ಹಿಂಡನ್ ಬರ್ಗ್ ವರದಿಯನ್ನು ಆಧರಿಸಿ ಕಾಂಗ್ರೆಸ್ ಸೇರಿದಂತೆ 19 ವಿಪಕ್ಷಗಳು ಅದಾನಿ ಸಮೂಹದಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸಲು ಜಂಟಿ ಸದನ ಸಮಿತಿಯನ್ನು ರಚಿಸುವಂತೆ ಪಟ್ಟು ಹಿಡಿದಿವೆ. ಇದೇ ವೇಳೆ ಕಾಂಗ್ರೆಸ್ನ ಮಿತ್ರ ಪಕ್ಷವಾಗಿರುವ ಎನ್ಸಿಪಿಯ ಮುಖ್ಯಸ್ಥ ಶರದ್ ಪವಾರ್, ಉದ್ಯಮಿ ಗೌತಮ್ ಅದಾನಿಯನ್ನು ಟಾರ್ಗೇಟ್ ಮಾಡಲಾಗುತ್ತಿದೆ ಎನ್ನುವ ಮೂಲಕ ತಮ್ಮ ಮಿತ್ರ ಪಕ್ಷಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಶುಕ್ರವಾರ ರಾಷ್ಟ್ರೀಯ ಮಾಧ್ಯಮವೊಂದರ ಸಂದರ್ಶನದಲ್ಲಿ ಹಿಂಡನ್ ಬರ್ಗ್ ವರದಿ ಮತ್ತು ಅದಾನಿ ಸಮೂಹದ ಮೇಲಿನ ಆರೋಪಗಳ ಕುರಿತು ಪ್ರತಿಕ್ರಿಯಿಸಿರುವ ಶರದ್ ಪವಾರ್, “ಅದಾನಿ ಸಮೂಹದಲ್ಲಿ ಅವ್ಯವಹಾರ ನಡೆದಿದೆ ಎಂದು ವರದಿ ಪ್ರಕಟಿಸಿರುವ ಸಂಸ್ಥೆಯ ಹಿನ್ನೆಲೆ ಏನು? ವರದಿಯ ಹಿಂದಿನ ಉದ್ದೇಶವೇನು ಎಂಬುದನ್ನು ಅರಿಯುವ ಅಗತ್ಯವಿದೆ. ಆ ವರದಿಯನ್ನು ಆಧರಿಸಿ ವಿರೋಧ ಪಕ್ಷಗಳು ಉದ್ಯಮಿ ಅದಾನಿಯವರನ್ನು ಗುರಿಯಾಗಿಸಿಕೊಂಡಂತೆ ಕಾಣುತ್ತಿದೆ. ಅದಾನಿ ಮತ್ತು ಅಂಬಾನಿ ಇಬ್ಬರೂ ದೇಶದ ಇಂಧನ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಆಡಳಿತರೂಢ ಸರ್ಕಾರವನ್ನು ಟೀಕಿಸುವ ಉದ್ದೇಶದಿಂದ ಅದಾನಿಯನ್ನು ಗುರಿಯಾಗಿಸುವುದು ಸರಿಯಲ್ಲ. ಅದಾನಿ ಸಮೂಹದ ವಿರುದ್ಧ ತನಿಖೆ ನಡೆಸಲು ವಿಪಕ್ಷಗಳು ಸದನ ಸಮಿತಿ ರಚಿಸುವಂತೆ ಆಗ್ರಹಿಸುತ್ತಿರುವುದರಲ್ಲಿ ಯಾವುದೇ ಹುರುಳಿಲ್ಲ” ಎಂದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಲ ಮುಡಿದ ಆಂಧ್ರಪ್ರದೇಶದ ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ
ಶರದ್ ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಎನ್ಸಿಪಿ ನಾಯಕರು ಅವರ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಮಾನ ಮನಸ್ಕರಿರುವ 19 ವಿರೋಧ ಪಕ್ಷಗಳಿಗೆ ಅದಾನಿ ಸಂಸ್ಥೆ ನಡೆಸಿದ ಅವ್ಯವಹಾರದ ಬಗ್ಗೆ ಯಾವುದೇ ಸಂಶಯವಿಲ್ಲ. ಬಿಜೆಪಿಯ ದಾಳಿಯಿಂದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಎನ್ಸಿಪಿಯನ್ನು ಒಳಗೊಂಡಂತೆ 20 ವಿಪಕ್ಷಗಳೂ ಒಗ್ಗೂಡಿ ಕೆಲಸ ಮಾಡಲಿವೆ” ಎಂದಿದೆ.