ಅಲ್ಲಮ ತನ್ನ ವಚನಗಳಲ್ಲಿ ಬಳಸಿರುವ ವಿಶಿಷ್ಟವಾದ 101 ಪದಗಳನ್ನು ಗುರುತಿಸಿ, ಪ್ರತಿ ಪದದ ಬಗ್ಗೆ ಈ ಕೆಳಗಿನ ಮಾದರಿಯಲ್ಲಿ ವಿವರಿಸಲಾಗುವುದು. ಈದಿನ ಓದುಗರಿಗಾಗಿ ಅಲ್ಲಮನ ಅರಿವು…
ಸೊಪ್ಪಡಗಿದ ಸುಮ್ಮಾನಿ
ಸೊಪ್ಪಡಗಿದ ಸುಮ್ಮಾನಿಗಳವರಲ್ಲಿ ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ?
ಅಂಗವೆಲ್ಲ ನಷ್ಟವಾಗಿ ಲಿಂಗಲೀಯವಾದವರಲ್ಲಿ
ಗತಿಯನರಸುವರೆ?
ಅವರಲ್ಲಿ ಮತಿಯನರಸುವರೆ? ಗುಹೇಶ್ವರನೆಂಬ ನಿಜ ನಿಂದವರಲ್ಲಿ?
ಪದಾರ್ಥ:
ಸೊಪ್ಪಡಗಿದ = ಅಹಂಕಾರ ಅಡಗಿದ
ಸುಮ್ಮಾನಿ = ಪ್ರಸನ್ನ ಚಿತ್ತ, ಸಂತೋಷವಾಗಿರುವ ವ್ಯಕ್ತಿ
ವಚನಾರ್ಥ:
ಗತಿಯನರಸುವುದು ಮತ್ತು ಮತಿಯನರಸುವುದು ಇವೆರಡೂ ವಚನದ ಮುಖ್ಯ ವಸ್ತುಗಳು. ಗತಿಯನರಸುವುದು ಅಂದರೆ ಒಬ್ಬ ವ್ಯಕ್ತಿಯ ನಡೆ ನುಡಿಗಳನ್ನು ಗಮನಿಸುವುದು. ಮತಿಯನರಸುವುದು ಅಂದರೆ ಒಬ್ಬ ವ್ಯಕ್ತಿಯ ಚಿಂತನೆಗಳನ್ನು ಅನುಸರಿಸುವುದು. ದೈನಂದಿನ ಜೀವನದಲ್ಲಿ ವ್ಯಕ್ತಿಗಳೊಂದಿಗೆ ವ್ಯವಹರಿಸುವಾಗ ಅವರ ನಡೆನುಡಿಗಳನ್ನು ಮತ್ತು ಅವರ ಆಲೋಚನಾ ಕ್ರಮವನ್ನು ಗಮನಿಸುತ್ತೇವೆ. ಅದರಂತೆ ಸೂಕ್ತ ರೀತಿಯಲ್ಲಿ ಪರಸ್ಪರ ಸ್ಪಂದಿಸಿ ಲೋಕಾರೂಢಿಯಂತೆ ವ್ಯವಹರಿಸಿಕೊಳ್ಳುತ್ತೇವೆ. ಆದರೆ ಅಧ್ಯಾತ್ಮದ ಉತ್ತುಂಗ ಸ್ಥಿತಿಯಲ್ಲಿರುವ ಶರಣ ವ್ಯಕ್ತಿತ್ವವನ್ನು ಗಮನಿಸಿದಾಗ ಅಲ್ಲಿ ಗತಿಯಿಲ್ಲ, ಮತಿಯಿಲ್ಲ. ಅಂತಹ ಶರಣ ಗುಹೇಶ್ವರನೆಂಬ ನಿಜದಲ್ಲಿ ನಿಂದವನು. ನಿಜವನರಿತ ನಿಶ್ಚಿಂತ. ಆತನ ಅಂಗವೆಲ್ಲ ನಷ್ಟವಾಗಿದೆ ಅಂದರೆ ಆತನಿಗೆ ದೇಹ ಮೋಹವಿಲ್ಲ. ಆತನ ಗತಿ ಮತಿಗಳು ಲಿಂಗಮಯವಾಗಿವೆ. ಇಂತಹ ಸ್ಥಿತಿಯಲ್ಲಿ ಶರಣ ಸೊಪ್ಪಡಗಿದ ಸುಮ್ಮಾನಿ.
ಪದಪ್ರಯೋಗಾರ್ಥ:
ಸೊಪ್ಪಡಗಿದ ಸುಮ್ಮಾನಿ. ಅಹಂಕಾರವೆಲ್ಲ ಅಡಗಿ ಪ್ರಸನ್ನ ಮನಸ್ಥಿತಿಯುಳ್ಳ ವ್ಯಕ್ತಿಯೇ ಸೊಪ್ಪಡಗಿದ ಸುಮ್ಮಾನಿ. ಇಲ್ಲಿ ಅನನ್ಯವಾದ ಮತ್ತು ಅದ್ಭುತವಾದ ಪದ ಜೋಡಣೆಯಿದೆ. ಇದರಲ್ಲಿ ಶಬ್ದ ಚಮತ್ಕಾರವಿದೆ. ಪ್ರಾಸವಿದೆ. ಅರ್ಥವಿದೆ. ಆಕರ್ಷಣೆಯಿದೆ. ಸೊಗಡಿದೆ. ಸೊಪ್ಪು ಅಂದರೆ ಸೊಕ್ಕು, ಮದ ಎಂದು ಅರ್ಥೈಸಬಹುದು. ಜೀವನದ ಗತಿಯ ಪಯಣದಲ್ಲಿ ಯೌವನ ಮತ್ತು ಗಳಿಕೆಯ ಪ್ರಭಾವದಿಂದ ಮೈ ಮನಗಳಲ್ಲಿ ಸೊಕ್ಕು, ಮದ ಆವರಿಸುವುದು ಸಹಜ. ಆದರೆ ಅದನ್ನು ಸಕಾಲದಲ್ಲಿ ಅಡಗಿಸುವುದು ವಿವೇಕ. ಅವನಲ್ಲಿ ಭಾರೀ ಕೊಬ್ಬಿತ್ತು, ಈಗ ಕರಗಿದೆ ಅಂತ ರೂಢಿಯಲ್ಲಿ ಮಾತಾಡುವ ಸಂದರ್ಭಗಳಿವೆ. ಕೊಬ್ಬು ಕರಗುವುದು ಅಂದರೆ ಸೊಪ್ಪಡಗುವುದು ಎಂದರ್ಥ. ಅಲ್ಲಮನೇ ಇನ್ನೊಂದು ಕಡೆ “ಕುಲಮದ ಛಲಮದ ವಿದ್ಯಾಮದದವರ ತೋರದಿರಾ, ಅವರ ಗರುವ ಗಂಭೀರವನೆನಗೆ ತೋರದಿರಾ” ಎಂದು ಗುಹೇಶ್ವರನಲ್ಲಿ ಆಗ್ರಹಿಸುವ ವಚನವಿದೆ. ಮದ, ಗರ್ವ, ಗಂಭೀರ ಅಡಗಿದ ವಿನಯವಂತನೆ ಸೊಪ್ಪಡಗಿದವನು. ಸೊಪ್ಪಡಗಿದ ನಂತರ ಆತ ಸುಮ್ಮಾನಿ ಆಗುತ್ತಾನೆ. ಅಂದರೆ ಪ್ರಸನ್ನ ಚಿತ್ತನಾಗುತ್ತಾನೆ. ಸಂತೋಷವಾಗಿರುವ ವ್ಯಕ್ತಿಯಾಗಿರುತ್ತಾನೆ. ಸೊಪ್ಪಡಗಿದ ಸುಮ್ಮಾನಿ ಎಂಬುದು ಅಲ್ಲಮ ಪ್ರಯೋಗಿಸಿರುವ ಅತ್ಯಂತ ವಿಶಿಷ್ಟ ಪದ.
ದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಒಡಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಮಾಯದ ಮಂಜು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ದಳದುಳಿ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಬಯಲು
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ನಷ್ಟಸಂತಾನ
ಇದನ್ನು ಓದಿದ್ದೀರಾ?: ಅಲ್ಲಮನ ಅನನ್ಯ ಪದಪ್ರಯೋಗಗಳು | ಅಗ್ನಿಸ್ತಂಭದ ರಕ್ಷೆ

ಹರಿಹರ ಶಿವಕುಮಾರ್
ಲೇಖಕ, ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಲೆಕ್ಕಪರಿಶೋಧನೆ ಮತ್ತು ತೆರಿಗೆ ವಿಚಾರಗಳಲ್ಲಿ ಪರಿಣತಿ. ಕನ್ನಡದಲ್ಲಿ ಕಂಪ್ಯೂಟರ್ ಬಳಕೆ ಇವರ ಹವ್ಯಾಸ. ಕನ್ನಡ ಭಾಷೆ ಮತ್ತು ಸಾಹಿತ್ಯದಲ್ಲಿ ಆಸಕ್ತರು. ಶಿವಮೊಗ್ಗ ಜಿಲ್ಲೆಯವರು, ಸದ್ಯ ಬೆಂಗಳೂರಿನಲ್ಲಿ ನೆಲೆ.



