ಚಿಂತಾಮಣಿಯಲ್ಲಿ ನಗರದ ವಾರ್ಡ್ ನಂಬರ್ 25ರ ಊರು ಮುಂದೆ ಬೃಹತ್ ಮರದ ಕೊಂಬೆ ಮುರಿದು ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ರಸ್ತೆಗೆ ವಾಲಿದ್ದು,ಕೂದಲೆಳೆಯ ಅಂತರದಲ್ಲಿ ಭಾರಿ ದುರಂತವೊಂದು ತಪ್ಪಿದೆ.
ಚಿಂತಾಮಣಿಯ ವಾರ್ಡ್ ನಂಬರ್ 25ರ ಎನ್. ಎನ್.ಟಿ. ರಸ್ತೆಯ ಊರು ಮುಂದೆ ವ್ಯಾಪ್ತಿಯಲ್ಲಿ ತಡರಾತ್ರಿ ಸುಮಾರು 12 ರಿಂದ 1 ಗಂಟೆಯ ಸುಮಾರಿಗೆ ಭಾರಿ ಗಾಳಿ ಮಳೆಗೆ ಸುಮಾರು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ್ದ ರಸ್ತೆ ಬದಿಯಲ್ಲಿದ್ದ ಬೃಹತ್ ಅಲದ ಮರದ ಕೊಂಬೆಗಳು ಮುರಿದು ಬಿದ್ದ ಪರಿಣಾಮ, ವಿದ್ಯುತ್ ತಂತಿಗಳ ಮೇಲೆ ಭಾರಿ ಒತ್ತಡ ಬಿದ್ದು ಸಿಮೆಂಟ್ ಕಂಬಗಳು ಮುರಿದು ರಸ್ತೆಗೆ ಅಡ್ಡಲಾಗಿ ವಾಲಿಕೊಂಡಿವೆ.
ರೆಂಬೆಗಳು ವಿದ್ಯುತ್ ಕಂಬದ ತಂತಿಗಳ ಮೇಲೆ ಬಿದ್ದು ಪರಿಣಾಮ ಸುಮಾರು ನಾಲ್ಕರಿಂದ ಐದು ವಿದ್ಯುತ್ ಕಂಬಗಳು ಮುರಿದು ಹೋಗಿದೆ. ರಸ್ತೆಯುದ್ದಕ್ಕೂ ಅಪಾಯಕಾರಿ ಸ್ಥಿತಿಯಲ್ಲಿ ತೂಗಾಡುತ್ತಿರುವ ವಿದ್ಯುತ್ ತಂತಿಗಳಿಂದಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ಜೀವಭಯದಲ್ಲೇ ಸಂಚರಿಸುವಂತಾಗಿದೆ.
ಕಂಬಗಳು ಮುರಿದು ಬೀಳುವ ಸಂದರ್ಭದಲ್ಲಿ ಅದೃಷ್ಟವಶಾತ್ ಸ್ಥಳದಲ್ಲಿ ಸಾರ್ವಜನಿಕರಾಗಲಿ,ವಾಹನ ಸಂಚಾರವಾಗಲಿ ಇಲ್ಲದ ಕಾರಣ ಪ್ರಾಣಾಪಾಯ ತಪ್ಪಿದೆ. ಆದರೆ ರಸ್ತೆಯಲ್ಲಿ ವಾಲಿಕೊಂಡಿರುವ ಕಂಬದ ಕೆಳಗೆಯೇ ದ್ವಿಚಕ್ರ ವಾಹನಗಳು ಸಂಚರಿಸುತ್ತಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಕಂಬಗಳು ಧರೆಗುರುಳಿದ ಹಿನ್ನೆಲೆಯಲ್ಲಿ ಬಡಾವಣೆಯಲ್ಲಿ ವಿದ್ಯುತ್ ಕಡಿತಗೊಂಡಿದ್ದು, ಸುತ್ತಮುತ್ತಲಿನ ಮನೆಗಳಿಗೆ ಹಾಗೂ ಅಂಗಡಿ ಮುಂಗಟ್ಟುಗಳಿಗೆ ತೊಂದರೆಯುಂಟಾಗಿದೆ.
ಯಾವುದೇ ಅಹಿತಕರ ಘಟನೆ ಸಂಭವಿಸುವ ಮುನ್ನವೇ ಬೆಸ್ಕಾಂಸಿಬ್ಬಂದಿ ಹಾಗೂ ನಗರಸಭೆ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಆಗಮಿಸಿ, ಬಿದ್ದಿರುವ ಮರದ ಕೊಂಬೆಗಳನ್ನು ತೆರವುಗೊಳಿಸಿ, ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ಸಂಪರ್ಕ ಮರುಸ್ಥಾಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಈ ವೇಳೆ ಸ್ಥಳೀಯ ನಿವಾಸಿ ಕುಂಟಿಗಡ್ಡೆ ಲಕ್ಷ್ಮಣ್ ಮತ್ತು ದಾದು ಮಾತನಾಡಿ ಊರು ಮುಂದೆ ವ್ಯಾಪ್ತಿಯಲ್ಲಿ ತಡರಾತ್ರಿ ಸುಮಾರು 12 ರಿಂದ 1 ಗಂಟೆಯ ಸುಮಾರಿಗೆ ಭಾರಿ ಗಾಳಿ ಮಳೆಗೆ ಸುಮಾರು ನೂರು ವರ್ಷಗಳಿಗೂ ಅಧಿಕ ಇತಿಹಾಸ ಹೊಂದಿದ್ದ ಆಲದ ಮರ ಸೇರಿದಂತೆ ಮರಗಳು ಧರೆಗುರುಳಿವೆ.
ಮರ ಬಿದ್ದ ರಭಸಕ್ಕೆ ಸುಮಾರು 4 ರಿಂದ 5 ವಿದ್ಯುತ್ ಕಂಬಗಳು ಧರೆಗುರುಳಿ ಮುರಿದು ಬಿದ್ದಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಹಾಗೂ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ. ಈ ಜಾಗದಲ್ಲಿ ಇನ್ನೂ ಅಪಾಯಕಾರಿ ಸ್ಥಿತಿಯಲ್ಲಿರುವ ಮರಗಳಿದ್ದು, ಅವುಗಳಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ಕ್ಷಣದಲ್ಲಾದರೂ ಅಪಾಯ ಸಂಭವಿಸುವ ಆತಂಕ ಎದುರಾಗಿದೆ.
ಇದನ್ನು ಓದಿದ್ದೀರಾ..?ಕೋಲಾರ | ಜನಪ್ರತಿನಿಧಿಗಳನ್ನು ಕಡೆಗಣಿಸಿ ಕಾಮಗಾರಿ ನಡೆಸಿದರೆ ಸಹಿಸುವುದಿಲ್ಲ: ಶಾಸಕ ಡಾ.ಕೊತ್ತೂರು ಜಿ ಮಂಜುನಾಥ್ ಗರಂ
ಈ ಕುರಿತು ಈ ಹಿಂದೆಯೇ ಬೆಸ್ಕಾಂ ಹಾಗೂ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ಲಿಖಿತವಾಗಿ ಹಾಗೂ ಮೌಖಿಕವಾಗಿ ಮನವಿ ಸಲ್ಲಿಸಲಾಗಿತ್ತು. ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಮರಗಳನ್ನು ತೆರವುಗೊಳಿಸುವುದಾಗಿ ಭರವಸೆ ನೀಡಿದ್ದ ಅಧಿಕಾರಿಗಳು, ಯಾವುದೇ ರೀತಿಯ ಅಪಾಯದ ಮುನ್ಸೂಚನೆ ಇದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




