ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಇರುವ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಮೇ 26 ರಂದು ‘ಎದ್ದೇಳು ಕರ್ನಾಟಕ’ ಅಭಿಯಾನದ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿ ನಮ್ಮನ್ನಗಲಿ ಮೇ 26ಕ್ಕೆ ಎರಡು ವರ್ಷಗಳಾಗುತ್ತಿರುವ ಹಿನ್ನೆಲೆ, ಅದೇ ದಿನ ಹಿರಿಯ ಚೇತನಕ್ಕೆ ಘನತೆಯ ನಮನ ಸಲ್ಲಿಸುವ ಸಂದರ್ಭವೂ ಇದಾಗಿದೆ ಎಂದು ರೈತ ಸಂಘದ ಮುಖಂಡ ಸಿದಗೌಡ ಮೋದಗಿ ಹೇಳಿದರು.
ಬೆಳಗಾವಿಯಲ್ಲಿ ಪ್ರಗತಿಪರ ಸಂಘಟನೆಗಳು ಹಮ್ಮಿಕೊಂಡಿದ್ಧ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. “ರಾಜ್ಯದಲ್ಲಿ ಹಿಂದೆಂದೂ ಕಂಡರಿಯದ ಭ್ರಷ್ಟಾಚಾರ, ಬೆಲೆ ಏರಿಕೆ ಹಾಗೂ ದ್ವೇಷ ರಾಜಕಾರಣಕ್ಕೆ ಕುಖ್ಯಾತಿ ಪಡೆದಿದ್ದ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಈ ವಿಜಯ ಕಾಂಗ್ರೆಸ್ ವಿಜಯ ಮಾತ್ರವಾಗಿರದೆ, ಇಡೀ ನಾಡಿನ ಜನತೆಯ ವಿಜಯವಾಗಿದೆ” ಎಂದರು.
“ಜನವಿರೋಧಿ ಆಡಳಿತವನ್ನು ಅಂತ್ಯಗೊಳಿಸಬೇಕೆಂದು ನಾಡಿನ ಎಲ್ಲ ರೈತಪರ, ಪ್ರಗತಿಪರ ಸಂಘಟನೆಗಳು, ತಳ ಸಮುದಾಯಗಳು, ಅಲ್ಪಸಂಖ್ಯಾತ, ದಲಿತ, ಆದಿವಾಸಿ, ಹಿಂದುಳಿದ ವರ್ಗ, ಮಹಿಳಾ ಜನ ಸಮುದಾಯಗಳ ಸಂಘ ಸಂಸ್ಥೆಗಳು ಅಪಾರ ಶ್ರಮವಹಿಸಿ ಕೆಲಸ ಮಾಡಿವೆ. ಈ ಪೈಕಿ ‘ಎದ್ದೇಳು ಕರ್ನಾಟಕ’ ಎಂಬ ಹೆಸರಿನಲ್ಲಿ ನಡೆದ ನಾಗರಿಕ ಸಮಾಜದ ಸಂಘಟಿತ ಪ್ರಯತ್ನ ವಿಶೇಷ ಪರಿಣಾಮವನ್ನು ಬೀರಿದೆ” ಎಂದು ಹೇಳಿದರು.
“ಈ ಬಾರಿಯ ಚುನಾವಣೆಯಲ್ಲಿ 112 ಪ್ರಗತಿಪರ ಹಾಗೂ ಸಾಮಾಜಿಕ ಸಂಘ-ಸಂಸ್ಥೆಗಳ ಐಕ್ಯ ವೇದಿಕೆಯಾಗಿ ಹೊರಹೊಮ್ಮಿದ ಜಾಗೃತಗೊಳಿಸುವುದರಲ್ಲಿ ವಿಶೇಷ ಪಾತ್ರ ನಿರ್ವಹಿಸಿತು. ಒಟ್ಟು 103 ಕ್ಷೇತ್ರಗಳನ್ನು ಸೂಕ್ಷ್ಮ (ಕ್ರಿಟಿಕಲ್) ಎಂದು ಗುರುತಿಸಿ, ಅದರಲ್ಲಿ ಜಾತ್ಯತೀತ ಸಮುದಾಯಗಳ ಮತದಾನದ ಪ್ರಮಾಣವನ್ನು ಹೆಚ್ಚಿಸಲು, ಮತ ವಿಭಜನೆಯಾಗದಂತೆ ತಡೆಯಲು ವಿಶೇಷ ಪ್ರಯತ್ನ ಹಾಕಿ ಕೆಲಸ ಮಾಡಲಾಯಿತು. ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಬಲ್ಲ ಅಭ್ಯರ್ಥಿ ಯಾರೆಂದು ಗುರುತಿಸಿ ಅವರಿಗೆ ಮಾತ್ರವೇ ಮತ ಹಾಕಿ ಎಂಬ ಕಾರ್ಯನೀತಿಯು ಬೆಜೆಪಿ ಸೋಲಿನಲ್ಲಿ ದೊಡ್ಡ ಪಾತ್ರ ನಿರ್ವಹಿಸಿತು” ಎಂದು ವಿವರಿಸಿದರು.
“ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ 250ಕ್ಕೂ ಹೆಚ್ಚು ಕಾರ್ಯಾಗಾರಗಳನ್ನು ನಡೆಸಿ ಸ್ವಯಂಸೇವಕರನ್ನು ಸಿದ್ಧಗೊಳಿಸಲಾಯಿತು. ರಾಜ್ಯವ್ಯಾಪಿ ಅನೇಕ ಸಂಘ-ಸಂಸ್ಥೆಗಳ ಸಹಸ್ರಾರು ಸದಸ್ಯರು ಸ್ವಯಂಸೇವಕರಾಗಿ ‘ಎದ್ದೇಳು ಕರ್ನಾಟಕ’ ಅಭಿಯಾನದಲ್ಲಿ ತೊಡಗಿಸಿಕೊಂಡರು. 10 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿವಿಧ ಸಾಹಿತ್ಯವನ್ನು ಮುದ್ರಿಸಿ ಹಂಚಲಾಯಿತು. ಜನರಲ್ಲಿ ಮಡುಗಟ್ಟಿದ್ದ ಅಸಮಾಧಾನ, ಕಾಂಗ್ರೆಸ್ ನೀಡಿದ ಗ್ಯಾರಂಟಿಗಳು ಹಾಗೂ ಸಾಮಾಜಿಕ ಚಳವಳಿಗಳು ರೂಪಿಸಿದ ಜನಜಾಗೃತಿ ಎಲ್ಲವೂ ಸೇರಿ ಬಿಜೆಪಿಯನ್ನು ಮಣಿಸಲು ಸಾಧ್ಯವಾಗಿದೆ” ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಕಚೇರಿಯಲ್ಲೇ ಕುಳಿತು ಕೆಲಸ ಮಾಡಿದರೆ ಆಗದು, ಫೀಲ್ಡ್ಗೆ ಹೋಗಿ: ಅಧಿಕಾರಿಗಳಿಗೆ ಸಿಎಂ ಎಚ್ಚರಿಕೆ
ಮೇ 26ರಂದು ನಡೆಯುವ ಸಮಾವೇಶಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಸಚಿವರಾದ ಡಾ. ಜಿ ಪರಮೇಶ್ವರ್, ಸತೀಶ ಜಾರಕಿಹೋಳಿ, ಬಿ.ಆರ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಾಹಿತಿಗಳಾದ ದೇವನೂರ ಮಹಾದೇವ, ಡಾ. ವಿಜಯಾ, ಪ್ರೊ. ಪುರುಷೋತ್ತಮ ಬಿಳಿಮಲೆ, ಪ್ರೊ. ರಹಮತ್ ತರೀಕೆರೆ, ಡಾ. ದು ಸರಸ್ವತಿ, ಕೆ ಎಲ್ ಅಶೋಕ್, ಮೊಹಮ್ಮದ್ ಯೂಸುಫ್ ಕನ್ನಿ, ಫಾ. ಜೆರಾಲ್ಡ್, ತಾರಾ ರಾವ್, ಡಾ. ಎ ಆರ್ ವಾಸವಿ, ಗಣೇಶ ದೇವಿ, ದರ್ಶನ ಪುಟ್ಟಣ್ಣಯ್ಯ ಭಾಗವಹಿಸುವರು ಎಂದು ತಿಳಿಸಿದರು.
ಪ್ರಮುಖ ಜನಚಳವಳಿಗಳ ಮುಖಂಡರಾದ ಬಡಗಲಪುರ ನಾಗೇಂದ್ರ, ಎಚ್ ಎಸ್ ಬಸವರಾಜಪ್ಪ, ಸಿದಗೌಡ ಮೊದಗಿ, ಎನ್ ವೆಂಕಟೇಶ, ಗುರುಪ್ರಸಾದ ಕೆರಗೋಡು, ಜಿ ಬಿ ಪಾಟೀಲ್, ರಾಮಚಂದ್ರಪ್ಪಾ, ಕೆ ಎಲ್ ಅಶೋಕ್ ಸಹ ಭಾಗವಹಿಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಸಂಘಟನೆಯ ಮುಖಂಡರಾದ ಶಂಕರ ಡವಳಿ, ಜಿ ವಿ ಕುಲಕರ್ಣಿ, ಶಿವಲೀಲಾ ಮಿಸಾಳೆ, ಸಂಜೀವ ಡೊಂಗರಗಾವಿ, ಗೈಬುಸಾಬ್ ಜೈನಖಾನ್, ಗೀತಾ ಧರೆಣ್ಣವರ, ರಮೇಶ ರಾಮಗೊಂಡನವರ ಇದ್ದರು.