ಕಲಬುರಗಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆ ತೆರವುಗೊಳಿಸಿರುವುದನ್ನು ಖಂಡಿಸಿ, ಸಿದ್ದರಾಮಯ್ಯ ಅವರ ಹೆಸರಿನಲ್ಲೇ ಇರುವ ವೃತ್ತದಲ್ಲಿ ಪ್ರತಿಮೆಯನ್ನು ಮರುಸ್ಥಾಪಿಸಬೇಕು ಎಂದು ಒತ್ತಾಯಿಸಿ ವಿಜಯಪುರದಲ್ಲಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ , ಅಧಿಕಾರಿಗಳು ಪ್ರತಿಮೆಯನ್ನು ತೆರವುಗೊಳಿಸಿರಬಹುದು. ಆದರೆ ಬಡವರು ಹಾಗೂ ಸಾಮಾನ್ಯ ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಸಿದ್ದರಾಮಯ್ಯ ಅವರ ಹೆಸರನ್ನು ಯಾರಿಂದಲೂ ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಪ್ರತಿಮೆ ತೆರವುಗೊಳಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಅಹಿಂದ ಮುಖಂಡ ಸೋಮನಾಥ ಕಳ್ಳಿಮನಿ ಮಾತನಾಡಿ, ಸಿದ್ದರಾಮಯ್ಯ ಅವರ ಪ್ರತಿಮೆ ಕೇವಲ ಒಂದು ಕಲಾಕೃತಿಯಲ್ಲ. ಅದರ ಹಿಂದೆ ಸಾಮಾಜಿಕ ಸಂದೇಶವಿದ್ದು, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸಿದ ಸಿದ್ದರಾಮಯ್ಯ ಅವರಿಗೆ ಜನರು ಸಲ್ಲಿಸುವ ಕೃತಜ್ಞತೆಯ ಸಂಕೇತವಾಗಿದೆ ಎಂದರು.
ಕಲಬುರಗಿಯ ಸಿದ್ದರಾಮಯ್ಯ ವೃತ್ತದಲ್ಲಿಯೇ ಪ್ರತಿಮೆಯನ್ನು ಮರುಸ್ಥಾಪಿಸಬೇಕು. ಒಂದು ವೇಳೆ ಪ್ರತಿಮೆಯನ್ನು ಅಲ್ಲಿಯೇ ಮರುಸ್ಥಾಪಿಸದಿದ್ದರೆ, ಅಸಂಖ್ಯಾತ ಬೆಂಬಲಿಗರೊಂದಿಗೆ ವಿಜಯಪುರದಿಂದ ಕಲಬುರಗಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಭಾರತೀ ಹೊಸಮನಿ, ಷಹಜಾನ್ ದುಂಡಸಿ, ಮಲ್ಲು ಬಿದರಿ ಸೇರಿದಂತೆ ಹಲವು ಮುಖಂಡರು ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯ ಅಶ್ಪಾಕ್ ಮನಗೂಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ, ಚಂದಸಾಬ್ ಗಡಗಲಾವ್, ಎಸ್.ಎಸ್. ಖಾದ್ರಿ ವಕೀಲ, ಫಯಾಜ್ ಕಲಾದಗಿ, ಮನು ಭಾವಿಕಟ್ಟಿ, ಸಂತೋಷ್ ಬಾಲ್ಗಾವಿ, ದೇವಕಾಂತ್ ಬಿಜ್ಜರಗಿ, ಲಾಲ್ಸಾಬ್ ಕೋರಬು, ಶಕೀಲ್ ಕಾಜಿ, ರಜಾಕ್ ಕಾಕಂಡಕಿ, ವೀರೇಶ್ ಕಲಾಲ್, ಸಂಗಮೇಶ್ ಕವಡಿಮಟ್ಟಿ, ಸಂತೋಷ ಹತ್ತರಕಿ, ಶಾಂತಪ್ಪ ಕಾಳಗಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಇದ್ದರು.




