ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೃಷ್ಣರಾಜ ಸಾಗರದ ಬೃಂದಾವನ ಉದ್ಯಾನದಲ್ಲಿ ಸೋಮವಾರ ಮಧ್ಯಾಹ್ನ ಸುರಿದ ಭಾರೀ ಮಳೆಯಿಂದಾಗಿ ಹಲವಾರು ಮರಗಳು ಧರೆಗುರುಳಿವೆ. ಈ ಹಿನ್ನೆಲೆಯಲ್ಲಿ, ಕೆಆರ್ಎಸ್ ಬೃಂದಾವನಕ್ಕೆ ಪ್ರವಾಸಿಗರಿಗೆ ಭೇಟಿಯನ್ನು ನಿರ್ಬಂಧಿಸಿ ಕಾವೇರಿ ನೀರಾವರಿ ನಿಗಮ ಆದೇಶ ಹೊರಡಿಸಿದೆ.
“ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಬೃಂದಾವನ ಉದ್ಯಾನವನ್ನು ಸೋಮವಾರ ಮುಚ್ಚಬೇಕಾಯಿತು. ಮಳೆಯ ಅವಾಂತರದಿಂದ ಸೃಷ್ಟಿಯಾದ ಘಟನೆಯ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಬೇರುಸಹಿತ ನೆಲಕ್ಕೆ ಉರುಳಿರುವ ಮರಗಳನ್ನು ಮಂಗಳವಾರ ತೆರವುಗೊಳಿಸಲಾಗುವುದು” ಎಂದು ಎಂದು ಕೆಆರ್ಎಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಒಂದೇ ತಿಂಗಳಲ್ಲಿ ಎರಡು ಚಿರತೆಗಳ ಸೆರೆ
“ಭಾರೀ ಗಾಳಿ ಮಳೆಯಿಂದಾಗಿ ಉದ್ಯಾನದೊಳಗಿನ ವಿದ್ಯುತ್ ಕಂಬಗಳೂ ಸಹ ಬಿದ್ದಿವೆ. ಕೆಆರ್ಎಸ್ನ ಕಾವೇರಿ ನೀರಾವರಿ ನಿಗಮ ನಿಯಮಿತ ಕಚೇರಿಯ ಆವರಣದಲ್ಲೂ ಮರಗಳು ಧರೆಗುರುಳಿವೆ. ಅದೃಷ್ಟವಶಾತ್, ಸೋಮವಾರದ ಘಟನೆಯಲ್ಲಿ ಯಾವುದೇ ಪ್ರವಾಸಿಗರು ಅಥವಾ ಅಧಿಕಾರಿಗಳು ಗಾಯಗೊಂಡಿಲ್ಲ” ಎಂದು ಪೊಲೀಸರು ತಿಳಿಸಿದ್ದಾರೆ.