- ಈ ಬಾರಿ ಹೊಸಬರಿಗೆ ಅವಕಾಶ ನೀಡಲು ಮುಂದಾಗಿರುವ ಕೋಲಾರದ ಜನತೆ
- ‘ಸಿದ್ಧರಾಮಯ್ಯ ಹಿಂದೆ ಸರಿದ ನಂತರ ಬದಲಾದ ಕ್ಷೇತ್ರದ ರಾಜಕೀಯ ಲೆಕ್ಕಾಚಾರ’
2023ರ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಾಗಲೇ ಅತಿಹೆಚ್ಚು ಸದ್ದು ಮಾಡಿದ ಕ್ಷೇತ್ರಗಳ ಪೈಕಿ ಕೋಲಾರ ಕ್ಷೇತ್ರವೂ ಒಂದು. ಸಿದ್ದರಾಮಯ್ಯ ಅವರು ಈ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ ಎನ್ನುವ ಕಾರಣಕ್ಕೆ ಭಾರೀ ಸದ್ದು ಮಾಡುತ್ತ ರಾಜ್ಯದ ಜನತೆಯ ಗಮನ ಸೆಳೆದಿತ್ತು. ಅದರೆ, ಈಗ ಎಲ್ಲವೂ ಬದಲಾಗಿದೆ.
ಸಿದ್ದರಾಮಯ್ಯ ಕೋಲಾರ ಕ್ಷೇತ್ರವನ್ನು ಕೈ ಬಿಟ್ಟಾಗ ಕಾಂಗ್ರೆಸ್ ಅಭ್ಯರ್ಥಿ ಯಾರು? ಎಂದು ಹುಡುಕುತಿದ್ದಾಗ ಕಾಂಗ್ರೆಸ್ ಕೊನೆಯಕ್ಷಣದಲ್ಲಿ ಮುಳುಬಾಗಿಲುನಲ್ಲಿರುವ ಕೊತ್ತೂರು ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ವಿರೋಧ ಪಕ್ಷಗಳ ಅಭ್ಯರ್ಥಿಗಳಲ್ಲಿ ಆತಂಕ ಸೃಷ್ಟಿಯಾಗಿದ್ದು, ನಿರಂತರವಾಗಿ ಜನರ ಮಧ್ಯೆ ಹೋಗಲು ಪ್ರಾರಂಭಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ ಕ್ಷೇತ್ರದಾದ್ಯಂತ ಪ್ರಚಾರ ನಡೆಸಿ ಕ್ಷೇತ್ರದಲ್ಲಿ ಈಗಾಗಲೇ ಸಮಾವೇಶಗಳನ್ನು ನಡೆಸಿ ಮತ್ತು ಅಭಿಮಾನಿಗಳ ಮಧ್ಯದಲ್ಲಿ ಹುಟ್ಟು ಹಬ್ಬ ಆಚರಿಸಿ ದೊಡ್ಡ ಕಾರ್ಯಕ್ರಮ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಈ ಬಾರಿ ಜೆಡಿಎಸ್ನಿಂದ ಸಿ ಎಮ್ ಆರ್ ಶ್ರೀನಾಥ ಅವರು ಅಭ್ಯರ್ಥಿಯಾಗಿದ್ದು, ಅವರು ಕೂಡ ಹೊಸ ಮುಖ ಎಂದು ಹೇಳುತ್ತಾ ಹೊಸಬರಿಗೆ ಒಂದು ಅವಕಾಶ ಕೊಡಿ ಎಂದು ಜನರಲ್ಲಿ ಮತಯಾಚನೆ ಮಾಡುತಿದ್ದಾರೆ. ಒಟ್ಟಿನಲ್ಲಿ ಈ ಮೂರು ಜನರ ನಡುವೆ ಈ ಬಾರಿ ಜಿದ್ದಾಜಿದ್ದಿನ ತ್ರೀಕೋನ ಸ್ಪರ್ಧೆ ಸಾಧ್ಯತೆ ಇದೆ.
“ಹಿಂದೆ ಎರಡು ಬಾರಿ ಶಾಸಕರಾಗಿರುವ ವರ್ತೂರು ಪ್ರಕಾಶ ಬಿಜೆಪಿಯಿಂದ ಸ್ಪರ್ಧೆ ಮಾಡತಿದ್ದು, ಕ್ಷೇತ್ರದಲ್ಲಿ ತಮ್ಮದೇ ಪ್ರಾಬಲ್ಯ ಹೊಂದಿದ್ದಾರೆ. ತಾನು ಶಾಸಕನಾಗಿದ್ದಾಗ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧ ಮಾಡಿಲ್ಲ, ಈಗಾಗಲೇ ಎರಡು ಬಾರಿ ಅಧಿಕಾರ ಕೊಟ್ಟು ನೋಡಿದ್ದೇವೆ. ಈ ಬಾರಿ ಹೊಸಬರಿಗೆ ಒಂದು ಅವಕಾಶ ನೀಡೋಣ” ಎಂದು ಜನರು ಮಾತಾಡಿಕೊಳ್ಳುತಿದ್ದಾರೆ.
ಟೊಮೆಟೊ ಮಂಡಿ ನಡೆಸುವ ಸಿ ಎಂ ಆರ್ ಶ್ರೀನಾಥ ಜೆಡಿಎಸ್ನ ಪ್ರಬಲ ಅಭ್ಯರ್ಥಿಯಾಗಿದ್ದಾರೆ. ಜೊತೆಗೆ ಹೊಸಬರು ಎನ್ನುವ ಲೆಕ್ಕಾಚಾರವೂ ಇದೆ. ಅಲ್ಲದೆ ಪಕ್ಷದ ಪಂಚರತ್ನ ಯೋಜನೆಗಳನ್ನು ಇಟ್ಟುಕೊಂಡು ಜನರ ಮುಂದೆ ಮತಯಾಚನೆ ಮಾಡುತಿದ್ದಾರೆ. ಈ ಬಾರಿ ಕ್ಷೇತ್ರದ ಜನ ಹೊಸಬರಿಗೆ ಅವಕಾಶ ಕೊಡಬೇಕು ಎನ್ನುವುದು ಕೂಡ ಕ್ಷೇತ್ರದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಕೊತ್ತೂರು ಮಂಜುನಾಥ ಈ ಕ್ಷೇತ್ರದ ಮೇಲೆ ಇಷ್ಟವಿಲ್ಲದಿದ್ದರೂ ಕರೆದುಕೊಂಡು ಬಂದು ಅಭ್ಯರ್ಥಿ ಮಾಡಿದ್ದಾರೆ. ನಾಮಪತ್ರ ಸಲ್ಲಿಸಿದ ನಂತರ ಅವರು ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಕೂಡ ಬಲಿಷ್ಠವಾಗಿದೆ. ಹಾಗಾಗಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎನ್ನುವ ಲೆಕ್ಕಚಾರ ಇದೆ. ಆದರೆ, ಮುಖ್ಯವಾಗಿ ಕ್ಷೇತ್ರದಲ್ಲಿ ಪ್ರತೀ ಚುನಾವಣೆಯಲ್ಲಿ ಮುನ್ನೆಲೆಗೆ ಬರುವ ಕ್ಷೇತ್ರದ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಈ ಕ್ಷೇತ್ರದಲ್ಲಿ ಮುಖ್ಯವಾದ ಸಮಸ್ಯೆಗಳು ಮಾತ್ರ ಜನರನ್ನು ಕಾಡುತ್ತಲೇ ಇವೆ.
ಈ ಸುದ್ದಿ ಓದಿದ್ದೀರಾ? ರೈತ ಯುವಕರನ್ನು ಮದುವೆಯಾದರೆ ₹2 ಲಕ್ಷ ಪ್ರೋತ್ಸಾಹ ಧನ; ಜೆಡಿಎಸ್ ಪ್ರಣಾಳಿಕೆ ಬಿಡುಗಡೆ
ಈ ಕ್ಷೇತ್ರದಲ್ಲಿ ಪ್ರಮುಖವಾಗಿ ಅಭಿವೃದ್ದಿ ಆಗಬೇಕಾದ ಸಮಸ್ಯೆಗಳೆಂದರೆ, ಇಲ್ಲಿ ತರಕಾರಿಗಳನ್ನು ಹೆಚ್ಚಾಗಿ ಬೆಳೆಯುತ್ತಿದ್ದರಿಂದ ಮತ್ತು ಟೊಮೆಟೊ ಬೆಳೆ ಇಲ್ಲಿನ ಪ್ರಮುಖ ಬೆಳೆಯಾಗಿರುವುದರಿಂದ ರೈತರು ಅದನ್ನು ಕೂಡಿಟ್ಟುಕೊಳ್ಳಲು ಸರಿಯಾದ ದಾಸ್ತಾನು ವ್ಯವಸ್ಥೆಯಿಲ್ಲ. ಇಲ್ಲಿನ ರೈತರ ಹಲವು ವರ್ಷಗಳ ಬಹುಬೇಡಿಕೆಯಾದ ಕೋಲ್ಡ್ ಸ್ಟೋರೇಜ್ ಆಗಿಲ್ಲ. ಇಲ್ಲೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ಸರ್ಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜುಗಳಿಲ್ಲ. ಕೆ ಸಿ ವ್ಯಾಲಿ ನೀರು ಕಲುಷಿತಗೊಂಡಿದೆ. ಅದನ್ನು ಇನ್ನೂ ಸಂಸ್ಕರಿಸಿ ಶುದ್ಧಿಕರಿಸುವ ಕೆಲಸವನ್ನೂ ಮಾಡಿಲ್ಲ.
ಕಲುಷಿತ ನೀರಿನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದುವರೆಗೂ ಹೇಳಿಕೊಳ್ಳುವಂತ ಅಭಿವೃದ್ಧಿ ಕಂಡಿಲ್ಲ. ಇಲ್ಲಿನ ಸಮಸ್ಯೆಗಳು ನಿರಂತರವಾಗಿ ಜನರನ್ನು ಕಾಡುತ್ತಲೇ ಇವೆ. ಈ ಸಮಸ್ಯೆಗಳನ್ನು ಬಗೆಹರಿಸುವಂತ, ಜನರ ನೋವಿಗೆ ಮಿಡಿಯುವ ನಾಯಕ ಇಲ್ಲಿ ಬೇಕೆಂದು ಜನರು ಬಯಸುತಿದ್ದಾರೆ. ಈ ನಿಟ್ಟಿನಲ್ಲಿ ಕ್ಷೇತ್ರದ ಮತದಾರರು ಯಾರ ಕೈ ಹಿಡಿಯುತ್ತಾರೋ ಕಾಯ್ದು ನೋಡಬೇಕು.