ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಹೇಮಾವತಿ ನದಿ ಹುಟ್ಟಿ, ಹಾಸನ ಮತ್ತು ಮಂಡ್ಯ ಜಿಲ್ಲೆಗಳ ಮೂಲಕ ಹರಿದು ಕಾವೇರಿಯನ್ನು ಸೇರುತ್ತದೆ. ಹಾಸನ ಜಿಲ್ಲೆಯ ಗೊರೂರು ಬಳಿ ಹೇಮಾವತಿ ನದಿಗೆ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಇದು ಕುಡಿಯುವ ನೀರು ಮತ್ತು ನೀರಾವರಿಗೆ ಪ್ರಮುಖವಾಗಿದೆ. ಹೇಮಾವತಿ ನದಿ ಸುಮಾರು 245 ಕಿಲೋಮೀಟರ್ಗಳಷ್ಟು ಉದ್ದವನ್ನು ಹೊಂದಿದೆ.

ಜಿಲ್ಲೆಯಲ್ಲಿ ಐದಾರು ಜಿಲ್ಲೆಗಳಿಗೆ ನೀರು ಒದಗಿಸುವ ಹೇಮಾವತಿ ಒಡಲು ಬರಿದಾಗುತ್ತಿದೆ. ಹೀಗಾಗಿ ಇದೇ ನೀರನ್ನು ನಂಬಿ ಬದುಕುತ್ತಿರುವವರಲ್ಲಿ ಆತಂಕ ಹೆಚ್ಚಾಗಿದೆ. ಸಕಲೇಶಫುರ ಬೇಲೂರು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಭಾಗದಲ್ಲಿ ಮಳೆ ಸುರಿದರೆ ತುಂಬಿ ಹರಿಯುತ್ತಿದ್ದ ಹೇಮಾವತಿ ನದಿ, ಜಲಾಶಯಕ್ಕೆ ನೀರು ತುಂಬಿಸುತ್ತಿತ್ತು. ಆದರೆ ಈ ವರ್ಷ ಮುಂಗಾರು ಮಳೆಯ ತೀವ್ರ ಕೊರತೆ ಕಂಡಿದೆ.

37 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲಿ ಈಗ ಕೇವಲ 14 ಟಿಎಂಸಿ ನೀರು ಮಾತ್ರ ಲಭ್ಯವಿದೆ. ಹೀಗಿದ್ದರೂ ಇದರಲ್ಲಿ ಬಳಕೆಗೆ ಯೋಗ್ಯ ನೀರು ಕೇವಲ 10 ಟಿಎಂಸಿ ಮಾತ್ರವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ ಬರೊಬ್ಬರಿ 25 ಟಿಎಂಸಿ ನೀರಿತ್ತು 21 ಟಿಎಂಸಿ ನೀರು ಬಳಕೆಗೆ ಸಿಗುವಂತಿತ್ತು. ಹಾಸನ ಜಿಲ್ಲೆಯ ಹಲವು ತಾಲೂಕುಗಳಿಗೆ ಕುಡಿಯುವ ನೀರಿನ ಮೂಲ ಇದೇ ಜಲಾಶಯವಾಗಿದೆ. ಜೊತೆಗೆ ಮೈಸೂರು, ಮಂಡ್ಯ, ತುಮಕೂರು ಜಿಲ್ಲೆಯ ಲಕ್ಷಾಂತರ ರೈತರ ತುತ್ತಿನ ಚೀಲಕ್ಕೆ ಆಸರೆಯಾಗಿರುವ ಹೇಮಾವತಿ ಜಲಾಶಯ ಈ ವರ್ಷ ಖಾಲಿಯಾಗಿದೆ.
ಇದನ್ನೂ ಓದಿದ್ದೀರಾ?ಹಾಸನ | ಹವಮಾನ: ಮುಂಗಾರು ಮುನ್ಸೂಚನೆ; ಮಳೆ ಎಚ್ಚರಿಕೆ
ಇದೆ ರೀತಿ ಪರಿಸ್ಥಿತಿ ಮುಂದುವರಿದರೆ ರೈತರಿಗೆ, ಕುಡಿಯುವ ನೀರಿಗೆ ಅವಲಂಬಿತರಾಗಿರುವ ಜನರಿಗೆ ಸಮಸ್ಯೆಯಾಗುತ್ತದೆ. ಮುಂದೆ ಆಗುವ ಪರಿಣಾಮಕ್ಕೆ ಸರ್ಕಾರ ಇಚ್ಛೆತ್ತಿಕೊಳ್ಳಬೇಕಾಗಿದೆ.




