ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಕಲಬೀಳಗಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿ ನಿವಾಸಿಗಳು ತಮ್ಮ ಸಮುದಾಯದ ಶವ ಸಂಸ್ಕಾರಕ್ಕೆ ಸರ್ವೆ ನಂ.71/4ರಲ್ಲೇ 20 ಗುಂಟೆ ಜಾಗವನ್ನು ಶಾಶ್ವತವಾಗಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಉಪವಿಭಾಗಾಧಿಕಾರಿ ಹಾಗೂ ಉಪವಿಭಾಗೀಯ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಪರಿಶಿಷ್ಟ ಜಾತಿಯ ಹರಿಜನರು ಹಾಗೂ ಮಾದಿಗ ಸಮುದಾಯದವರು ಪೂರ್ವಜರ ಕಾಲದಿಂದಲೂ ಸರ್ವೆ ನಂ. 71/4ರಲ್ಲಿ ಶವ ಸಂಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಕೆಲ ಗ್ರಾಮ ಮುಖಂಡರ ಪ್ರಚೋದನೆಯಿಂದ ಸ್ಮಶಾನಕ್ಕೆ ತೆರಳುವ ದಾರಿ ಹಾಗೂ ಶವ ಸಂಸ್ಕಾರಕ್ಕೆ ಅಡ್ಡಿಪಡಿಸಲಾಗುತ್ತಿದೆ ಎಂದು ನಿವಾಸಿಗಳು ಮನವಿಯಲ್ಲಿ ಆರೋಪಿಸಿದ್ದಾರೆ.
ಸ್ಮಶಾನಕ್ಕೆ ತೆರಳುವ ಮಾರ್ಗಕ್ಕೆ ಇತ್ತೀಚೆಗೆ ಒಡ್ಡು, ಶೆಡ್ ಹಾಗೂ ತಂತಿ ಬೇಲಿ ನಿರ್ಮಿಸಲಾಗಿದ್ದು, ಇದರಿಂದ ಮೃತರ ಶವ ಸಂಸ್ಕಾರ ನಡೆಸಲು ತೀವ್ರ ತೊಂದರೆಯಾಗುತ್ತಿದೆ. ಮೃತ ವ್ಯಕ್ತಿಯ ಅಂತ್ಯಕ್ರಿಯೆಗಾಗಿ ಸಂಬಂಧಿಕರು ಎರಡು-ಮೂರು ದಿನಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಸಮಸ್ಯೆ ಉಂಟಾದಾಗ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸುವುದು ಹಾಗೂ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಜೂನ್ 30ರಂದು ರಾಧಾಬಾಯಿ ಚಿದಾನಂದ ಪೋತಿ ಅವರ ನಿಧನದ ಸಂದರ್ಭದಲ್ಲಿಯೂ ಸ್ಮಶಾನಕ್ಕೆ ತೆರಳುವ ಮಾರ್ಗದಲ್ಲಿದ್ದ ತಂತಿ ಬೇಲಿಯಿಂದಾಗಿ ಶವ ಸಂಸ್ಕಾರಕ್ಕೆ ಅಡ್ಡಿಯುಂಟಾಯಿತು ಎಂದು ನಿವಾಸಿಗಳು ದೂರಿದ್ದಾರೆ. ಅಲ್ಲದೆ, ಕೆಲವರಿಂದ ಬೆದರಿಕೆಗಳು ಬರುತ್ತಿದ್ದು, ಇದರಿಂದ ಕಾಲೋನಿ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ಜನಸಂಖ್ಯೆಯನ್ನೂ ಪರಿಗಣಿಸಿ, ತಾವು ಹಿಂದಿನಿಂದಲೂ ಶವ ಸಂಸ್ಕಾರ ಮಾಡಿಕೊಂಡು ಬಂದಿರುವ ಸರ್ವೆ ನಂ.71/4ರಲ್ಲಿಯೇ ಸುಮಾರು 20 ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಶಾಶ್ವತವಾಗಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಸೆಪ್ಟೆಂಬರ್ 17ರಂದು ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸರ್ವೆ ನಂ.135/3ರ 1 ಎಕರೆ 20 ಗುಂಟೆ ಜನತಾ ಗೃಹ ಜಾಗೆಯಲ್ಲಿ, ಈಗಾಗಲೇ ಮನೆಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿರುವ ಪ್ರದೇಶಕ್ಕೆ ಹೊಂದಿಕೊಂಡಂತೆ ಸ್ಮಶಾನ ಜಾಗೆ ಮಂಜೂರು ಮಾಡುವ ಕುರಿತು ಚರ್ಚೆ ನಡೆದಿರುವುದು ತಮ್ಮ ಗಮನಕ್ಕೆ ಬಂದಿದೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಸರ್ವೆ ನಂ.135/3ರಲ್ಲಿ ಸ್ಮಶಾನ ಜಾಗೆ ಮಂಜೂರು ಮಾಡಬಾರದು. ಬದಲಾಗಿ, ಪೂರ್ವಜರ ಕಾಲದಿಂದ ಶವ ಸಂಸ್ಕಾರ ಮಾಡಿಕೊಂಡು ಬಂದಿರುವ ಸರ್ವೆ ನಂ.71/4ರಲ್ಲಿಯೇ 20 ಗುಂಟೆ ಜಾಗೆಯನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಬೇಕು ಎಂದು ಅಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಶಂಕರ ಪೂಜಾರಿ, ಪಾಂಡು ಕಾಂಬಳೆ, ಸುಖದೇವ ಕಾಂಬಳೆ, ಯಮನಪ್ಪ ಪೂಜಾರಿ, ವಿಠಲ ಪೂಜಾರಿ, ದುಂಡಪ್ಪ ಬೆಳ್ಳೆನ್ನವರ, ರಾಜು ಪೋತೆ, ಪ್ರಕಾಶ ಬೆಳ್ಳೆನ್ನವರ, ಯಲ್ಲವ್ವ ಕಾಂಬಳೆ, ರೇಷ್ಮಾ ಕವಟಗಿ, ನಿಂಬೆವ್ವ ಕಾಂಬಳೆ, ಮಾದೇವಿ ಬೆಳ್ಳೆನ್ನವರ, ಕಸ್ತೂರಿ ಪೂಜಾರಿ, ಹರಳಯ್ಯ ಪೂಜಾರಿ, ಶಿವಾನಂದ ಪೂಜಾರಿ ಇದ್ದರು.




