ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ಕಾವೇರಿ ನೀರು ಹಂಚಿಕೆ ಮತ್ತು ಮೇಕೆದಾಟು ಯೋಜನೆ ವಿವಾದಕ್ಕೆ ಮುನ್ನೆಲೆಗೆ ಬಂದಿದೆ. ತಮಿಳುನಾಡಿಗೆ ಪ್ರತಿ ದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ‘ಕಾವೇರಿ ನೀರು ನಿರ್ವಹಣಾ ಮಂಡಳಿ’ ಸೂಚಿಸಿರುವುದು ರಾಜ್ಯಕ್ಕೆ ಹಿನ್ನಡೆ ಉಂಟು ಮಾಡಿದೆ. ಇದೇ ವಿಚಾರವಾಗಿ, ರಾಜ್ಯದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದೀಗ, ತಮಿಳುನಾಡು ಸಿಎಂ ವಿಜಯ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಪತ್ರ ಬರೆದಿದ್ದಾರೆ. ವಿವಾದವನ್ನು ಪರಿಹರಿಸಲು ಸೌಹಾರ್ದಯುತ ಮಾರ್ಗಕ್ಕಾಗಿ ಮನವಿ ಮಾಡಿದ್ದಾರೆ.
“ಕಾವೇರಿ ವಿಷಯದಲ್ಲಿ ರಾಜಕೀಯ ವೈರತ್ವವನ್ನು ಬದಿಗಿಟ್ಟು, ಎರಡೂ ರಾಜ್ಯಗಳ ಹಿತಾಸಕ್ತಿಗೆ ಪೂರಕವಾಗಿ ಮಾರ್ಗವನ್ನು ಕಂಡುಕೊಳ್ಳಲು ಸಹಕಾರ ನೀಡಬೇಕು” ಎಂದು ಪತ್ರದಲ್ಲಿ ಕೋರಿದ್ದಾರೆ.
“ಕರ್ನಾಟಕ ಮತ್ತು ತಮಿಳುನಾಡು ನಡುವಿನ ಬಾಂಧವ್ಯ ಬಹಳಷ್ಟು ಹಿಂದಿನದು. ಎರಡೂ ರಾಜ್ಯಗಳು ಶತಮಾನಗಳಿಂದಲೂ ಇತಿಹಾಸ, ಸಂಸ್ಕೃತಿ, ವಾಣಿಜ್ಯ ಹಾಗೂ ಜನರ ನಡುವಿನ ಆತ್ಮೀಯ ಸಂಬಂಧದ ಮೂಲಕ ಒಂದಾಗಿವೆ. ಕೋಟ್ಯಂತರ ತಮಿಳರು ಕರ್ನಾಟಕವನ್ನು—ವಿಶೇಷವಾಗಿ ಬೆಂಗಳೂರನ್ನು ತಮ್ಮ ಸ್ವಂತ ಮನೆಯಾಗಿ ಮಾಡಿಕೊಂಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಅದೇ ರೀತಿ, ತಮಿಳುನಾಡಿನಲ್ಲಿರುವ ಕನ್ನಡಿಗರೂ ಅಲ್ಲಿನ ಪ್ರಗತಿಗೆ ಶ್ರಮಿಸುತ್ತಿದ್ದಾರೆ” ಎಂದು ವಿಜಯೇಂದ್ರ ವಿವರಿಸಿದ್ದಾರೆ.
“ವಿವಾದಗಳನ್ನು ನಾವು ಹೇಗೆ ಬಗೆಹರಿಸಿಕೊಳ್ಳುತ್ತೇವೆ ಎಂಬುದೇ ಪ್ರಮುಖ ವಿಷಯ. ಹಿಂದೆ ಬೆಂಗಳೂರಿನಲ್ಲಿ ತಿರುಳ್ಳುವರ್ ಪ್ರತಿಮೆ ಸ್ಥಾಪನೆ ವಿಚಾರ ನನೆಗುದಿಗೆ ಬಿದ್ದಿತ್ತು. ಆದರೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮತ್ತು ತಮಿಳುನಾಡಿನ ಮಾಜಿ ಸಿಎಂ ಎಂ. ಕರುಣಾನಿಧಿ ಅವರ ರಾಜತಾಂತ್ರಿಕ ಪ್ರೌಢತೆ ಮತ್ತು ಔದಾರ್ಯದಿಂದ ಅದು ಇತ್ಯರ್ಥವಾಗಿತ್ತು. ಜನರ ಒಳಿತನ್ನು ಮನಸ್ಸಿನಲ್ಲಿಟ್ಟುಕೊಂಡರೆ ಎಂಥದ್ದೇ ಸವಾಲನ್ನೂ ಎದುರಿಸಬಹುದು ಎಂಬುದಕ್ಕೆ ಅದೇ ಸಾಕ್ಷಿ” ಎಂದು ನೆನಪಿಸಿದ್ದಾರೆ.
“ಕಾವೇರಿ ನದಿಯು ಬೆಂಗಳೂರು ಸೇರಿದಂತೆ ಕೋಟ್ಯಂತರ ಜನರ ಕುಡಿಯುವ ನೀರಿನ ಜೀವನಾಡಿಯಾಗಿದೆ. ಮಾನ್ಸೂನ್ ಅನಿಶ್ಚಿತತೆಯಿಂದಾಗಿ ರೈತರು ಮತ್ತು ಸಾರ್ವಜನಿಕರು ತೀವ್ರ ಸಂಕಷ್ಟದಲ್ಲಿದ್ದಾರೆ. ತಮಿಳುನಾಡಿನ ಹಿತವನ್ನು ಗೌರವಿಸುವಂತೆಯೇ, ಕರ್ನಾಟಕದ ಜನರ ಸಂಕಷ್ಟಕ್ಕೂ ಸಹಾನುಭೂತಿಯಿಂದ ಸ್ಪಂದಿಸಿ ಚರ್ಚೆ ನಡೆಸಬೇಕು. ಈ ವಿವಾದವು ಜನರನ್ನು ವಿಭಜಿಸುವ ಗೋಡೆಯಾಗದೆ, ಒಗ್ಗೂಡಿಸುವ ಸೇತುವೆಯಾಗಬೇಕು” ಎಂದು ವಿಜಯೇಂದ್ರ ಹೇಳಿದ್ದಾರೆ.



