ವಿದ್ಯುತ್ ದರ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಈ ವೇಳೆ ಕಾರ್ಯಕರ್ತರೊಬ್ಬರು ಕೈಗಳಿಗೆ ಬೇಡಿ ಹಾಕಿಕೊಂಡು ಭಾಗವಹಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನದ ಎದುರು ನಗರ ಬಿಜೆಪಿ ಘಟಕದ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಜನತೆಗೆ ಸುಳ್ಳು ಗ್ಯಾರಂಟಿ ಭರವಸೆ ನೀಡಿ, ಇದೀಗ ವಿದ್ಯುತ್ ದರ ಏರಿಕೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಜನರಿಗೆ ಐದು ಗ್ಯಾರಂಟಿಗಳನ್ನು ನೀಡಿ, ಷರತ್ತು ವಿಧಿಸಿ ಮೋಸ ಮಾಡುತ್ತಿದೆ ಎಂದು ಆರೋಪಿಸಿ ಸರ್ಕಾರದ ಘೋಷಣೆ ಕೂಗಿದರು. ತಕ್ಷಣವೇ ವಿದ್ಯುತ್ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಎರಡೂ ಕೈಗಳಿಗೆ ಬೇಡಿ ಹಾಕಿಕೊಂಡು ಬಂದಿದ್ದ ಬಿಜೆಪಿ ಕಾರ್ಯಕರ್ತ ಉಮೇಶ ಕಾರಜೋಳ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, “ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ‘ಉಚಿತ, ಖಚಿತ, ನಿಶ್ಚಿತ’ ಎಂದು ಭಾಷಣ ಮಾಡಿದ್ದರು. ಹಾಗಂದರೆ ಏನು ಎಂದು ಜನ ಅರ್ಥಮಾಡಿಕೊಂಡಿರಲಿಲ್ಲ ಅನಿಸುತ್ತದೆ. ಉಚಿತ ಅಂದರೆ; ನಿಮ್ಮ ಹಣೆ ಮೇಲೆ ಮೂರು ನಾಮ. ಖಚಿತ ಎಂದರೆ ನಿಮ್ಮ ಮೇಲೆ ಸಾಲ. ಹಿಂದು ಪರ ಯಾರೇ ಮಾತನಾಡಿದರೂ ಅವರಿಗೆ ಜೈಲು ವಾಸ ನಿಶ್ಚಿತ ಎಂದು ಅರ್ಥ. ಇದು ಈಗ ಜನರಿಗೆ ಅರ್ಥವಾಗಲು ಶುರುವಾಗಿದೆ. ಅದಕ್ಕೆ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಹಾಸನ | ಸರ್ಕಾರಿ ಶಾಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಲು ಆಗ್ರಹ