ಉಳ್ಳಾಲ ತಾಲೂಕಿನ ಕುತ್ತಾರು ಕೊರಗಜ್ಜ ಕಟ್ಟೆಯ ಬಳಿ ಸೋಮವಾರ ರಾತ್ರಿ ದ್ವಿಚಕ್ರ ವಾಹನಗಳ ಮಧ್ಯೆ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರಿಬ್ಬರೂ ಗಂಭೀರ ಗಾಯಗೊಂಡಿದ್ದಾರೆ. ವರ್ಷಿತ್ ಕುತ್ತಾರ್ ಅವರ ಮೆದುಳು ನಿಷ್ಕ್ರಿಯೆಗೊಂಡಿತ್ತು. ಮೆದುಳು ನಿಷ್ಕ್ರಿಯೆಗೊಂಡ ಮಗನ ಅಂಗಾಂಗ ದಾನ ಮಾಡುವ ಮೂಲಕ ವರ್ಷಿತ್ ಪೋಷಕರು ಸಾವಿನ ದುಃಖದಲ್ಲೂ ಮಾನವೀಯತೆ ಮೆರೆದಿದ್ದಾರೆ
ಕುತ್ತಾರುವಿನ ಆಯೆರೆ ಬೆಟ್ಟು ನಿವಾಸಿಗಳಾದ ಗೋಪಾಲ ಮತ್ತು ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್(21) ಮೆದುಳು ನಿಷ್ಕ್ರಿಯಗೊಂಡ ಯುವಕ. ಇವರು ಫ್ಯಾಬ್ರಿಕೇಶನ್ ವೃತ್ತಿ ಮಾಡುತ್ತಿದ್ದರು.
ವರ್ಷಿತ್ ಸೋಮವಾರ ರಾತ್ರಿ ಸುಮಾರು 7.30ರ ವೇಳೆಗೆ ಕುತ್ತಾರುವಿನಿಂದ ತನ್ನ ಮನೆ ಕಡೆಗೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಬಳಿಯ ದುರ್ಗಾ ಆಟೋ ವರ್ಕ್ಸ್ ಶಾಪ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್ಗೆ ಮುಖಾಮುಖಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಬೈಕ್ನಿಂದ ರಸ್ತೆಗೆಸೆಯಲ್ಪಟ್ಟ ವರ್ಷಿತ್ ಅವರ ತಲೆಗೆ ತೀವ್ರ ಗಾಯವಾಗಿತ್ತು. ತಕ್ಷಣ ಅವರನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯುತ್ತಿದ್ದ ಕುತ್ತಾರ್ ಬಟ್ಟೆದಡಿ ಪ್ರದೇಶದ ಡಿವೈಎಫ್ಐಯ ಸಕ್ರಿಯ ಕಾರ್ಯಕರ್ತ ವರ್ಷಿತ್ ಕುಲಾಲ್(21) ಇನ್ನಿಲ್ಲ ಎಂಬ ನೋವಿನ ಸುದ್ದಿ ನಿಜಕ್ಕೂ ಆಘಾತಕಾರಿ.
ಮತ್ತೆ ಗುಣಮುಖನಾಗಿ ನಮ್ಮ ನಡುವೆ ಮರಳಿ ಬರುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಕುಟುಂಬಕ್ಕೆ, ವೈದ್ಯರು ವರ್ಷಿತ್ ಅವರ ಮೆದುಳು ನಿಷ್ಕ್ರಿಯಗೊಂಡಿರುವುದನ್ನು ತಿಳಿಸಿದಾಗ ಆ ಕುಟುಂಬ ಎದುರಿಸಿದ ನೋವನ್ನು ಪದಗಳಲ್ಲಿ ಹೇಳಲಾಗದು. ಕಣ್ಣೆದುರೇ ಬೆಳೆಸಿದ ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಆ ನೋವಿನ ನಡುವೆಯೂ ತಂದೆ ಗೋಪಾಲ, ತಾಯಿ ವೇದಾವತಿ, ಸಹೋದರ ತಮ್ಮ ಮಗನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹಲವು ಜೀವಗಳಿಗೆ ಹೊಸ ಬದುಕು ನೀಡಲು ಒಪ್ಪಿಗೆ ಸೂಚಿಸಿರುವುದು ಅತ್ಯಂತ ಮಾನವೀಯ ಮತ್ತು ಮಹತ್ವದ ನಿರ್ಧಾರವಾಗಿದೆ.
ತಮ್ಮ ಮಗನನ್ನು ಕಳೆದುಕೊಂಡ ನೋವಿನ ನಡುವೆಯೂ, ಮತ್ತಷ್ಟು ಕುಟುಂಬಗಳ ಕಣ್ಣೀರನ್ನು ಒರೆಸುವಂತಹ ನಿರ್ಧಾರ ಕೈಗೊಂಡ ವರ್ಷಿತ್ ಅವರ ಕುಟುಂಬದ ವಿಶಾಲ ಹೃದಯಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು.
“ವರ್ಷಿತ್ ದೇಹತಃ ನಮ್ಮೊಂದಿಗಿಲ್ಲದಿದ್ದರೂ, ಅವರ ಅಂಗಾಂಗಗಳ ಮೂಲಕ ಹಲವು ಜೀವಗಳಲ್ಲಿ ಬದುಕಲಿದ್ದಾರೆ. ಜನರಿಗಾಗಿ, ಸಮಾಜಕ್ಕಾಗಿ ಸದಾ ಮುಂಚೂಣಿಯಲ್ಲಿ ನಿಂತಿದ್ದ ಒಬ್ಬ ಯುವ ಹೋರಾಟಗಾರ, ಸಾವಿನಲ್ಲೂ ತನ್ನ ಬದುಕಿಗೆ ಒಂದು ಅರ್ಥವನ್ನು ಬಿಟ್ಟುಹೋಗಿದ್ದಾರೆ. ವರ್ಷಿತ್ ಅವರು ಸತ್ತಿಲ್ಲ, ಅವರೆಂದೂ ಸಾಯುವುದಿಲ್ಲ ಅವರ ಆದರ್ಶ, ಕನಸು ಎಲ್ಲವನ್ನೂ ನಾವು ಮುಂದುವರಿಸಲಿದ್ದೇವೆ. ಅವರು ಸಂಘಟನೆಯ ಪ್ರತಿಯೊಬ್ಬ ಒಡನಾಡಿಗಳ ಮನದೊಳಗೆ ಇನ್ನೂ ಜೀವಂತವಾಗಿದ್ದಾರೆ. ಅವರ ನೆನಪು ಸದಾ ನಮ್ಮೊಂದಿಗೆ ಇರಲಿದೆ. ಅಂಗಾಂಗ ದಾನದ ಮಹತ್ವವನ್ನು ಸಮಾಜಕ್ಕೆ ಸಾರಿದ ಅವರ ಕುಟುಂಬದ ಮಾನವೀಯ ನಿರ್ಧಾರಕ್ಕೆ ಹೃದಯಪೂರ್ವಕ ಗೌರವ” ಎಂದು ದಕ್ಷಿಣ ಕನ್ನಡ ಡಿವೈಎಫ್ಐ ತಿಳಿಸಿದೆ.
“ಈಗಾಗಲೇ ವಿವಿಧ ಆಸ್ಪತ್ರೆಗಳಿಂದ ಮೂತ್ರಪಿಂಡ, ಯಕೃತ್ತು, ಹೃದಯ ಹಾಗೂ ಶ್ವಾಸಕೋಶಗಳಿಗೆ ಬೇಡಿಕೆ ಬಂದಿದ್ದು, ಇಂದು ‘ಝೀರೋ ಟ್ರ್ಯಾಫಿಕ್’ ವ್ಯವಸ್ಥೆಯ ಮೂಲಕ ಅಂಗಾಂಗಗಳನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ ರವಾನಿಸುವ ಪ್ರಕ್ರಿಯೆ ನಡೆಯಲಿದೆ” ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಡಿವೈಎಫ್ಐ ಸಂಘಟನೆಯ ಸಕ್ರಿಯ ಕಾರ್ಯಕರ್ತರಾಗಿದ್ದ ವರ್ಷಿತ್ ಅವರ ಪಾರ್ಥಿವ ಶರೀರ ಇಂದು ಕುತ್ತಾರಿನ ಮನೆಗೆ ಆಗಮಿಸಿದ್ದು, ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಈ ಸುದ್ದಿ ಓದಿದ್ದೀರಾ? ನನಸಿನತ್ತ ಕರಾವಳಿ ಕನಸು: ಶೀಘ್ರದಲ್ಲೇ ರಾಜ್ಯದ 2ನೇ ಅಧಿಕೃತ ಭಾಷೆಯಾಗಲಿದೆ ತುಳು!
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಅಂಗಾಂಗ ದಾನ ಮಾಡುವ ಬಗ್ಗೆ ಮಾರ್ಗದರ್ಶನ ನೀಡಿತು. ವರ್ಷಿತ್ ಕುಲಾಲ್ ಅಗಲಿಕೆಗೆ ಸಂಘಟನೆಯು ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿದೆ. ಈ ವೇಳೆ ಡಿವೈಎಫ್ಐ ಜಿಲ್ಲಾಧ್ಯಕ್ಷ ಬಿ ಕೆ ಇಮ್ತಿಯಾಜ್, ಕಾರ್ಯದರ್ಶಿ ಸಂತೋಷ್ ಬಜಾಲ್, ಉಳ್ಳಾಲ ತಾಲೂಕು ಅಧ್ಯಕ್ಷ ಅಡ್ವಕೇಟ್ ನಿತಿನ್ ಕುತ್ತಾರ್, ಕಾರ್ಯದರ್ಶಿ ರಿಜ್ವಾನ್ ಹರೇಕಳ , ಸುನೀಲ್ ತೇವುಲ, ಸಂಕೇತ್ ಕಂಪ, ಮಿಥುನ್ ಕುತ್ತಾರ್, ಧೀಕ್ಷಿತ್ ಕುತ್ತಾರ್ ಅಲ್ಲದೆ ಅಪಾರ ಸಂಖ್ಯೆಯಲ್ಲಿ ಡಿವೈಎಫ್ಐ ಕಾರ್ಯಕರ್ತರು, ಬಂಧು, ಮಿತ್ರರು ಕುಟುಂಬದ ಜೊತೆ ನಿಂತು ಧೈರ್ಯ ತುಂಬಿ ಸಾಂತ್ವನ ಹೇಳಿದರು.





