ಮಂಡ್ಯ ಜಿಲ್ಲೆ ಮಳವಳ್ಳಿ ಬಸ್ ನಿಲ್ದಾಣದ ಬಳಿ ನಡೆದ ಎಸ್ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ವಿರೋಧಿ ಕರ್ನಾಟಕ ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರ ಚಿಂತಕರು ಬೆಂಬಲ ವ್ಯಕ್ತಪಡಿಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಕ್ತಾರರು, ಚುನಾವಣೆ ಪ್ರಜಾಪ್ರಭುತ್ವದ ಅತ್ಯಂತ ಪವಿತ್ರ ಪ್ರಕ್ರಿಯೆಯಾಗಿದ್ದು, ಚುನಾವಣಾ ಆಯೋಗ, ಮತದಾನದ ವಿಧಾನ ಹಾಗೂ ಮತದಾರರ ಪಟ್ಟಿ ಅದರ ಮೂರು ಪ್ರಮುಖ ಸ್ತಂಭಗಳಾಗಿವೆ ಎಂದು ತಿಳಿಸಿದರು. ಈ ಮೂಲಾಧಾರಗಳ ಮೇಲೆಯೇ ದಾಳಿ ನಡೆಯುತ್ತಿರುವುದು ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚುನಾವಣಾ ಆಯೋಗದ ನೇಮಕಾತಿ ಪ್ರಕ್ರಿಯೆಯಲ್ಲಿ ಹಿಂದೆ ಭಾರತದ ಮುಖ್ಯ ನ್ಯಾಯಮೂರ್ತಿ, ಪ್ರಧಾನಿ ಹಾಗೂ ವಿರೋಧ ಪಕ್ಷದ ನಾಯಕರು ಸದಸ್ಯರಾಗಿದ್ದ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಟ್ಟು, ಪ್ರಧಾನಿಯವರೇ ಸೂಚಿಸುವ ಸಚಿವರನ್ನು ಸೇರಿಸಿರುವುದು ಚುನಾವಣಾ ವ್ಯವಸ್ಥೆಯ ಸ್ವಾಯತ್ತತೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿದರು. ಇದೇ ಹಿನ್ನೆಲೆಯಲ್ಲೇ ಎಸ್ಐಆರ್ ಪ್ರಕ್ರಿಯೆ ಮೂಲಕ ಮತದಾರರ ಹಕ್ಕುಗಳನ್ನು ಕಸಿಯುವ ಪ್ರಯತ್ನಗಳು ನಡೆಯುತ್ತಿದ್ದು, ಅದರ ಅನ್ಯಾಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ?ಮೈಸೂರು | ಪುಟ್ಟ ವಯಸ್ಸಿನಲ್ಲೇ ಅಪೂರ್ವ ಸಾಧನೆ: ಪ್ರಾಂಜಲಿ ರಾಜ್ಗೆ ಏಷ್ಯಾ ಗ್ರ್ಯಾಂಡ್ಮಾಸ್ಟರ್ 2026 ಪ್ರಶಸ್ತಿ
ಜಾಥಾದಲ್ಲಿ ಪ್ರಗತಿಪರ ಚಿಂತಕರಾದ ಎಂ.ವಿ. ಕೃಷ್ಣ, ಡಾ. ಮ.ಪು. ಪೂರ್ಣಾನಂದ, ನಂದಕುಮಾರ್ ಶೃಂಗೇರಿ-ಕೊಪ್ಪ, ಸಾಮಾಜಿಕ ಹೋರಾಟಗಾರ್ತಿ ಕಿರಣ್ ಪಿ.ಆರ್., ಶಿವಕುಮಾರ್, ಲಿಂಗರಾಜು, ನಸ್ರೀನ್ ಮಿಠಾಯಿ, ಮಹಿಳಾ ಮುನ್ನಡೆಯ ಶಿಲ್ಪಾ, ಕರ್ನಾಟಕ ಜನಶಕ್ತಿ ಜಿಲ್ಲಾ ಕಾರ್ಯದರ್ಶಿ ಸಿದ್ದರಾಜು ಸೇರಿದಂತೆ ಹಲವರು ಇದ್ದರು.





