ರಾಜ್ಯ ಹೈಕೋರ್ಟ್ ಜುಲೈ 29ರಂದು ನೈಸ್ ಭೂಮಿಯನ್ನು ರೈತರಿಗೆ ವಾಪಸು ನೀಡಬೇಕೆಂದು ಮತ್ತು ಅಕ್ರಮವಾಗಿ ಸಂಗ್ರಹಿಸುತ್ತಿರುವ ಟೋಲ್ ಸಂಗ್ರಹ ನಿಲ್ಲಿಸಬೇಕೆಂದು ತೀರ್ಪು ನೀಡಿದ್ದರೂ ಅದನ್ನು ಜಾರಿಗೆ ತರದ ಕರ್ನಾಟಕದ ಡಿಕೆಶಿ ಸರ್ಕಾರ, ಭೂಮಿ ಕಳೆದುಕೊಂಡ ರೈತರನ್ನು, ರೈತ-ಕಾರ್ಮಿಕ ಸಂಘಗಳ ಮುಖಂಡರನ್ನು ಬಂಧಿಸಲು ಹೊರಟಿದೆ. ಇದನ್ನು ಸಿಪಿಐಎಂ ರಾಜ್ಯ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
ಕರ್ನಾಟಕ ಹೈಕೋರ್ಟ್ನ ತೀರ್ಪಿನ ಆಧಾರದಲ್ಲಿ ನೈಸ್ ಭೂಮಿಯನ್ನು ರೈತರಿಗೆ ವಾಪಸ್ ಮಾಡುವುದು ಮತ್ತು ಅಕ್ರಮವಾದ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕೆಂದು ಇಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇದನ್ನು ದಮನ ಮಾಡಲು ರಾಜ್ಯ ಸರ್ಕಾರ ಮಖಂಡರನ್ನು ಬಂಧಿಸುವ ಕೆಲಸ ಮಾಡುತ್ತಿದೆ ಎಂದು ಸಿಪಿಐಎಂ ತಿಳಿಸಿದೆ.
ಇದನ್ನೂ ಓದಿ: ನೈಸ್ ರಸ್ತೆಯ ಟಾಕ್ಸಿಕ್ ಮನರಂಜನೆ
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಯು.ಬಸವರಾಜು, ಮುಖಂಡರಾದ ಎನ್.ವೆಂಕಟಾಚಲಯ್ಯ, ಶಿವಣ್ಣ, ಚಂದ್ರಣ್ಣ, ಕಾರ್ಮಿಕ ಮುಖಂಡರಾದ ಮಹಾಂತೇಶ್ ಮತ್ತು ಇತರರನ್ನು ಬಂಧಿಸಲಾಗಿದೆ. ಇನ್ನೂ ಕೆಲವರನ್ನು ಬಂಧಿಸಲು ಪ್ರಯತ್ನಗಳು ನಡೆದಿವೆ. ಹೈಕೋರ್ಟ್ನ ಆದೇಶ ಇದೆಯೆಂದು ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡದ ಸರ್ಕಾರ, ನೈಸ್ ವಿರುದ್ದ ನೀಡಿರುವ ತೀರ್ಪನ್ನು 50 ದಿನ ಕಳೆದರೂ ಜಾರಿ ಮಾಡದೆ, ಪ್ರಜಾಸತ್ತಾತ್ಮಕವಾಗಿ ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲ. ಕರ್ನಾಟಕದ ಜನತೆ ಇದನ್ನು ವಿರೋಧಿಸಬೇಕಾಗಿದೆ ಎಂದು ಸಿಪಿಐಎಂ ಹೇಳಿದೆ.
ಇದನ್ನು ಖಂಡಿಸಿ, ಪಕ್ಷದ ಸಮಿತಿಗಳು, ಸಮೂಹ ಸಂಘಟನೆಗಳು ಮತ್ತು ಹಿತೈಷಿ ಸಂಘಟನೆಗಳನ್ನು ಒಳಗೊಂಡು ರಾಜ್ಯದ ಎಲ್ಲಾ ಕಡೆಗಳಲ್ಲೂ ಪ್ರತಿಭಟನೆಗಳನ್ನು ನಡೆಸಲು ಸಿಪಿಐಎಂ ಕರೆ ನೀಡಿದೆ.
ಬಂಧಿತರರನ್ನು ಕೂಡಲೇ ಬಿಡುಗಡೆ ಮಾಡಬೇಕು, ಪ್ರತಿಭಟನೆಗೆ ಅವಕಾಶ ನೀಡಬೇಕು ಹಾಗೂ ನೈಸ್ ಕಂಪನಿ ವಿರುದ್ದ ಹೈಕೋರ್ಟ್ ತೀರ್ಪಿನ ಅನ್ವಯ ಭೂಮಿಯನ್ನು ರೈತರಿಗೆ ವಾಪಾಸು ನೀಡಬೇಕು ಮತ್ತು ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸಬೇಕೆಂದು ಸಿಪಿಐಎಂ ಆಗ್ರಹಿಸಿದೆ.




