ಕಲ್ಯಾಣ ಕರ್ನಾಟಕ ಭಾಗ ಹಿಂದುಳಿದಿದ್ದರೂ ಇಲ್ಲಿನ ವಿದ್ಯಾರ್ಥಿಗಳು ಅತ್ಯಂತ ಚಾಣಾಕ್ಷರು ಮತ್ತು ಬುದ್ಧಿವಂತರಾಗಿದ್ದಾರೆ. ಕಠಿಣ ಅಧ್ಯಯನ ನಡೆಸಿ 371(ಜೆ) ಸೌಲಭ್ಯದೊಂದಿಗೆ ಉನ್ನತ ಹುದ್ದೆ ಪಡೆಯಬೇಕುʼ ಎಂದು ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ ಸದಸ್ಯ ಡಾ.ರಜನೀಶ್ ಎಸ್.ವಾಲಿ ಹೇಳಿದರು.
ಬೀದರ್ ನಗರದ ಬಿ.ವಿ.ಭೂಮರೆಡ್ಡಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಇತಿಹಾಸ ವಿಭಾಗ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆ ವಿಭಾಗೀಯ ಕಛೇರಿ ಕಲಬುರಗಿ ಇವರ ಸಹಯೋಗದಲ್ಲಿ ಬಿ.ವಿ.ಭೂಮರೆಡ್ಡಿ ಕಾಲೇಜು ಸಭಾಂಗಣದಲ್ಲಿ ಆಯೋಜಿಸಿರುವ ಬಹುಶಿಸ್ತೀಯ ಎರಡು ದಿನಗಳ ರಾಷ್ಟ್ರಮಟ್ಟದ ವಿಚಾರ ಸಂಕಿರಣ ʼ371(ಜೆ) : ಇತಿಹಾಸ ಮತ್ತು ಸ್ವರೂಪʼ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ʼಕಲ್ಯಾಣ ಕರ್ನಾಟಕ ಭಾಗದ ಅನೇಕರು ನಡೆಸಿದ ಸುದೀರ್ಘ ಹೋರಾಟದ ಫಲವಾಗಿ ನಮಗೆ 371(ಜೆ) ಸ್ಥಾನಮಾನ ದಕ್ಕಿದೆ. ಈ ಸೌಲಭ್ಯದಿಂದ ಈ ಭಾಗದ ಜನರ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಿದ್ದು, ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಲು ನಾವೆಲ್ಲರೂ ಶ್ರಮಿಸಬೇಕುʼ ಎಂದರು.

ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಬೆಂಗಳೂರಿನ ಜಂಟಿ ನಿರ್ದೇಶಕ ಡಾ.ಸದಾನಂದ ನೆಲ್ಕುದ್ರಿ ಅವರು ಮಾತನಾಡಿ, ʼಹೈದ್ರಾಬಾದ ಕರ್ನಾಟಕ ಪ್ರದೇಶವು ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ಇತಿಹಾಸವನ್ನು ವಿವರಿಸಿದರು. ಸರ್ದಾರ ವಲ್ಲಭಬಾಯಿ ಪಟೇಲ್ ಅವರು ನಡೆಸಿದ ಆಪರೇಷನ್ ಪೋಲೋ ಮೂಲಕ ಈ ಪ್ರದೇಶವನ್ನು ಭಾರತಕ್ಕೆ ವಿಲೀನಗೊಳಿಸಿದ ಮಹತ್ವವನ್ನು ಉಲ್ಲೇಖಿಸಿದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದ ಈ ಪ್ರದೇಶವನ್ನು ಸಮಗ್ರ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ 371(ಜೆ) ಜಾರಿಗೊಳಿಸಲಾಗಿದೆʼ ಎಂದರು.
ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಸಂಸ್ಥಾಪಕ ಡಾ.ಲಕ್ಷ್ಮಣ ದಸ್ತಿ ಅವರು ಮಾತನಾಡಿ, ʼವಿದ್ಯಾರ್ಥಿಗಳು ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರ ಮಾತಿನಂತೆ ಅನ್ಯಾಯಕ್ಕೆ ಪ್ರತಿರೋಧ ವ್ಯಕ್ತಪಡಿಸುವುದು ಅಗತ್ಯ. ವಿದ್ಯಾರ್ಥಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡಿದರೆ ಮಾತ್ರ ಈ ಭಾಗದ ಅಭಿವೃದ್ಧಿಗೆ ಅಗತ್ಯವಾದ ಅನುದಾನ ದೊರೆಯುತ್ತದೆʼ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಸುರೇಶ ಚೆನ್ನಶೆಟ್ಟಿ, ಕರ್ನಾಟಕ ರಾಜ್ಯ ಪತ್ರಾಗಾರ ಮತ್ತು ಗ್ಯಾಸೆಟಿಯರ್ ಇಲಾಖೆಯ ಉಪ ನಿರ್ದೇಶಕ ಡಾ.ವೀರಶೆಟ್ಟಿ ಗಾರಂಪಳ್ಳಿ, ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕನಕಟ್ಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ದೀಪಾ ರಾಗ, ಇತಿಹಾಸ ವಿಭಾಗದ ಮುಖ್ಯಸ್ಥೆ ಡಾ.ಶಿವಲೀಲಾ ವೀರಯ್ಯ, ಕನ್ನಡ ವಿಭಾಗದ ಮುಖ್ಯಸ್ಥೆ ರೇಣುಕಾದೇವಿ ಎಸ್., ಮಾರುತಿ ಭೀಮಣ್ಣ, ಇತಿಹಾಸ ವಿಭಾಗದ ಉಪನ್ಯಾಸಕ ಬಸವರಾಜ ಎಸ್. ಬಿರಾದಾರ ವಂದಿಸಿದರು.
371(ಜೆ) ಮೀಸಲಾತಿ ಅಲ್ಲ, ವಿಶೇಷ ಪ್ರಾತಿನಿಧ್ಯ :
371(ಜೆ) ಸಮರ್ಪಕ ಜಾರಿ, ಪ್ರಾದೇಶಿಕ ಅಸಮಾನತೆ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಬೆಳವಣಿಗೆಗೆ ಸಂಬಂಧಿಸಿದ ವಿಷಯಗಳ ಕುರಿತು ವಿದ್ಯಾರ್ಥಿ ಕೇಂದ್ರಿತ ಚಳವಳಿ ಮತ್ತೆ ಮುನ್ನೆಲೆಗೆ ಬರಬೇಕಿದೆ ಎಂದು ಯುವ ಚಿಂತಕ ಪಿ.ನಂದಕುಮಾರ ಹೇಳಿದರು.

371(ಜೆ) ಇತಿಹಾಸ ಮತ್ತು ಸ್ವರೂಪ ರಾಷ್ಟ್ರೀಯ ವಿಚಾರ ಸಂಕಿರಣ ಮಾಧ್ಯಾಹ್ನ ಉಪನ್ಯಾಸ ಗೋಷ್ಠಿ- 1 ʼಸಂವಿಧಾನದ 371ನೇ ವಿಧಿʼ ವಿಷಯ ಕುರಿತು ಮಾತನಾಡಿದ ಅವರು, ʼಪ್ರಾದೇಶಿಕ ಅಸಮಾನತೆ ನಿವಾರಣೆಗೆ ಜಾರಿಯಾದ 371 ಜೆ ಕಲಂ ಈ ಭಾಗದ ಆರ್ಥಿಕ, ಕೃಷಿ, ಲಿಂಗಭೇದ, ಶಿಶು ಮರಣ, ಕೈಗಾರಿಕೆ, ಉದ್ಯೋಗ ಶೈಕ್ಷಣಿಕ ಸೇರಿದಂತೆ ಎಲ್ಲ ಕ್ಷೇತ್ರಗಳ ಅಸಮಾನತೆ ಹೋಗಲಾಡಿಸುವ ಉದ್ದೇಶದಿಂದ ಜಾರಿಯಾಗಿದೆ. ಇದು ಮೀಸಲಾತಿ ಅಲ್ಲ. 371ಜೆ ಎಂಬುದು ವಿಶೇಷ ಪ್ರಾತಿನಿಧ್ಯವಾಗಿದೆʼ ಎಂದು ಅಭಿಪ್ರಾಯಪಟ್ಟರು.
ರಾಜ್ಯಶಾಸ್ತ್ರ ಉಪನ್ಯಾಸಕ ಡಾ.ಚಿತ್ರಶೇಖರ ಚಿರಳ್ಳಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ನಿರಂತರ ಹೋರಾಟ, ರಾಜಕೀಯ ಇಚ್ಚಾಶಕ್ತಿಯಿಂದಾಗಿ ಹಿಂದುಳಿಸಲ್ಪಟ್ಟ ಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ದಕ್ಕಿದೆ. ಅದು ಜಾರಿಯಾಗಿ ಈಗ ಅದಕ್ಕೆ 13 ವರ್ಷ ಕಳೆದಿದೆ. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೀಸಲಾತಿ ದೊರೆಯುತ್ತಿದೆ. ಆದರೆ ಭೌತಿಕವಾಗಿ ಅಭಿವೃದ್ಧಿ ಇನ್ನಷ್ಟು ಹೊಂದಿದರೆ ಮಾತ್ರ ಈ ಭಾಗದ ಜೀವನಮಟ್ಟ ಸುಧಾರಣೆಯಾಗಲು ಸಾಧ್ಯʼ ಎಂದರು.
ಪ್ರಾಧ್ಯಾಪಕರಾದ ಡಾ.ಸುಮನಾಬಾಯಿ ಶಿಂಧೆ, ಮಾಣಿಕರಾವ ಭಾಲ್ಕೆ ಗೌರವ ಉಪಸ್ಥಿತರಿದ್ದರು. ವಾಣಿಶ್ರೀ ನಿರೂಪಿಸಿದರು. ವಚನಶ್ರೀ ಸ್ವಾಗತಿಸಿದರು. ಸರಸ್ವತಿ ಸ್ವಾಮಿ ವಂದಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ರಾಜಕೀಯ ಇಚ್ಚಾಶಕ್ತಿ ಅಗತ್ಯ :
ಮಾಧ್ಯಾಹ್ನ ಊಟದ ಬಿಡುವಿನ ನಂತರ ನಡೆದ ಉಪನ್ಯಾಸ ಗೋಷ್ಠಿ- 2ಯಲ್ಲಿ ʼಡಾ.ಡಿ.ಎಂ.ನಂಜುಂಡಪ್ಪ ವರದಿ : ಕಲ್ಯಾಣ ಕರ್ನಾಟಕವನ್ನು ಅನುಲಕ್ಷಿಸಿʼ ವಿಷಯ ಕುರಿತು ನಿವೃತ್ತ ಪ್ರಾಚಾರ್ಯ ಡಾ.ಬಸವರಾಜ ಕುಮನೂರು ಅವರು ನಂಜುಂಡಪ್ಪ ವರದಿಯ ಅಂಕಿ-ಅಂಶಗಳ ಸಮೇತ ವಿಶ್ಲೇಷಿಸಿದರು.

ʼಕಲ್ಯಾಣ ಕರ್ನಾಟಕ, ಮುಂಬೈ ಕರ್ನಾಟಕ ಒಳಗೊಂಡ ಉತ್ತರ ಕರ್ನಾಟಕ ಭಾಗವು ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಎಲ್ಲ ಕ್ಷೇತ್ರದಲ್ಲಿ ಹಿಂದುಳಿದಿದೆ. ಡಿ.ಎಂ.ನಂಜುಂಡಪ್ಪ ವರದಿ ಅನ್ವಯ ಈ ಭಾಗದ ಬಹುತೇಕ ತಾಲೂಕು ಅತ್ಯಂತ ಹಿಂದುಳಿದ ಪಟ್ಟಿಯಲ್ಲಿ. ಈ ಭಾಗದ ಶಿಕ್ಷಣ, ಉದ್ಯೋಗ, ಕೃಷಿ, ಸೇರಿದಂತೆ ಪ್ರತಿಯೊಂದು ಕ್ಷೇತ್ರವು ದಕ್ಷಿಣ ಜಿಲ್ಲೆಗಳಿಗಳಿಂದ ಶೇ 50ರಷ್ಟು ಹಿಂದುಳಿದಿದೆ. ಇದು ರಾಜಕೀಯ ಇಚ್ಚಾಶಕ್ತಿ ಕೊರತೆಯೂ ಕಾರಣವಾಗಿದೆʼ ಎಂದರು.
ʼಕಲ್ಯಾಣ ಕರ್ನಾಟಕ ಭಾಗಕ್ಕೆ 371(ಜೆ) ಜಾರಿಯಾಗಿ ದಶಕ ಕಳೆದರೂ ಇಂದಿಗೂ ಈ ಪ್ರದೇಶದ ಜನರ ಜೀವನಮಟ್ಟ ಸುಧಾರಣೆ ಕಂಡಿಲ್ಲ. ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಪರದಾಟ ನಡೆಸಬೇಕಾದ ದುಸ್ಥಿತಿ ಇಂದಿಗೂ ಇದೆ. ಡಿ.ಎಂ.ನಂಜುಂಡಪ್ಪ ವರದಿ ಬಳಿಕ ಇದೀಗ ಬಂದ ಗೊಂವಿದರಾವ್ ಸಮಿತಿ ನೀಡಿದ ಅಂಕಿ-ಅಂಶಗಳು ಗಮನಿಸಿದರೂ ಈ ಭಾಗದ ಅಭಿವೃದ್ಧಿ ಮರೀಚಿಕೆಯಾಗಿವೇ ಉಳಿದಿದೆ. ದಕ್ಷಿಣ ಕರ್ನಾಟಕದಂತೆ ಉತ್ತರ ಕರ್ನಾಟಕ ಅಭಿವೃದ್ಧಿಗೊಳ್ಳಬೇಕಾದರೆ ನಂಜುಂಡಪ್ಪ ವರದಿ, 371ಜೆ ಸಮರ್ಪಕವಾಗಿ ಅನುಷ್ಠಾನಗೊಳ್ಳಬೇಕು. ಇದಕ್ಕಾಗಿ ರಾಜಕೀಯ ಇಚ್ಚಾಶಕ್ತಿ ಜೊತೆ ಜನ ಚಳವಳಿ ತೀವ್ರಗೊಳ್ಳಬೇಕಿದೆʼ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಚನ್ನಬಸವನಾಂದ ಸ್ವಾಮೀಜಿ, ಅಶೋಕ ಮಾನೂರೆ, ಪ್ರಾಧ್ಯಾಪಕಿ ಡಾ.ಲೀಲಾವತಿ ಪೂಜಾರ ಉಪಸ್ಥಿತರಿದ್ದರು.
ಇದನ್ನೂ ಓದಿ : ಬೀದರ್ | ಏ.20ರಿಂದ 22ರವರೆಗೆ ಬಸವ ಜಯಂತಿ-ವಚನ ಜಾತ್ರೆ, ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ
ಕಲ್ಯಾಣ ಕರ್ನಾಟಕದ ಅಭಿವೃದ್ಧಿ : ಭವಿಷ್ಯದ ಯೋಜನೆಗಳ ಕುರಿತು ನಡೆದ ಸಂಜೆಯ ಉಪನ್ಯಾಸ ಗೋಷ್ಠಿ-3ರಲ್ಲಿ ಹಿರಿಯ ಹೋರಾಟಗಾರ ರೌಫ್ ಖಾದ್ರಿ ಮಾತನಾಡಿ, ʼಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕೃಷಿ, ನೀರಾವರಿ, ಕೈಗಾರಿಕೆ ಕ್ಷೇತ್ರದಲ್ಲಿ ಕಲ್ಯಾಣ ಕರ್ನಾಟಕ ಭಾಗ ಅತ್ಯಂತ ಹಿಂದುಳಿದಿದೆ. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಜಾರಿಯಾದ 371ಜೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಗಳು ಸಮರ್ಪಕ ಜಾರಿಯಾಗಬೇಕುʼ ಎಂದು ಹೇಳಿದರು.
ಪ್ರಾಧ್ಯಾಪಕರಾದ ಡಾ.ರುದ್ರೇಶ್ವರ ವಿ.ಮಠಪತಿ ಅಧ್ಯಕ್ಷತೆ ವಹಿಸಿದರು. ಪ್ರಾಧ್ಯಾಪಕರಾದ ನಾಗರೆಡ್ಡಿ, ವಿಜಯಲಕ್ಷ್ಮೀ, ಗಂಗಶೆಟ್ಟಿ ಪಾಟೀಲ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಕಲಬುರಗಿ ಮತ್ತು ಬೀದರ ಜಿಲ್ಲೆಯ ವಿವಿಧ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಉಪನ್ಯಾಸಕರು, ಇತಿಹಾಸ ತಜ್ಞರು, ಎನ್ಎಸ್ಎಸ್ ಮತ್ತು ಎನ್ಸಿಸಿ ವಿದ್ಯಾರ್ಥಿಗಳು ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇಂದಿನ ಗೋಷ್ಠಿಗಳು :





