ್ಣ ಬೈರೇಗೌಡರ ಗೆಲುವಿಗೆ ಮತ್ತಷ್ಟು ನೀರೆರೆಯಲಿದೆ.

ಕೃಷ್ಣ ಬೈರೇಗೌಡ
ಬ್ಯಾಟರಾಯನಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಮ್ಮೇಶ್‌ ಗೌಡ ಅವರು ಬಿ ಎಸ್‌ ಯಡಿಯೂರಪ್ಪ ಮತ್ತು ಬಿ ವೈ ವಿಜಯೇಂದ್ರ ಜೊತೆಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿರುವುದು

ಕಾಂಗ್ರೆಸ್‌ನ ಪ್ರಭಾವಿ ನಾಯಕರಾಗಿ ಬೆಳೆದ ಕೃಷ್ಣ ಬೈರೇಗೌಡ

ಕರ್ನಾಟಕ ಕಾಂಗ್ರೆಸ್‌ನ ಯುವ ತಲೆಮಾರು ನಾಯಕರಲ್ಲಿ ಹೆಚ್ಚು ಗಮನ ಸೆಳೆಯುವ ನಾಯಕ ಕೃಷ್ಣ ಬೈರೇಗೌಡ. ಮಾಜಿ ಸಚಿವ ದಿವಂಗತ ಸಿ ಬೈರೇಗೌಡರ ಪುತ್ರರಾದ ಇವರು, ಅಮೆರಿಕದಲ್ಲಿ ವ್ಯಾಸಂಗ ಮಾಡಿದವರು. 2003ರಲ್ಲಿ ತಂದೆ ನಿಧನರಾದ ಬಳಿಕ ಕೋಲಾರ ಜಿಲ್ಲೆಯ ವೇಮಗಲ್ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿದ ಅವರು, ಈವರೆಗೂ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

2004ರಲ್ಲಿ ವೇಮಗಲ್ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಪುನರಾಯ್ಕೆಗೊಂಡರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾಗಿ, ವೇಮಗಲ್ ಕ್ಷೇತ್ರ ಅಸ್ತಿತ್ವ ಕಳೆದುಕೊಂಡಿತು. 2008ರ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರು ನಗರದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಸ್ಪರ್ಧಿಸಿ ವಿಧಾನಸಭೆಗೆ ಮರು ಆಯ್ಕೆಯಾದರು.

2008, 2013 ಹಾಗೂ 2018ರ ಚುನಾವಣೆಯಲ್ಲಿ ಬ್ಯಾಟರಾಯನಪುರ ಕ್ಷೇತ್ರದಿಂದ ಕೃಷ್ಣ ಬೈರೇಗೌಡ ಹ್ಯಾಟ್ರಿಕ್‌ ಗೆಲುವು ಸಾಧಿಸಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿ, ಯುವ ನಾಯಕರಾಗಿ ಗುರುತಿಸಿಕೊಂಡಿದ್ದು, ತಮ್ಮ ವಿಶಿಷ್ಟ ಕೃಷಿ ಕಾರ್ಯಕ್ರಮಗಳ ಮೂಲಕ ರಾಜ್ಯದ ಗಮನ ಸೆಳೆದವರು. ಇದೀಗ ರಾಷ್ಟ್ರಮಟ್ಟದಲ್ಲಿ ಸಿರಿಧಾನ್ಯ ಯೋಜನೆ ಪ್ರಸಿದ್ಧಿಪಡೆಯುತ್ತಿರುವಾಗ, ರಾಜ್ಯದಲ್ಲಿ ಪ್ರಾಥಮಿಕ ಹಂತದಲ್ಲಿ ಸಿರಿಧಾನ್ಯವನ್ನು ಮುನ್ನೆಲೆಗೆ ತಂದವರು ಕೃಷ್ಣ ಭೈರೇಗೌಡ. ʼಸಿರಿಧಾನ್ಯ ಮೇಳʼ ಎಂದರೆ ಕೃಷ್ಣ ಬೈರೇಗೌಡ ಹೆಸರು ತಟ್ಟನೆ ನೆನಪಾಗುವ ಮಟ್ಟಕ್ಕೆ ಅವರು ಹೆಸರು ಪ್ರಸಿದ್ಧಿಗೆ ಬಂದಿದೆ.

ಈ ಸುದ್ದಿ ಓದಿದ್ದೀರಾ?: ಈದಿನ.ಕಾಮ್‌ ಸಮೀಕ್ಷೆ-8: ಕಾಂಗ್ರೆಸ್‌ಗೆ ಸಿಗಲಿದೆ ಸ್ಪಷ್ಟ ಬಹುಮತ; 132-140 ಸೀಟುಗಳ ನಿರೀಕ್ಷೆ

ಎಚ್‌ ಡಿ ಕುಮಾರಸ್ವಾಮಿ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. ಯಾವುದೇ ವಿಷಯ ಇರಲಿ, ಆಳವಾದ ಜ್ಞಾನದೊಂದಿಗೆ, ಚುರುಕಾಗಿ ವಿಷಯ ಮಂಡಿಸುವುದು ಕೃಷ್ಣ ಬೈರೇಗೌಡರ ಹೆಗ್ಗಳಿಕೆ. ಈ ಕಾರಣಕ್ಕಾಗಿಯೇ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಸರ್ಕಾರದಲ್ಲಿ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಭೆ ಸಮಾರಂಭಗಳಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಭಾಗಿಯಾಗುವ ಮೂಲಕ ಕಾಂಗ್ರೆಸ್‌ನ ಭರವಸೆ ನಾಯಕರಾಗಿ ಹೊರಹೊಮ್ಮಿದ್ದಾರೆ.

ರಾಜಕೀಯದ ಕಡು ಸೈದ್ಧಾಂತಿಕ ಮಾತುಗಾರ ಅಲ್ಲದ ಕೃಷ್ಣ ಬೈರೇಗೌಡ, ಪ್ರತಿಪಕ್ಷದಲ್ಲಿ ನಿಂತು ಆಡುವ ಮಾತುಗಳಿಗೂ ವಿಶೇಷ ಬೆಲೆ ಇದೆ. ಆಳುವ ಸರ್ಕಾರಕ್ಕೆ ಚಾಟಿ ಬೀಸುವುದರಲ್ಲೂ ಅವರು ಹಿಂದೆ ಬಿದ್ದಿಲ್ಲ. ಅಧಿವೇಶನ ಸಂದರ್ಭದಲ್ಲಿ ಕೃಷ್ಣ ಬೈರೇಗೌಡ ಗಮನ ಸೆಳೆಯುವ ವಿಷಯಗಳಿಗೆ ಆಡಳಿತ ಪಕ್ಷದ ಸದಸ್ಯರು ತಾಳ್ಮೆಯಿಂದ ಕಿವಿಗೊಡುತ್ತಾರೆ.

ಕೃಷ್ಣ ಬೈರೇಗೌಡ

ತನ್ನ ಕ್ಷೇತ್ರದ ಹೊರತಾಗಿಯೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಅವರು, ರೈತರ ಸಮಸ್ಯೆಗಳನ್ನು ಆಳವಾಗಿ ಅರ್ಥ ಮಾಡಿಕೊಂಡಿದ್ದಾರೆ.  ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರಿಗಾಗಿ ಮಹತ್ವದ ಯೋಜನೆಗಳನ್ನು ರೂಪಿಸಿದ್ದು ಇದಕ್ಕೆ ಸಾಕ್ಷಿ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳ ನೀರಿನ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡಿದ್ದೂ ಕೃಷ್ಣ ಬೈರೇಗೌಡ.

ಸಿದ್ದರಾಮಯ್ಯ ಆತ್ಮೀಯ ಬಳಗದಲ್ಲಿ ಗುರುತಿಸಿಕೊಂಡಿದ್ದರೂ, ರಾಜಕೀಯದಲ್ಲಿ ಅಜಾತಶತ್ರುವಾಗಿ ಬೈರೇಗೌಡ ಬೆಳೆಯುತ್ತಿದ್ದಾರೆ. ಪಕ್ಷದ ವರ್ಚಸ್ಸಿಗಿಂತ, ವೈಯಕ್ತಿಕ ವರ್ಚಸ್ಸನ್ನೇ ಮುಂದುಮಾಡಿಕೊಂಡು ರಾಜಕೀಯದಲ್ಲಿ ದಾಪುಗಾಲಿಡುತ್ತಿರುವ ಅವರು, ಬ್ಯಾಟರಾಯನಪುರ ಕ್ಷೇತ್ರದಲ್ಲಿ ತಾವು ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳ ಶ್ರೀರಕ್ಷೆಯನ್ನೇ ನೆಚ್ಚಿಕೊಂಡು ಈ ಬಾರಿ ಕಣದಲ್ಲಿದ್ದಾರೆ. ಜನರ ಕೈಗೆ ಸುಲಭವಾಗಿ ಸಿಗುತ್ತಾರೆ, ಸಮಸ್ಯೆಗಳಿಗೆ ಸ್ಪಂದಿಸುತ್ತಾರೆ ಎನ್ನುವುದು ಅವರ ಪ್ಲಸ್‌ ಪಾಯಿಂಟ್‌.

ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ನಡುವೆ ಜೆಡಿಎಸ್ ಬಲ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಈ ಬಾರಿ ನಾಗರಾಜ್‌ ಎಂಬುರನ್ನು ಜೆಡಿಎಸ್‌ ಕಣಕ್ಕಿಳಿಸಿದೆ. ಕ್ಷೇತ್ರದಲ್ಲಿ ಒಕ್ಕಲಿಗರು, ಪರಿಶಿಷ್ಟರು ಮತ್ತು ಮುಸ್ಲಿಂ ಸಮುದಾಯದವರೇ ನಿರ್ಣಾಯಕರು. ಒಕ್ಕಲಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಜತೆಗೆ, ವಿವಿಧ ಭಾಷೆಗಳ ಜನರು ಸಹ ಇಲ್ಲಿ ನೆಲೆಸಿದ್ದಾರೆ.

ಬ್ಯಾಟರಾಯನಪುರ ಕ್ಷೇತ್ರದಲ್ಲಿ ಒಟ್ಟು 4,69,806 ಮತದಾರರಿದ್ದು, ಪುರುಷರು- 2,43,755, ಮಹಿಳೆಯರು- 2,25,938 ಹಾಗೂ ತೃತೀಯ ಲಿಂಗಿಗಳು- 113 ಇದ್ದಾರೆ. ಇದರಲ್ಲಿ ಒಕ್ಕಲಿಗ -1,40,000, ಎಸ್‌ಸಿ-ಎಸ್‌ಟಿ 1,00,000, ಮುಸ್ಲಿಂ-80,000, ಕ್ರಿಶ್ಚಿಯನ್-40,000, ಲಿಂಗಾಯತ-26,000, ತಿಗಳ-20,000, ಬ್ರಾಹ್ಮಣ-10,000 ಹಾಗೂ 15 ಸಾವಿರಕ್ಕೂ ಹೆಚ್ಚು ಇತರೆ ಮತಗಳು ಇವೆ.

+ posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ನನ್ನ ನೆಚ್ಚಿನ ಪತ್ರಿಕೆ.ಹೊಸದಾಗಿ ನೋಡುತ್ತಿದ್ದೇನೆ.ಪ್ರಜಾಪ್ರಭುತ್ವ,,ಸ್ವತಂತ್ರ ಪತ್ರಿಕೋದ್ಯಮ,ಸೆಕ್ಯುಲರಿಸ್ಮ್ ಹಾಗು ಜನಪರ ನಿಲುವು ನಿಮ್ಮದು ಎಂದು ಸ್ಪಷ್ಟವಾಗಿ ಕಾಣುತ್ತಿದೆ.
    ಈ ಪತ್ರಿಕೆಯ ಒಡೆತನ ಹಾಗು ಸಂಪಾದಕ ಮಂಡಳಿಯ ಮಾಹಿತಿ ಎಲ್ಲಿ ದೊರೆಯುತ್ತದೆ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ ಚುನಾವಣೆ | ಬಿಜೆಪಿ ಗೆಲುವಿಗೆ 13 ರಾಜ್ಯಗಳ ಸವಾಲು! ಆಕ್ಸಿಸ್ ಎಂಡಿ ಗುಪ್ತಾ ಹೇಳುವುದೇನು? 

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 400ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂಬ...

ಲೋಕಸಭಾ ಚುನಾವಣೆ | ಬೆಂಗಳೂರಲ್ಲಿ ಏ.24 ರಿಂದ 26 ರವರೆಗೆ ಸೆಕ್ಷನ್ 144 ಜಾರಿ

ಲೋಕಸಭಾ ಚುನಾವಣೆ ಹಿನ್ನೆಲೆ, ಏಪ್ರಿಲ್ 24ರ ಸಂಜೆ 6ರಿಂದ ಏಪ್ರಿಲ್ 26ರವರ...

ರಾಹುಲ್ V/s ಪಿಣರಾಯಿ; ಕೇರಳದಲ್ಲಿ ಲೋಕಸಭಾ ಚುನಾವಣಾ ಅಬ್ಬರ

ಕೇರಳದಲ್ಲಿ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಮತದಾನಕ್ಕೆ ಒಂದು ವಾರವಷ್ಟೇ ಬಾಕಿ...

ಕಲಬುರಗಿಯಲ್ಲಿ ಬಿಜೆಪಿಗೆ ಹಿನ್ನಡೆ; ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್‌ ಸೇರ್ಪಡೆ

ಲೋಕಸಭೆ ಚುನಾವಣೆಯ ವೇಳೆ ಕಲಬುರಗಿ ಕ್ಷೇತ್ರದಲ್ಲಿ ಬಿಜೆಪಿಗೆ ಹಿನ್ನಡೆ ಉಂಟಾಗಿದೆ. ಮಾಜಿ...