ಚುನಾವಣೆ 2023 | ಔರಾದ್‌ನಲ್ಲಿ ‘ಪ್ರಭು’ ಮಣಿಸಲು ಕಾಂಗ್ರೆಸ್ ಕಸರತ್ತು; ಬಗೆಹರಿಯದ ಟಿಕೆಟ್ ಕಗ್ಗಂಟು

Date:

ಬೀದರ್ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಔರಾದ್ ಪರಿಶಿಷ್ಟ ಮೀಸಲು ಕ್ಷೇತ್ರವೂ ಒಂದು. ಸಾಮಾನ್ಯ ಕ್ಷೇತ್ರವಾಗಿದ್ದ ಔರಾದ್, 2008ರ ಕ್ಷೇತ್ರ ಮರುವಿಂಗಣೆಯ ನಂತರ ಎಸ್‌ಸಿ ಮೀಸಲು ಕ್ಷೇತ್ರವಾಗಿ ಮಾರ್ಪಟ್ಟಿತು. ಆ ಬಳಿಕ, 2008, 2013 ಹಾಗೂ 2018ರಲ್ಲಿ ನಡೆದ ಮೂರು ಚುನಾವಣೆಗಳಲ್ಲೂ ಹಾಲಿ ಸಚಿವ ಪ್ರಭು ಚವ್ಹಾಣ್‌ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಈಗ ನಾಲ್ಕನೇ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಕ್ಷೇತ್ರದಲ್ಲಿ ಲಂಬಾಣಿ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು, ಅದೇ ಸಮುದಾಯದ ಚವ್ಹಾಣ್‌ಗೆ ಗೆಲುವು ನಿರಾಯಾಸದಾಯಕವಾಗಿದೆ. 2008ರಲ್ಲಿ ಮೊದಲ ಬಾರಿಗೆ ರಾಜಕೀಯ ಪ್ರವೇಶಿಸಿದ ಚವ್ಹಾಣ, ತಮ್ಮ ಚೊಚ್ಚಲ ಚುನಾವಣೆಯಲ್ಲಿಯೇ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಗೆದ್ದು ಬೀಗಿದರು. 2013ರಲ್ಲಿ ಅವರ ವಿರುದ್ಧ ಅದೇ ಸಮುದಾಯದ ಧನಾಜಿ ಜಾಧವ ಅವರನ್ನು ಕೆಜೆಪಿ ಕಣಕ್ಕಿಳಿಸಿತ್ತು. ಆದರೂ, ಚವ್ಹಾಣ್‌ ಭಾರೀ ಅಂತರದಿಂದ ಎರಡನೇ ಬಾರಿಗೆ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಎಸ್‌ಸಿ ಎಡಗೈ ಸಮುದಾಯದ ವಿಜಯಕುಮಾರ್ ಕೌಡ್ಯಾಳೆ ಸ್ಪರ್ಧಿಸಿದ್ದರು, ಚವ್ಹಾಣ್‌ ಎದುರು ಕಡಿಮೆ ಅಂತರದಿಂದ ಸೋಲುಂಡರು.

ಮೂರು ಬಾರಿ ಗೆದ್ದು ಒಮ್ಮೆ ಮಂತ್ರಿಯಾದ ಚವ್ಹಾಣ ಕ್ಷೇತ್ರದಲ್ಲಿ ಹೇಳಿಕೊಳ್ಳುವಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಅವರು ಕ್ಷೇತ್ರಕ್ಕೆ ಕೊಡುಗೆ ನೀಡುವಲ್ಲಿ ವಿಫಲರಾಗಿದ್ದಾರೆ ಎಂಬ ಅಸಮಾಧಾನವು ಕ್ಷೇತ್ರದ ಮತದಾರರಲ್ಲಿದೆ. ಇದನ್ನು ಕಾಂಗ್ರೆಸ್‌ ಸಮರ್ಪಕವಾಗಿ ಬಳಸಿಕೊಂಡರೆ, ಗೆಲ್ಲುವ ಸಾಧ್ಯತೆ ಇದೆ.

ಔರಾದನಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ನೇರ ಪೈಪೋಟಿ ಒಡ್ಡುವುದು ಸಾಮಾನ್ಯ. ಇಲ್ಲಿ ಜೆಡಿಎಸ್ ಸೇರಿದಂತೆ ಉಳಿದ ಪಕ್ಷಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿವೆ. ಹೀಗಾಗಿ, ಚವ್ಹಾಣ್‌ ಅವರ ಗೆಲುವಿನ ಓಟಕ್ಕೆ ಲಗಾಮು ಹಾಕಲು ಕಾಂಗ್ರೆಸ್ ಭಾರೀ ಕಸರತ್ತು ನಡೆಸಿದೆ. ಆದರೆ, ಕಾಂಗ್ರೆಸ್‌ ಕೂಡ ಕೆಲವು ಸವಾಲುಗಳನ್ನು ನಿಭಾಯಿಸಿದರೆ ಮಾತ್ರ, ಗೆಲ್ಲಲು ಸಾಧ್ಯ ಎನ್ನಲಾಗಿದೆ.

ಕಾಂಗ್ರೆಸ್‌ಗೆ ಟಿಕೆಟ್ ಕಗ್ಗಂಟು

ಬೀದರ್‌ ಜಿಲ್ಲೆಯ ಐದು ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಘೋಷಿಸಿರುವ ಕಾಂಗ್ರೆಸ್‌, ಔರಾದ್‌ ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿಯನ್ನು ಘೋಷಿಸಿಲ್ಲ. ಔರಾದ ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ 27 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಎಸ್‌ಸಿ ಎಡ-ಬಲ ಫೈಟ್ ಕೂಡ ಇದೆ. 27 ಆಕಾಂಕ್ಷಿಗಳಲ್ಲಿ ಒಬ್ಬರಿಗೆ ಟಿಕೆಟ್ ನೀಡಿದರೆ ಉಳಿದ 26 ಜನರ ನಿರ್ಧಾರ ಏನಾಗಬಹುದು? ಕಾಂಗ್ರೆಸ್ ನಲ್ಲಿ ಬಂಡಾಯ ಅಲೆ ಉದ್ಭವಿಸಿದರೆ ಮತ್ತೆ ಶಮನ ಮಾಡುವುದು ದೊಡ್ಡ ಸಾಹಸದ ಕೆಲಸ.‌ ಹೀಗಾಗಿ ಔರಾದ ಕ್ಷೇತ್ರದ ಟಿಕೆಟ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

2018ರ ಚುನಾವಣೆ ವೇಳೆ ಕ್ಷೇತ್ರಾದ್ಯಂತ ಭಾರೀ ಸುತ್ತಾಡಿದ ನಡೆಸಿ ಟಿಕೆಟ್ ನಿರೀಕ್ಷೆಯಲ್ಲಿದ್ದ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ಭೀಮಸೇನ ಸಿಂಧೆಗೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪಿತು. ಈ ಬಾರಿ ತಮಗೆ ಟಿಕೆಟ್‌ ನೀಡಬೇಕೆಂದು ಅವರು ಒತ್ತಾಯಿಸುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಸಿಂಧೆಗೆ ಟಿಕೆಟ್ ಕೈತಪ್ಪಿದ ಕಾರಣ ಕಾಂಗ್ರೆಸ್ ಸೋತಿದೆ. ಈಗ, ಸಿಂಧೆಗೆ ಟಿಕೆಟ್ ನೀಡಿದರೆ ಚವ್ಹಾಣರನ್ನು ಮಣಿಸಲು ಸಾಧ್ಯವಾಗುತ್ತದೆ. ಕ್ಷೇತ್ರದಲ್ಲಿ ಚವ್ಹಾಣ್‌ಗೆ ಪ್ರಬಲ ಸ್ಪರ್ಧೆ ನೀಡುವ ಸಾಮರ್ಥ್ಯವಿರುವುದು ಸಿಂಧೆಗೆ ಮಾತ್ರವೆಂದು ಅವರ ಬೆಂಬಲಿಗರು ಒತ್ತಾಯಿಸಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ನಿವಾಸದ ಎದುರು ಧರಣಿ ನಡೆಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಚುನಾವಣೆ 2023 | ರಮೇಶ್‌ ಜಾರಕಿಹೊಳಿ ಮಣಿಸಲು ಕಾಂಗ್ರೆಸ್‌ ಪಣ; ಪಂಚಮಸಾಲಿ ಮುಖಂಡನಿಗೆ ಟಿಕೆಟ್

ಕಳೆದ ಬಾರಿಯೇ ಭೀಮಸೇನ ಸಿಂಧೆಗೆ ಟಿಕೆಟ್ ನೀಡಿದರೆ ಜಯ ಸಾಧಿಸಬಹುದಿತ್ತು. ಆದರೆ ಅವರಿಗೆ ಟಿಕೆಟ್ ನೀಡಲಿಲ್ಲ. ಈ ಬಾರಿಯೂ ಸಿಂಧೆ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದಿದ್ದರೆ, ಪಕ್ಷಕ್ಕೆ ಗೆಲುವು ಕಠಿಣವಾಗಲಿದೆ. ಅದಕ್ಕೆ ಪಕ್ಷವೇ ನೇರ ಹೊಣೆಯಾಗುತ್ತದೆ ಎಂಬ ಎಚ್ಚರಿಕೆ ಸಂದೇಶವನ್ನೂ ಸಿಂಧೆ ಅಭಿಮಾನಿಗಳು ರವಾನಿಸಿದ್ದಾರೆ.

ಟಿಕೆಟ್ ಕೈತಪ್ಪಿದರೆ ಬಂಡಾಯದ ಎಚ್ಚರಿಕೆ

ಔರಾದ ಮೀಸಲು ಕ್ಷೇತ್ರವಾದ ನಂತರ ಸ್ಥಳೀಯರಿಗೆ ಒಮ್ಮೆಯೂ ಕಾಂಗ್ರೆಸ್ ಟಿಕೆಟ್ ನೀಡಲಿಲ್ಲ. ಪ್ರತಿಬಾರಿ ಹೊರಗಿನ ಅಭ್ಯರ್ಥಿಗಳಿಗೆ ಟಿಕೆಟ್ ನೀಡುತ್ತದೆ. ಅವರು ಚುನಾವಣೆ ಸಂದರ್ಭದಲ್ಲಿ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಂಡು, ಆನಂತರ ಕಾಣೆಯಾಗುತ್ತಾರೆ. ಹೀಗಾಗಿ ಈ ಬಾರಿ ಸ್ಥಳೀಯ ಸೂಕ್ತ ಅಭ್ಯರ್ಥಿಗೆ ಟಿಕೆಟ್ ಕೊಡಬೇಕು. ಇಲ್ಲದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಸುಧಾಕರ ಕೊಳ್ಳೂರ ಎಚ್ಚರಿಸಿದ್ದಾರೆ.

ಚವ್ಹಾಣ ಕಟ್ಟಿಹಾಕಲು ಯಾರು ಸೂಕ್ತ ಅಭ್ಯರ್ಥಿ?

ಔರಾದ್ ಮೀಸಲು ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಎಡಗೈ-ಬಲಗೈ ಹಾಗೂ ಸ್ಥಳೀಯ-ಹೊರಗಿನ ಆಕಾಂಕ್ಷಿಗಳ ಪರ ಹಲವು ಬಣಗಳಿವೆ. ಅಷ್ಟೇ ಅಲ್ಲದೆ, ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಬಣಗಳೂ ಇವೆ. ಇಂಥ ಹಲವು ಕಗ್ಗಂಟು ಇರುವ ಕಾಂಗ್ರೆಸ್ ಪಾಳಯದಲ್ಲಿ ಔರಾದ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಒಲಿಯುತ್ತೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಭೀಮಸೇನ ಸಿಂಧೆ, ಡಾ.ಲಕ್ಷ್ಮಣರಾವ ಸೋರಳ್ಳಿಕರ್, ಗೋಪಿಕೃಷ್ಣ, ವಿಜಯಕುಮಾರ್ ಕೌಡ್ಯಾಳೆ ಶಂಕರ ದೊಡ್ಡಿ ಸೇರಿದಂತೆ ಹಲವು ಆಕಾಂಕ್ಷಿಗಳು ಹೆಸರು ಮುಂಚೂಣಿಯಲ್ಲಿದ್ದವು. ಇದರಲ್ಲಿ ಭೀಮಸೇನ ಸಿಂಧೆ ಹಾಗೂ ಗೋಪಿಕೃಷ್ಣ ಅವರ ಹೆಸರು ಅಂತಿಮ ಪಟ್ಟಿಯಲ್ಲಿವೆ ಎನ್ನಲಾಗಿದೆ. ಕಾಂಗ್ರೆಸ್‌ನ 3ನೇ ಪಟ್ಟಿಯಲ್ಲಿ ಔರಾದ್‌ಗೆ ಅಭ್ಯರ್ಥಿ ಘೋಷಣೆ ಆಗುವುದು ಬಹುತೇಕ ಖಚಿತ. ಆದರೆ, ಸಚಿವ ಪ್ರಭು ಚವ್ಹಾಣಗೆ ಟಕ್ಕರ್ ಕೊಡುವ ಕಾಂಗ್ರೆಸ್ಸಿನ ಪ್ರಬಲ ಅಭ್ಯರ್ಥಿ ಯಾರು ಎಂಬುದು ಕಾದು ನೋಡಬೇಕಷ್ಟೆ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಕವಿ, ಪತ್ರಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

Subscribe

ಹೆಚ್ಚು ಓದಿಸಿಕೊಂಡ ಲೇಖನಗಳು

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಹಾವೇರಿ | ತನ್ನ ಅವಳಿ ಮಕ್ಕಳನ್ನೇ ಕೊಂದ ದುರುಳ ತಂದೆ

ದುರುಳ ತಂದೆಯೊಬ್ಬ ತನ್ನ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿರುವ ಘಟನೆ ಹಾವೇರಿ...

ರಾಯಚೂರು | ಬಿಜೆಪಿಯ ದುರಾಡಳಿತದಿಂದ ಕಾಂಗ್ರೆಸ್‌ಗೆ ಅಧಿಕಾರ: ಚಾಮರಸ ಮಾಲಿ ಪಾಟೀಲ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಕಾರ್ಡ್ ನೀಡಿದ್ದರಿಂದ ರಾಜ್ಯ ವಿಧಾನಸಭೆಯಲ್ಲಿ‌...

ಬೆಳಗಾವಿ | ಮತ್ತೊಂದು ಭೀಕರ ಅಪಘಾತ

ಮೈಸೂರಿನ ಟಿ ನರಸೀಪುರದಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 10 ಮಂದಿ ಮೃತಪಟ್ಟಿದ್ದರು....

ರಾಯಚೂರು | ಕಲುಷಿತ ನೀರು ಸೇವನೆ ಪ್ರಕರಣ: ಮೃತ ಬಾಲಕನ ಕುಟುಂಬಕ್ಕೆ ₹5 ಲಕ್ಷ ಪರಿಹಾರ

ರಾಯಚೂರು ಜಿಲ್ಲೆಯ ರೇಕಲಮರಡಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೃತಪಟ್ಟ ಬಾಲಕನ...