ರಾಜ್ಯದಲ್ಲಿ ಕರಡು ಮತದಾರರ ಪಟ್ಟಿ ಬಿಡುಗಡೆಯಾದ ಬಳಿಕ, ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮತ್ತು ವಿಚಾರಣೆಗಳು ನಡೆದ ನಂತರ, ಅಂತಿಮವಾಗಿ ಎಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂಬುದನ್ನು ಸಾರ್ವಜನಿಕವಾಗಿ ಪ್ರಕಟಿಸುವಂತೆ ಚುನಾವಣಾ ಆಯೋಗವನ್ನು ‘ಜಾಗೃತ ಕರ್ನಾಟಕ’ ಆಗ್ರಹಿಸಿದೆ.
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯು ಇತ್ತೀಚೆಗೆ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯ ಅಂಕಿಅಂಶಗಳನ್ನು ಉಲ್ಲೇಖಿಸಿ ಜಾಗೃತ ಕರ್ನಾಟಕ ಸಂಘಟನೆ ಪತ್ರಿಕಾ ಹೇಳಿಕೆ ನೀಡಿದೆ. ಎಸ್ಐಆರ್ನ ಎಲ್ಲ ಹಂತದ ಪ್ರಕ್ರಿಯೆಯ್ಲಿನ ಪಾರದರ್ಶಕತೆಯನ್ನು ಪ್ರಶ್ನಿಸಿದೆ.
ಆಯೋಗದ ಪ್ರಕಟಣೆಯ ಪ್ರಕಾರ, ರಾಜ್ಯಾದ್ಯಂತ ಒಟ್ಟು 43.81 ಲಕ್ಷಕ್ಕೂ ಅಧಿಕ ನೋಟಿಸ್ಗಳನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ. ಈ ಪೈಕಿ 34.96 ಲಕ್ಷಕ್ಕೂ ಹೆಚ್ಚು ನೋಟಿಸ್ಗಳನ್ನು ಸಾರ್ವಜನಿಕರಿಗೆ ವಿತರಿಸಲಾಗಿದ್ದು, ಇನ್ನೂ 8.85 ಲಕ್ಷಕ್ಕೂ ಅಧಿಕ ನೋಟಿಸ್ಗಳ ವಿತರಣೆ ಬಾಕಿ ಉಳಿದಿದೆ. ವಿತರಿಸಲಾದ ನೋಟಿಸ್ಗಳ ಪೈಕಿ 17.63 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ (50.43%) ವಿಚಾರಣೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಇನ್ನು 17.33 ಲಕ್ಷಕ್ಕೂ ಅಧಿಕ ಪ್ರಕರಣಗಳ ವಿಚಾರಣೆ ಬಾಕಿಯಿದೆ.
ಈ ಹಿನ್ನೆಲೆಯಲ್ಲಿ ಜಾಗೃತ ಕರ್ನಾಟಕವು ಚುನಾವಣಾ ಆಯೋಗದ ಮುಂದೆ ಪ್ರಮುಖ ಪ್ರಶ್ನೆಯನ್ನು ಮುಂದಿಟ್ಟಿದೆ. “ಕೇವಲ ನೋಟಿಸ್ ಜಾರಿ ಮಾಡಲಾಗಿದೆ ಅಥವಾ ವಿಚಾರಣೆ ನಡೆಸಲಾಗಿದೆ ಎಂಬ ಮಾಹಿತಿಯನ್ನು ಪ್ರಕಟಿಸುವುದರಿಂದ ಸಾರ್ವಜನಿಕರಿಗೆ ಪ್ರಕ್ರಿಯೆಯ ನೈಜ ಚಿತ್ರಣ ಸಿಗುವುದಿಲ್ಲ. ವಿಚಾರಣೆ ಪೂರ್ಣಗೊಂಡಿರುವ 17.63 ಲಕ್ಷಕ್ಕೂ ಹೆಚ್ಚು ಪ್ರಕರಣಗಳಲ್ಲಿ ಅಂತಿಮವಾಗಿ ಎಷ್ಟು ಮತದಾರರ ಹೆಸರುಗಳನ್ನು ಪಟ್ಟಿಯಿಂದ ಹೊರಹಾಕಲಾಗಿದೆ. ಎಷ್ಟು ಹೆಸರುಗಳನ್ನು ಮುಂದುವರೆಸಲಾಗುತ್ತದೆ ಹಾಗೂ ಸೂಕ್ತ ದಾಖಲೆಗಳನ್ನು ಸ್ವೀಕರಿಸಿ ಎಷ್ಟು ಜನರ ಮತದಾನದ ಹಕ್ಕನ್ನು ಉಳಿಸಲಾಗಿದೆ ಎಂಬ ಅಂತಿಮ ಫಲಿತಾಂಶದ ಮಾಹಿತಿ ಅತ್ಯಂತ ಅಗತ್ಯ” ಎಂದು ಹೇಳಿದೆ.
ಈ ಲೇಖನ ಓದಿದ್ದೀರಾ?: ಎಐ ಯುಗದಲ್ಲಿ ನಿಜವಾದ ಬರಹಕ್ಕೆ ಎಲ್ಲಿದೆ ಸ್ಥಾನ?
“ಚುನಾವಣಾ ಆಯೋಗವು ಕೇವಲ ಒಟ್ಟಾರೆ ಸಂಖ್ಯೆಯನ್ನು ನೀಡದೆ ಜಿಲ್ಲಾವಾರು ಮತ್ತು ವಿಧಾನಸಭಾ ಕ್ಷೇತ್ರವಾರು ವಿವರವಾದ ಅಂಕಿಅಂಶಗಳನ್ನು ಪ್ರಕಟಿಸಬೇಕು. ವಿಚಾರಣೆ ಪೂರ್ಣಗೊಂಡು ಹೆಸರು ಕೈಬಿಡುವ ನಿರ್ಧಾರ ಕೈಗೊಂಡಿದ್ದರೆ, ಅದಕ್ಕೆ ನೀಡಲಾದ ಕಾರಣಗಳ ವರ್ಗೀಕರಣ, ಪಟ್ಟಿಯಲ್ಲಿ ಮುಂದುವರಿಸಲಾದ ಮತದಾರರ ಸಂಖ್ಯೆ ಹಾಗೂ ಬಾಕಿ ಇರುವ ಪ್ರಕರಣಗಳ ಸ್ಪಷ್ಟ ಮಾಹಿತಿಯನ್ನು ಸಾರ್ವಜನಿಕರ ಮುಂದಿಡಬೇಕು” ಎಂದು ಸಂಘಟನೆ ಒತ್ತಾಯಿಸಿದೆ.
“ಆಯೋಗ ತಿಳಿಸಿರುವ ವೇಳಾಪಟ್ಟಿಯಂತೆ ಕೊನೆಯ ವಿಚಾರಣೆಯು ಅಕ್ಟೋಬರ್ 12 ರಂದು ನಡೆಯಲಿದ್ದು, ಹಕ್ಕು ಮತ್ತು ಆಕ್ಷೇಪಣೆಗಳು ಹಾಗೂ ನೋಟಿಸ್ ಹಂತದ ಪ್ರಕರಣಗಳ ವಿಲೇವಾರಿಗೆ ಅಕ್ಟೋಬರ್ 22 ಅಂತಿಮ ದಿನಾಂಕವಾಗಿದೆ. ಮತದಾರರ ಪಟ್ಟಿಯಲ್ಲಿನ ಪ್ರತಿಯೊಂದು ಹೆಸರೂ ಸಹ ದೇಶದ ಪ್ರಜೆಯ ಮೂಲಭೂತ ಮತದಾನದ ಹಕ್ಕಿಗೆ ಸಂಬಂಧಿಸಿದ್ದಾಗಿದೆ. ಆದ್ದರಿಂದ ಈ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಕಾಯದೆ, ಪ್ರತಿ ಹಂತದಲ್ಲೂ ಪಾರದರ್ಶಕವಾದ ವಿವರಗಳನ್ನು ಸಾರ್ವಜನಿಕರಿಗೆ ನಿಯಮಿತವಾಗಿ ನೀಡಬೇಕು” ಎಂದು ಜಾಗೃತ ಕರ್ನಾಟಕ ಆಗ್ರಹಿಸಿದೆ.



