ಕೇವಲ ಯೋಜನೆಗಳ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ, ಯೋಜನೆಗಳು ನಿಗದಿತ ಸಮಯದೊಳಗೆ ಕಾರ್ಯರೂಪಕ್ಕೆ ಬರಬೇಕಾದುದು ಅತ್ಯಗತ್ಯ ಅಂತಾರೆ ಮುಖಂಡರು
ಕರಾವಳಿ ಕರ್ನಾಟಕ (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು) ದಶಕಗಳಿಂದಲೂ ಬಿಜೆಪಿಯ ಭದ್ರಕೋಟೆಯೆಂದೇ ಗುರುತಿಸಿಕೊಂಡಿದೆ. ಹಿಂದುತ್ವದ ಅಲೆ ಮತ್ತು ಭಾವನಾತ್ಮಕ ವಿಷಯಗಳೇ ಇಲ್ಲಿ ಪ್ರಮುಖ ರಾಜಕೀಯ ವೇದಿಕೆಯನ್ನಾಗಿಸಿ ಬಿಜೆಪಿ ಜಯಿಸುತ್ತಾ ಬಂದಿದೆ. ಆದರೆ, ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಂಗಳೂರಿನ ‘ಪ್ರಜಾ ಸೌಧ’ದಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸಿ, ಒಟ್ಟು ₹32,611 ಕೋಟಿ ವೆಚ್ಚದ ಬೃಹತ್ ಯೋಜನೆಗಳು ಮತ್ತು ಸುದೀರ್ಘ ದಿನಗಳ ಬೇಡಿಕೆಗಳಿಗೆ ಅನುಮೋದನೆ ನೀಡುವ ಮೂಲಕ ಹೊಸ ಸಂಚಲನ ಮೂಡಿಸಿದೆ.
ಯೋಜನೆಗಳ ಪ್ರಕಟಣೆ ಮತ್ತು ಸಾಂಸ್ಕೃತಿಕ ನಿರ್ಧಾರಗಳು ಕರಾವಳಿಯ ರಾಜಕೀಯ ಸಮೀಕರಣಗಳ ಮೇಲೆ ಬೀರಬಹುದಾದ ಪರಿಣಾಮಗಳು ಪ್ರಸ್ತುತ ವ್ಯಾಪಕ ಚರ್ಚೆಗೆ ಗ್ರಾಸವಾಗಿವೆ. ದಶಕಗಳಿಂದಲೂ ಬಿಜೆಪಿಯ ಗಟ್ಟಿಯಾದ ಭದ್ರಕೋಟೆಯಾಗಿರುವ ಕರಾವಳಿ ಭಾಗದಲ್ಲಿ, ಭಾವನಾತ್ಮಕ ವಿಷಯಗಳ ಬದಲಿಗೆ ಪ್ರತ್ಯಕ್ಷ ಅಭಿವೃದ್ಧಿ ಹಾಗೂ ಪ್ರಾದೇಶಿಕ ಗುರುತಿನ ಪ್ರತಿಪಾದನೆಯ ಮೂಲಕ ತಳವೂರಲು ಕಾಂಗ್ರೆಸ್ ತಾಂತ್ರಿಕವಾಗಿ ತಂತ್ರ ಹೆಣೆದಿದೆ. ಈ ಅನುದಾನದ ಮಹಾಮಳೆ ಮತ್ತು ತೀರ್ಮಾನಗಳು ಕೇವಲ ಸರ್ಕಾರಿ ಘೋಷಣೆಗಳಾಗಷ್ಟೇ ಉಳಿಯದೆ ಕಾಲಮಿತಿಯಲ್ಲಿ ಜಾರಿಯಾದರೆ, ಅದು ಕರಾವಳಿಯಲ್ಲಿ ಕಾಂಗ್ರೆಸ್ಗೆ ರಾಜಕೀಯವಾಗಿ ಭಾರಿ ಅನುಕೂಲವನ್ನು ಮಾಡಿಕೊಡುವ ಸಾಧ್ಯತೆಯನ್ನು ನಿರಾಕರಿಸಲಾಗುವುದಿಲ್ಲ.
ಮೊದಲನೆಯದಾಗಿ ಕರಾವಳಿ ಜನರ ದಶಕಗಳ ಬೇಡಿಕೆಯಾಗಿದ್ದ ‘ತುಳು ಭಾಷೆಗೆ ಅಧಿಕೃತ ರಾಜ್ಯ ಭಾಷೆಯ ಮಾನ್ಯತೆ’ಯನ್ನು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ನೀಡಲು ಸಂಪುಟ ಸಮ್ಮತಿಸಿದೆ. ಬಿಜೆಪಿಯು ಇಷ್ಟು ವರ್ಷ ಕರಾವಳಿಯಲ್ಲಿ ಅಧಿಕಾರದಲ್ಲಿದ್ದಾಗಲೂ ಈ ಬೇಡಿಕೆಯನ್ನು ಈಡೇರಿಸಿರಲಿಲ್ಲ ಎಂಬ ವಾದವನ್ನು ಈಗ ಕಾಂಗ್ರೆಸ್ ಜನರೆದುರು ಮಂಡಿಸಬಹುದು. ಈ ಮೂಲಕ ಕರಾವಳಿಯ ಸಾಂಸ್ಕೃತಿಕ ಹಾಗೂ ಆವೇಗತ್ಮಕ ಭಾವನೆಗಳಿಗೆ ಧ್ವನಿಯಾಗುವ ಮೂಲಕ ಕಾಂಗ್ರೆಸ್ ಇಲ್ಲಿನ ಕನ್ನಡಿಗರು ಮತ್ತು ತುಳುವರ ಮನೆಗೆ ಹತ್ತಿರವಾಗಲು ಯತ್ನಿಸಿದೆ.
This video cannot be played in your browser. Open the video directly
ಇದನ್ನೂ ಓದಿ: ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ: ಕರಾವಳಿಗರ ನಿರೀಕ್ಷೆಗಳೇನು?
ಇನ್ನೊಂದೆಡೆ ಮಂಗಳೂರು ನಗರದ ಹಾನಿಗೊಳಗಾದ ರಸ್ತೆಗಳ ಕಾಂಕ್ರೀಟೀಕರಣಕ್ಕೆ ₹400 ಕೋಟಿ, ಯುಜಿಡಿ (ಅಂಡರ್ಗ್ರೌಂಡ್ ಡ್ರೈನೇಜ್) ಸುಧಾರಣೆಗೆ ₹100 ಕೋಟಿ, ವಾಟರ್ ಮೆಟ್ರೋ ಯೋಜನೆಯ ತಾಂತ್ರಿಕ ಅಧ್ಯಯನ, ವೆನ್ಲಾಕ್ ಆಸ್ಪತ್ರೆಯ ಸಾಮರ್ಥ್ಯವನ್ನು 200 ಬೆಡ್ಗಳಿಗೆ ಹೆಚ್ಚಿಸಿ ಮೇಲ್ದರ್ಜೆಗೇರಿಸುವುದು, ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ₹549 ಕೋಟಿ ಹಾಗೂ ಮಂಗಳಾ ಸ್ಟೇಡಿಯಂ ಮತ್ತು ಉಡುಪಿ ಕ್ರೀಡಾಂಗಣದ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ಪ್ರಕಟಿಸಲಾಗಿದೆ. “ನಾವು ಕೇವಲ ಭಾವನೆಗಳ ಮೇಲೆ ರಾಜಕೀಯ ಮಾಡುವುದಿಲ್ಲ, ಜನರ ಬದುಕು ಮತ್ತು ಅಭಿವೃದ್ಧಿಯ ಮೇಲೆ ಕೆಲಸ ಮಾಡುತ್ತೇವೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿರುವಂತೆ ಮೂಲಸೌಕರ್ಯ ಕೊರತೆಯಿಂದ ಕಂಗಾಲಾಗಿದ್ದ ಮಂಗಳೂರು ನಗರ ಮತ್ತು ಗ್ರಾಮೀಣ ಭಾಗದ ಜನರಿಗೆ ಈ ಯೋಜನೆಗಳು ಕೊಂಚ ಸಮಾಧಾನ ತರಬಹುದು. ಹಾಗೆಯೇ ಮೀನುಗಾರ ಸಮುದಾಯವು ಕರಾವಳಿಯ ಬಹುದೊಡ್ಡ ವೋಟ್ ಬ್ಯಾಂಕ್. ಅವರ ಸಾಲ, ಭದ್ರತೆ ಮತ್ತು ಆಧುನಿಕ ಮೂಲಸೌಕರ್ಯಗಳ ಕುರಿತು ಕೈಗೊಂಡ ನಿರ್ಧಾರಗಳು ಕಾಂಗ್ರೆಸ್ ಪಕ್ಷಕ್ಕೆ ನೆರವಾಗುವ ಸಾಧ್ಯತೆಯಿದೆ.
ಈ ಬಗ್ಗೆ ಈ ದಿನ.ಕಾಮ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಮಾಜಿ ಸಚಿವ ರಮಾನಾಥ ರೈ, “ನಮಗೆ ರಾಜಕೀಯ ಅನುಕೂಲವಾಗಬಹುದು. ಆದರೆ ರಾಜಕೀಯ ಅನುಕೂಲವಾಗುವುದಕ್ಕೂ ಹೆಚ್ಚಾಗಿ ನಾವು ಅಭಿವೃದ್ದಿ ಪರವಾಗಿ ಕೆಲಸ ಮಾಡುವವರು. ಕೆಲವರಿಗೆ ಚುನಾವಣೆಯೇ ಅಜೆಂಡಾ, ಆದರೆ ನಮಗೆ ಅಭಿವೃದ್ಧಿ ಕಾರ್ಯ ಮಾಡುವುದೇ ಅಜೆಂಡಾ. ಲಾಭವಾಗುತ್ತದೊ ಬಿಡುತ್ತದೋ ಬೇರೆ ವಿಚಾರ. ಆದರೆ ಜನರಿಗೆ ಅನುಕೂಲವಾಗುವುದು ಮುಖ್ಯ, ಅದು ಆಗಿದೆ” ಎಂದು ಅಭಿಪ್ರಾಯಿಸಿದರು.

“ಕರಾವಳಿಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ, ಮೀನುಗಾರಿಕೆ ಅಭಿವೃದ್ದಿಗೆ, ತುಳು ಭಾಷೆ ಸಂಬಂಧಿತ ಘೋಷಣೆ ಮಾಡಲಾಗಿದೆ. ನಾವು ಈವರೆಗೆ ಮಂಗಳೂರಿನ ಬೆಳವಣಿಗೆಯನ್ನು ಹತ್ತಿರದಿಂದ ನೋಡಿದಾಗ ಕಾಂಗ್ರೆಸ್ನ ಶ್ರೀನಿವಾಸ್ ಮಲ್ಯ ಅವರು ಕೊಟ್ಟಿರುವ ಕೊಡುಗೆ ಅಭೂತಪೂರ್ವ. ಸೇತುವೆ, ರೈಲ್ವೆ, ವಿಮಾನ ನಿಲ್ದಾಣ, ಬಂದರು ಎಲ್ಲವೂ ಕಾಂಗ್ರೆಸ್ ಅವಧಿಯಲ್ಲಿ ಮಾಡಲಾಗಿದೆಯೇ ಹೊರತು ಬೇರೆ ಯಾರ ಅವಧಿಯಲ್ಲೂ ಅಲ್ಲ. ಆಸ್ಕರ್ ಫರ್ನಾಂಡಿಸ್ ಅವರು ಇದ್ದಾಗ ಹಲವಾರು ಅಭಿವೃದ್ಧಿ ಕಾರ್ಯ ಆಗಿದೆ. ಮಂಗಳೂರಿಗೆ ಇತರೆ ಜಿಲ್ಲೆ ಕೊಂಡಿಯಾಗಲು ಹೆದ್ದಾರಿಗಳನ್ನೂ ಮಾಡಿಸಿದವರು ಅವರು. ಆ ಸಂದರ್ಭದಲ್ಲಿ ಅವರು ಯಾರೂ ಪ್ರಚಾರ ಮಾಡಿಲ್ಲ. ಇವೆಲ್ಲವೂ ಅಂಕಿಅಂಶ ಆಧಾರದಲ್ಲಿ ನಾನು ಮಾತನಾಡುತ್ತಿರುವುದು” ಎಂದರು.
“ನಮ್ಮ ಜಿಲ್ಲೆಯಲ್ಲಿ ಪ್ರಜಾಸೌಧ ಮಾಡಲಾಗಿದೆ. ಬೆಂಗಳೂರು ಬಿಟ್ಟರೆ ಅತಿ ದೊಡ್ಡ ಅಂಬೇಡ್ಕರ್ ಭವನ ಇರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ನಾವೀಗ ಇಲ್ಲಿ ಶಾಸಕ ಸ್ಥಾನ ಸೋತಿರಬಹುದು. ಆದರೆ ಇಲ್ಲಿನ ಅಭಿವೃದ್ದಿ ವಿಚಾರದಲ್ಲಿ ನಮ್ಮ ಸರ್ಕಾರ ಹಿಂದೇಟು ಹಾಕಿಲ್ಲ. ಕಾಟಚಾರಕ್ಕಾಗಿ ನಾವು ಸಚಿವ ಸಂಪುಟ ಸಭೆ ಮಾಡಿರುವುದಲ್ಲ. ಜನರ ಅನುಕೂಲಕ್ಕಾಗಿ ಮಾಡಿರುವುದು. ಕೆಲವು ಬೇಡಿಕೆಗಳು ಬಿಟ್ಟು ಹೋಗಿದೆ. ಆ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ” ಎಂದು ತಿಳಿಸಿದರು.
ಮಂಗಳೂರಿನ ಪ್ರಮುಖ ರಾಜಕೀಯ ಮತ್ತು ಸಾಮಾಜಿಕ ಚಿಂತಕರು, ಕಾಂಗ್ರೆಸ್ ವಕ್ತಾರ ಎಂ.ಜಿ. ಹೆಗಡೆ ಅವರು ಪ್ರತಿಕ್ರಿಯಿಸಿದ್ದು, “ಇಲ್ಲಿಯವರೆಗೆ ಅಭಿವೃದ್ಧಿಯ ಚರ್ಚೆಯನ್ನೇ ಮಾಡಲು ಬಿಜೆಪಿಗರು ಮುಂದಾಗಿರಲಿಲ್ಲ, ಭಾವನಾತ್ಮಕ ಸಂಗತಿಗಳನ್ನು ಮಾತ್ರ ಕೆರಳಿಸುತ್ತಿದ್ದರು. ಚುನಾವಣೆಯಲ್ಲಿ ವಿಷಯವಲ್ಲದನ್ನೂ ವಿಷಯವನ್ನಾಗಿಸುವ ವಾತಾವರಣ ನಿರ್ಮಿಸಿದ್ದರು. ಈಗ ನೇರವಾಗಿ ಮುಖ್ಯಮಂತ್ರಿಗಳು ಕರಾವಳಿಗೆ ಬಂದು ಸಚಿವ ಸಂಪುಟ ಸಭೆ ಮಾಡಿದ್ದಾರೆ. ಇಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದಾರೆ. ಈಗ ಅಭಿವೃದ್ಧಿಯ ಚರ್ಚೆ ಆರಂಭವಾಗಿದೆ. ಇದರಿಂದಾಗಿ ಚುನಾವಣೆಯ ವಿಚಾರ ಬಂದಾಗ ಜನರ ಮನಸ್ಸು ಸ್ವಲ್ಪ ಕಾಂಗ್ರೆಸ್ ಕಡೆ ಹೊರಳುತ್ತದೆ” ಎಂದು ಅಭಿಪ್ರಾಯಿಸಿದರು.

“ಅಭಿವೃದ್ಧಿಯ ವಿಚಾರದಲ್ಲಿ ಚರ್ಚೆಯಾದರೆ ಅದು ಯಾವತ್ತೂ ಕಾಂಗ್ರೆಸ್ಗೆ ಲಾಭ. ಏಕೆಂದರೆ ಬಿಜೆಪಿಗರ ಬಳಿ ಅಭಿವೃದ್ಧಿ ವಿಚಾರದಲ್ಲಿ ಹೇಳಿಕೊಳ್ಳಲು ಏನೂ ಇಲ್ಲ. ಅದಕ್ಕಾಗಿ ಭಾವನಾತ್ಮಕ ಸಂಗತಿಯನ್ನೇ ಕೆರಳಿಸುತ್ತಾರೆ. ಆದ್ದರಿಂದ ಯೋಜನೆಗಳು, ತುಳು ಭಾಷೆಗೆ ಮಾನ್ಯತೆ ಕಾಂಗ್ರೆಸ್ಗೆ ಅನುಕೂಲವಾಗಲಿದೆ. ಬಿಜೆಪಿಯ ಭಾವನಾತ್ಮಕ ರಾಜಕಾರಣಕ್ಕೆ ಹಿನ್ನಡೆ ಉಂಟಾಗಲಿದೆ” ಎಂದು ತಿಳಿಸಿದರು.
ಮಹಿಳಾ ಕಾಂಗ್ರೆಸ್ ಮುಖಂಡೆ ಪ್ರತಿಭಾ ಕುಳಾಯಿ ಪ್ರತಿಕ್ರಿಯಿಸಿ, “ಖಂಡಿತವಾಗಿಯೂ ಕಾಂಗ್ರೆಸ್ಗೆ ಅನುಕೂಲವಾಗಲಿದೆ. ಯಾಕೆಂದರೆ ಇಲ್ಲಿಯವರೆಗೆ ನಮ್ಮ ಸ್ವತ್ತುಗಳನ್ನು ಬೇರೆ ಬೇರೆ ಕಂಪನಿಗಳಿಗೆ ಮಾರಾಟ ಮಾಡಿದ್ದೇವೆ. ಎಂಆರ್ಪಿಎಲ್ ಸೇರಿದಂತೆ ಹಲವು ಸಂಸ್ಥೆಗಳು ನಮ್ಮವರಿಗೆ ಉದ್ಯೋಗ ನೀಡಿಲ್ಲ. ಶಿಕ್ಷಿತರಾದರೂ ಉದ್ಯೋಗವಿಲ್ಲ. ಈಗ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ” ಎಂದು ತಿಳಿಸಿದರು.

“ನಮ್ಮಲ್ಲಿ ಶಿಕ್ಷಿತರಿದ್ದಾರೆ, ವಿಮಾನ ನಿಲ್ದಾಣ, ಇತರೆ ಸೌಲಭ್ಯಗಳಿದೆ. ಅವೆಲ್ಲವೂ ಉಳ್ಳಾಲ ಶ್ರೀನಿವಾಸ ಮಲ್ಯ ಅವಧಿಯಲ್ಲಿ ಆಗಿರುವಂತದ್ದು. ಅದಾದ ಬಳಿಕ ಏನೂ ಆಗಿಲ್ಲ. ಅಭಿವೃದ್ಧಿ ಎಂಬುದಿಲ್ಲ. ಆದರೆ ಈಗ ಪ್ರವಾಸೋದ್ಯಮಕ್ಕೆ ಸರ್ಕಾರ ಆದ್ಯತೆ ನೀಡಿದೆ. ಇದರಿಂದಾಗಿ ಉದ್ಯೋಗವಕಾಶವಿದೆ. ಇದರಿಂದ ಸ್ಥಳೀಯರಿಗೆ ಸಹಾಯವಾಗಲಿದೆ ಎಂಬುದು ನನ್ನ ಅಭಿಪ್ರಾಯ” ಎಂದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಸಚಿವ ಸಂಪುಟ; ಕರಾವಳಿ–ಮಲೆನಾಡಿಗೆ ಹೊಸ ರೂಪ: ಸಿಎಂ ಡಿಕೆಶಿ
“ನಮ್ಮ ಜಿಲ್ಲೆಯಲ್ಲಿ ಎಲ್ಲ ಸೌಲಭ್ಯವಿದ್ದರೂ ಇಲ್ಲಿ ಯಾವುದೇ ಸಂಸ್ಥೆಗಳು ಹೂಡಿಕೆ ಮಾಡದಿರಲು ಕೋಮು ಗಲಭೆ ಕಾರಣ. ಹಿಂದೂ ಮುಸ್ಲಿಂ ಎಂದು ಗಲಾಟೆ ಮಾಡುತ್ತಿರುವಾಗ ಯಾರೂ ಇಲ್ಲಿಗೆ ಬರಲು ಮುಂದಾಗಲ್ಲ. ಇತ್ತೀಚೆಗೆ ಶಿಕ್ಷಣಕ್ಕಾಗಿ ಇಲ್ಲಿಗೆ ಮಕ್ಕಳನ್ನು ಕಳುಹಿಸಲೂ ಪೋಷಕರು ಹೆದರುತ್ತಿದ್ದಾರೆ. ಕೋಮು ಗಲಭೆಯನ್ನು ಬದಿಗಿಟ್ಟರೆ ಮಂಗಳೂರು ರಾಜ್ಯದಲ್ಲಿ ಒಂದನೇ ಸ್ಥಾನದಲ್ಲಿರಲಿದೆ” ಎಂದು ತಿಳಿಸಿದರು.
“ನಮ್ಮ ಸರ್ಕಾರ ತುಳು ಭಾಷೆಗೆ ಅಧಿಕೃತ ಮಾನ್ಯತೆ ಘೋಷಿಸಿದೆ. ಆದರೆ ಬಿಜೆಪಿಗರು ತಮ್ಮ ಶಾಸಕರಿಗೆ ಅಭಿನಂದನೆ ತಿಳಿಸುತ್ತಿದ್ದಾರೆ. ಆದರೆ ಇದರಲ್ಲಿ ಏನು ಅರ್ಥ ಇದೆ ಗೊತ್ತಾಗುತ್ತಿಲ್ಲ. ಅವರ ಸರ್ಕಾರವಿದ್ದಾಗ ಈ ಕಾರ್ಯವನ್ನು ಮಾಡಿಲ್ಲ. ಈಗ ನಮ್ಮ ಸರ್ಕಾರ ತುಳುವಿಗೆ ಮಾನ್ಯತೆ ನೀಡಿದೆ ಎಂದು ವಾಗ್ದಾಳಿ ನಡೆಸಿದರು.
ಇನ್ನು ಉಡುಪಿ ಜಿಲ್ಲೆಯ ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿರುವ ಡಾ. ಸುಬ್ರಹ್ಮಣ್ಯ ಭಟ್ ಅವರು ಪ್ರತಿಕ್ರಿಯಿಸಿದ್ದು ಹೀಗೆ… “ಅನುದಾನ ಬಿಡುಗಡೆಯಾದ ಕಾರಣ ಕಾಂಗ್ರೆಸ್ಗೆ ಲಾಭವಾಗಲಿದೆ ಎಂದು ಹೇಳಲಾಗದು. ಆದರೆ ಸಿಎಂ ಆದ ಡಿ ಕೆ ಶಿವಕುಮಾರ್ ಅವರಿಗೆ ಕೊಂಚ ಮೃದು ಹಿಂದುತ್ವ ಇರುವ ಕಾರಣ, ಇಲ್ಲಿಯೂ ಹಿಂದುತ್ವ ಬಲ ಇರುವುದರಿಂದ ಕಾಂಗ್ರೆಸ್ಗೆ ಕೊಂಚ ರಾಜಕೀಯ ಲಾಭವಾಗಬಹುದು. ಹಾಗೆಂದು ಬಿಜೆಪಿ ಕಾರ್ಯಕರ್ತರು ಬದಲಾಗಲಾರರು. ತಟಸ್ಥ ಇರುವವರು, ಕಾಂಗ್ರೆಸ್ಗಿಂತ ಶಿವಕುಮಾರ್ ಸರ್ಕಾರದ ಕಡೆ ವಾಲಬಹುದು” ಎಂದರು.

“ಕಸ್ತೂರಿರಂಗನ್ ವಿಚಾರದಲ್ಲಿ ಭರವಸೆ ಮೂಡಿಸಿದಾಗ ಮುಂದಿನ ದಿನಗಳಲ್ಲಿ ಮತ ಹಾಕುವ ಎಂಬ ಆಲೋಚನೆ ಜನರಲ್ಲಿ ಮೂಡಬಹುದು. ಮುಂದಿನ 2028ರ ವಿಧಾನಸಭೆ ಚುನಾವಣೆಗೆ ಲಾಭವಾಗಬಹುದು. ದಕ್ಷಿಣ ಕನ್ನಡ, ಉಡುಪಿಯಲ್ಲಿ ಬದಲಾವಣೆಯಾಗಬಹುದು. ನಿಧಾನವಾಗಿ ಬದಲಾವಣೆ ಆಗಬಹುದು, ಆದರೆ ನೇರವಾಗಿ ಬದಲಾವಣೆ ಆಗದು. ಚುನಾವಣೆಗೂ ಒಂದು ವರ್ಷಕ್ಕೂ ಮುನ್ನ ಎಲ್ಲವೂ ತಿಳಿಯುತ್ತದೆ” ಎಂದು ಅಭಿಪ್ರಾಯಿಸಿದರು.
“ತುಳು ವಿಚಾರದಲ್ಲಿ ಕೊಂಚ ಬದಲಾವಣೆಯಾಗಬಹುದು. ಇದರಿಂದಾಗಿ ಹೆಚ್ಚಿನ ಪ್ರಭಾವ ಆಗದು. ಮಂಗಳೂರಿನಲ್ಲಷ್ಟೇ ಬದಲಾವಣೆ ಆಗಬಹುದು. ವಿ. ಸುನಿಲ್ ಕುಮಾರ್ ಅವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದರು. ಈ ವೇಳೆ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಬಹುದಿತ್ತು. ಆದರೆ ಮಾಡಿಲ್ಲ. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಘೋಷಣೆಯಾಗಿದೆ. ಆದರೆ ಇದು ನಮ್ಮಿಂದಲೇ ಸಾಧ್ಯವಾಗಿದ್ದು ಎಂದು ಸುನಿಲ್ ಕುಮಾರ್ ಅವರು ಹೇಳಿಕೊಳ್ಳಬಹುದು” ಎಂದು ತಿಳಿಸಿದರು.
ಉಡುಪಿಯ ಪ್ರಮುಖ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ, “ಸರ್ಕಾರದ ಪಂಚ ಯೋಜನೆಗಳ ಅಪಾರ ಪ್ರಮಾಣದ ಫಲಾನುಭವಿಗಳು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದಾರೆ. ನಮಗೆ ಈ ಜಿಲ್ಲೆಯಲ್ಲಿ ಮತ ಹಾಕಿಲ್ಲ, ಯಾವುದೇ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ ಈ ಜಿಲ್ಲೆಗೆ ಯಾವುದೇ ಅನುದಾನ ನೀಡದಿರುವ ಸಣ್ಣ ಮನಸ್ಸಿನ ಅಥವಾ ಭೇದ-ಭಾವದ ಧೋರಣೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿಲ್ಲ. ಎಲ್ಲ ರೀತಿಯ ಅನುದಾನವನ್ನು ಕೊಡಲಾಗಿದೆ. ಇತಿಹಾಸದಲ್ಲೇ ಪ್ರಥಮ ಬಾರಿಗೆ ಸರ್ಕಾರದ ನಿರ್ಧಾರ ತೆಗೆದುಕೊಳ್ಳುವ ಅತ್ಯುನ್ನತ ಸಭೆಯನ್ನು ಕರಾವಳಿಯಲ್ಲಿ ನಡೆಸಲಾಗಿದೆ. ಇದಕ್ಕೂ ಮೊದಲೇ ಕರಾವಳಿಯ ಬೇಡಿಕೆಗಳ ಬಗ್ಗೆ ತಿಳಿದು ಘೋಷಣೆ ಮಾಡಲಾಗಿದೆ” ಎಂದು ತಿಳಿಸಿದರು.

“2013ರಲ್ಲಿ ಅವಿಭಜಿತ ದಕ್ಷಿಣ ಕನ್ನಡದಲ್ಲಿ ಉಡುಪಿಯಲ್ಲಿ ಮೂರು, ದಕ್ಷಿಣ ಕನ್ನಡದಲ್ಲಿ ಏಳು ಕಾಂಗ್ರೆಸ್ ಶಾಸಕರು ಗೆದ್ದಿದ್ದರು. ಅಂದರೆ ಬರೀ 13 ವರ್ಷಗಳ ಹಿಂದೆ. ಆಗಿನ ಮತದಾರರಲ್ಲಿ ಬರೀ ಶೇಕಡ ಐದರಷ್ಟು ಮತದಾರರು ಸಾವನ್ನಪ್ಪಿರಬಹುದು. ಇನ್ನುಳಿದ ಮತದಾರರು ಜೀವಂತವಾಗಿದ್ದಾರೆ. ಆದರೆ ಮೋದಿ ಭಾಷಣವನ್ನು ನಂಬಿ, ಅವರ ವೇಷಭೂಷಣಗಳನ್ನು ನೋಡಿ, ಅವರು ಹೊಸ ಲೋಕವನ್ನೇ ಕಾಲ ಬುಡಕ್ಕೆ ತಂದಿಡುತ್ತಾರೆ ಎಂಬ ಭ್ರಮೆಯಲ್ಲಿ 10-12 ವರ್ಷ ಖಂಡಿತವಾಗಿ ಬಿಜೆಪಿಗೆ ಮತ ಹಾಕಿದ್ದಾರೆ. ಆದರೆ ಡಿ ಕೆ ಶಿವಕುಮಾರ್ ಅವರು ಎಲ್ಲ ಮತದಾರರ ಮನವನ್ನು ಗೆದ್ದಿರುವುದು ಮೇಲ್ನೋಟಕ್ಕೆ ತೋರುತ್ತಿದೆ. ಕರಾವಳಿ ಎಂದರೆ ಧಾರ್ಮಿಕ ಮನೋಭಾವದ ಜನರು ಹೆಚ್ಚು. ಸಿಎಂ ಭಕ್ತಿ ತೋರಿಸುವ ರೀತಿ, ಧಾರ್ಮಿಕ ಪ್ರವೃತ್ತಿಯಿಂದ ಈ ಜನರ ಮೆಚ್ಚುಗೆ ಗಳಿಸಿದ್ದಾರೆ, ಜನರಿಗೆ ತುಂಬ ಹತ್ತಿರವಾಗಿದ್ದಾರೆ. ಮುಂದೆ ಕರಾವಳಿಯಲ್ಲೂ ಕಾಂಗ್ರೆಸ್ ಶಾಸಕರು ಗೆದ್ದು ಬರಲಿದ್ದಾರೆ” ಎಂದು ಭರವಸೆ ವ್ಯಕ್ತಪಡಿಸಿದರು.
ಹೀಗೆ ಕರಾವಳಿಯಲ್ಲಿ ಹಿಂದುತ್ವ ಹಾಗೂ ಕೋಮು ಧ್ರುವೀಕರಣವನ್ನು ಮೆಟ್ಟಿ ನಿಲ್ಲಲು ಕಾಂಗ್ರೆಸ್ಗೆ ಈ ‘ಅಭಿವೃದ್ಧಿ ರಾಜಕಾರಣ’ ಪ್ರಬಲ ಅಸ್ತ್ರವಾಗಲಿದೆ. ಉಸ್ತುವಾರಿ ಸಚಿವರಾದ ಯು.ಟಿ. ಖಾದರ್, ಶಾಸಕ ಅಶೋಕ್ ಕುಮಾರ್ ರೈ ಮುಂತಾದವರ ಕೈಯನ್ನು ಈ ನಿರ್ಧಾರಗಳು ಬಲಪಡಿಸಲಿವೆ. ತುಳು ಭಾಷೆಯ ಮಾನ್ಯತೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ‘ಮಂಗಳೂರು ಜಿಲ್ಲೆ’ ಎಂದು ಬದಲಾಯಿಸುವ ಸಾರ್ವಜನಿಕ ಅಭಿಪ್ರಾಯ ಸಂಗ್ರಹದ ಘೋಷಣೆ ಕಾಂಗ್ರೆಸ್ಗೆ ‘ಕರಾವಳಿ ಪರ’ ಎಂಬ ಇಮೇಜ್ ತಂದುಕೊಡುತ್ತದೆ ಎಂಬ ಅಭಿಪ್ರಾಯ ಹಲವರದ್ದು.
ಆದರೆ ಕೇವಲ ಸಂಪುಟ ಸಭೆಯ ಘೋಷಣೆಯಾದರೆ ಸಾಲದು; ಅನುದಾನ ಬಿಡುಗಡೆಯಾಗಬೇಕು, ಟೆಂಡರ್ ಪ್ರಕ್ರಿಯೆ ಮುಗಿದು ಕಾಮಗಾರಿಗಳು ನೆಲಮಟ್ಟದಲ್ಲಿ ಆರಂಭವಾಗಬೇಕು. ಕೆಲಸ ವಿಳಂಬವಾದರೆ ಜನರಲ್ಲಿ ನಿರಾಸೆ ಮೂಡುವುದು ಖಂಡಿತ. ಈ ರಾಜಕೀಯ ಲಾಭವು ಚುನಾವಣೆಯಲ್ಲಿ ಮತಗಳಾಗಿ ಬದಲಾಗಬೇಕಾದರೆ, ಘೋಷಿಸಿದ ಯೋಜನೆಗಳು ನಿಗದಿತ ಸಮಯದೊಳಗೆ ಕಾರ್ಯರೂಪಕ್ಕೆ ಬರಬೇಕಾದುದು ಅತ್ಯಗತ್ಯ. ಅದರೊಂದಿಗೆ ಕರಾವಳಿಯಲ್ಲಿ ಮತದಾನದ ಶೈಲಿ ಹೆಚ್ಚಾಗಿ ಸಿದ್ಧಾಂತ ಆಧಾರಿತವಾಗಿರುತ್ತದೆ. ಕೇವಲ ಹಣಕಾಸು ಅನುದಾನಗಳಿಂದ ತಕ್ಷಣಕ್ಕೆ ಮತದಾರರ ಮನಸ್ಸು ಬದಲಾಯಿಸುವುದು ಸವಾಲಿನ ಕೆಲಸ.

ಪತ್ರಕರ್ತೆ, 2019ರಿಂದ ಪತ್ರಿಕೋದ್ಯಮವೇ ಬದುಕು. ರಾಜಕೀಯ, ಬ್ಯುಜಿನೆಸ್ ಸುದ್ದಿಗಳಲ್ಲಿ ಆಸಕ್ತಿ.




