“ಕುಮಧ್ವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ಗಳಿಗೆ ಬರಗಾಲದ ಹಿನ್ನೆಲೆಯಲ್ಲಿ ತುರ್ತು ಬ್ಯಾರೇಜ್ ಗೇಟ್ ಅಳವಡಿಸಿ ಜನ ಜಾನುವಾರುಗಳಿಗೆ ಅನುಕೂಲವಾಗುವಂತೆ ನೀರು ಸಂಗ್ರಹಿಸಬೇಕು” ಎಂದು ರೈತ ಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ತಾಲ್ಲೂಕಿನ ಮುಷ್ಟೂರು, ಮಲಕನಹಳ್ಳಿ, ಮಣಕೂರು, ಲಿಂಗದಹಳ್ಳಿ, ಚಿಕ್ಕಮಾಗನೂರು, ಗೋಡಿಹಾಳ, ಕೂಲಿ, ಕುಡಪಲಿ ಗ್ರಾಮದ ಬಳಿ ಕುಮಧ್ವತಿ ನದಿಗೆ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ಗೆ ಗೇಟ್ ಅಳವಡಿಸುವಂತೆ ಸಣ್ಣ ನೀರಾವರಿ ಇಲಾಖೆಯ ಎಂಜಿನೀಯರ್ ಮಣಿಕಂಠ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮಾತನಾಡಿ, ‘ಮಳೆ ಕೊರತೆಯಿಂದ ಬರಗಾಲ ಆವರಿಸಿದೆ. ಕುಮದ್ವತ್ತಿ ನದಿ ಸಂಪೂರ್ಣ ಬರಿದಾಗಿದೆ. ಸರ್ಕಾರ ಏಮರ್ಜನ್ಸಿ ವಾಟರ್ ಸ್ಟೋರೆಜ್ ಅಂತ ಘೋಷಣೆ ಮಾಡಿ ತುರ್ತು ಬ್ಯಾರೇಜ್ ಗೇಟ್ ಅಳವಡಿಸಿ ಜನ-ಜಾನುವಾರುಗಳಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಆಗ್ರಹಿಸಿದರು.
‘ಕುಮದ್ವತ್ತಿ ನದಿಗೆ ಸಣ್ಣ ನೀರಾವರಿ ಇಲಾಖೆಯಿಂದ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ನಲ್ಲಿ ಈಗಿರುವ ನೀರನ್ನು ಬ್ಯಾರೇಜ್ ಗೇಟ್ ಅಳವಡಿಸುವ ಮೂಲಕ ನೀರನ್ನು ಸಂಗ್ರಹಿಸಬೇಕು. ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಸಣ್ಣ ನೀರಾವರಿ ಇಲಾಖೆ ಗೇಟ್ ಅಳವಡಿಸುವ ದಿನಾಂಕಕ್ಕೆ ಕಾಯದೆ ಕುಮದ್ವತ್ತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜುಗಳ ಗೇಟುಗಳನ್ನು ಕೂಡಲೇ ಹಾಕಿ ನೀರನ್ನು ಸಂಗ್ರಹಿಸಿ ಜೀವ ಸಂಕುಲವನ್ನು ಕಾಪಾಡಬೇಕಾಗಿದೆ’ ಎಂದು ಒತ್ತಾಯಿಸಿದರು.
ಧರ್ಮರಡ್ಡಿ ನಿಂಗರಡ್ಡರ, ಹರಿಹರಗೌಡ ಪಾಟೀಲ, ಯಲ್ಲಪ್ಪ ಓಲೇಕಾರ, ಗುರುನಗೌಡ ಪಾಟೀಲ, ಹನುಮರಡ್ಡಿ ಬಳ್ಳಾರಿ, ಶೇಖನಗೌಡ ಪಾಟೀಲ, ಪ್ರಭಣ್ಣ ಮುದ್ದೂರುನಾಯ್ಕ, ಸಂಕನಗೌಡ ಪಾಟೀಲ, ಯಲ್ಲರಡ್ಡಿ ಯರೇಕುಪ್ಪಿ, ಮಾರುತಿ ಅಂಗಡಿ, ಗೋವಿಂದಪ್ಪ ಕೋರೆರ, ಹಾಲೇಶ ಹೊಳೆಆನ್ವೇರಿ, ಉಮೇಶ ಮುಷ್ಟೂರು ನಾಯ್ಕ, ಮಾಂತೇಶ ದೂಳೆಹೊಳೆ, ಸುರೇಶ ಹೊನ್ನತ್ತಿ, ಜಮಾಲಸಬಾ ಶೇತಸನದಿ, ಕುಮಾರಿ ಕೋಣನತಲಿ, ವಿಜಯ ನಿಂಗರಡೇರ ಸೇರಿದಂತೆ ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.




