ಭಾರತೀಯ ಚುನಾವಣಾ ಆಯೋಗ (ಇಸಿಐ) ನಡೆಸುತ್ತಿರುವ ‘ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ’ (ಎಸ್ಐಆರ್) ಕಾರ್ಯಾಚರಣೆಯ ವಿರುದ್ಧ ರಾಜ್ಯಸಭಾ ಸಂಸದ ಹಾಗೂ ಹಿರಿಯ ವಕೀಲ ಕಪಿಲ್ ಸಿಬಲ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಚುನಾವಣಾ ಆಯೋಗ ನಡೆಸುತ್ತಿರುವುದು ಅರ್ಹ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ‘ವಿಶೇಷ ಡಿಲಿಟೇಷನ್’ ಹಾಗೂ ಅನರ್ಹ ಮತದಾರರ ಹೆಸರನ್ನು ಸೇರಿಸುವ ‘ವಿಶೇಷ ಅಡಿಷನ್’ ಕೆಲಸ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.
ಎಸ್ಐಆರ್ ನಿಗದಿಪಡಿಸಿದ ವಿವರಗಳಲ್ಲಿ ವ್ಯತ್ಯಾಸವಿದೆ ಎಂಬ ಕಾರಣಕ್ಕೆ ಕಪಿಲ್ ಸಿಬಲ್ ಹಾಗೂ ಅವರ ಪತ್ನಿಗೆ ಆಯೋಗದಿಂದ ನೋಟಿಸ್ ಜಾರಿಯಾದ ಬೆನ್ನಲ್ಲೇ ಅವರು ಮಾಧ್ಯಮಗೋಷ್ಟಿ ನಡೆಸಿ ಈ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಚುನಾವಣಾ ಆಯೋಗ ಯಾವಾಗಲೂ ಮೋದಿ ಸರ್ಕಾರದ ‘ಕೈಗೊಂಬೆ’ಯಾಗಿದೆ: ಕಪಿಲ್ ಸಿಬಲ್
ಮಾಧ್ಯಮಗಳೊಂದಿಗೆ ಮಾತನಾಡಿದ ಸಿಬಲ್, “ನನ್ನ ಹೆಸರು ಕರಡು ಮತದಾರರ ಪಟ್ಟಿಯಲ್ಲಿದ್ದರೂ ನನಗೆ ನೋಟಿಸ್ ಕಳುಹಿಸಲಾಗಿದೆ. ಪ್ರಸ್ತುತ ಪಟ್ಟಿಯಲ್ಲಿರುವ ಹೆಸರು ಮತ್ತು ಹಿಂದಿನ SIR ಆವೃತ್ತಿಯಲ್ಲಿದ್ದ ಹೆಸರುಗಳಲ್ಲಿ ವ್ಯತ್ಯಾಸವಿದೆ ಎಂದು ನೋಟಿಸ್ನಲ್ಲಿ ಹೇಳಲಾಗಿದೆ. ಸಾರ್ವಜನಿಕ ರಂಗದಲ್ಲಿರುವ ನಮ್ಮಂತಹ ವ್ಯಕ್ತಿಗಳಿಗೇ ಈ ಪರಿಸ್ಥಿತಿ ಬಂದೊದಗಿದರೆ, ಯಾವುದೇ ಹಿನ್ನೆಲೆಯಿಲ್ಲದ ಸಾಮಾನ್ಯ ನಾಗರಿಕರ ಕಥೆಯೇನು? ಅವರು ಇದನ್ನು ಹೇಗೆ ಎದುರಿಸಲು ಸಾಧ್ಯ” ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಚುನಾವಣಾ ಆಯೋಗದ ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿದ ಅವರು, “ಕೇವಲ ಆಡಳಿತಾರೂಢ ಬಿಜೆಪಿಯನ್ನು ಅಧಿಕಾರದಲ್ಲಿ ಮುಂದುವರಿಸುವುದೇ ಚುನಾವಣಾ ಆಯೋಗದ ಉದ್ದೇಶವಾಗಿದ್ದರೆ, ದೇಶದಲ್ಲಿ ಚುನಾವಣೆಗಳನ್ನು ನಡೆಸುವ ಅಗತ್ಯವೇನಿದೆ?” ಎಂದು ಕಿಡಿಕಾರಿದ್ದಾರೆ. ಭವಿಷ್ಯದ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮತದಾರರ ಪಟ್ಟಿಯನ್ನು ಅಕ್ರಮವಾಗಿ ತಿರುಚುವ ಯತ್ನ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಸ್ತುತ ದೆಹಲಿ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಹಲವು ಪ್ರಮುಖ ವ್ಯಕ್ತಿಗಳು ಮತ್ತು ನಾಗರಿಕರಿಗೆ ವಿಳಾಸ ಅಥವಾ ತಂದೆಯ ಹೆಸರಿನ ವಿವರಗಳಲ್ಲಿ ವ್ಯತ್ಯಾಸವಿದೆಯೆಂದು ನೋಟಿಸ್ಗಳನ್ನು ನೀಡಲಾಗುತ್ತಿದ್ದು, ಇದು ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದಕ್ಕೆ ಕಾರಣವಾಗಿದೆ.




