ಶುದ್ಧ ಮತ್ತು ಸಮರ್ಪಕ ನೀರು ಪೂರೈಕೆಗೆ ಆಗ್ರಹಿಸಿ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರಿನ ನಿವಾಸಿಗಳು ಪಟ್ಟಣ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದರು.
ಮೊಳಕಾಲ್ಮುರು ಪಟ್ಟಣದಲ್ಲಿ 15,000 ಜನಸಂಖ್ಯೆ ಇದ್ದು, ಹಲವು ವರ್ಷಗಳಿಂದ ಜನರು ನೀರಿನ ಅಭಾವ ಮತ್ತು ಸಮಸ್ಯೆ ಎದುರಿಸುತ್ತಾ ಬಂದಿದ್ದಾರೆ. 8-10 ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುತ್ತಿದ್ದು, ಜನರು ಪರದಾಡುವಂತಾಗಿದೆ. ಪೂರೈಕೆಯಾಗುವ ನೀರು ಕೂಡ ಅಶುದ್ಧವಾಗಿದೆ ಎಂದು ಆರೋಪಿಸಿದರು.
ರಂಗಯ್ಯನ ದುರ್ಗಾ ಜಲಾಶಯದಿಂದ ಬರುವ ನೀರನ್ನು ಶುದ್ಧೀಕರಣ ಮಾಡದ ಕಾರಣ ಅಶುದ್ಧ ನೀರು ನಾಗರಿಕರಿಗೆ ಪೂರೈಕೆಯಾಗುತ್ತದೆ. ಈ ನೀರಿನಲ್ಲಿ ಸ್ನಾನ ಮಾಡಿದರೆ ತುರಿಕೆ ಮತ್ತು ಚರ್ಮರೋಗಗಳು ಬರುತ್ತದೆ ಎಂದು ದೂರಿದರು.
ಅಶುದ್ಧ ನೀರನ್ನು ಸಂಗ್ರಹಿಸಿ ತೋರಿಸಿ ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಸಮರ್ಪಕ ನೀರು ಪೂರೈಕೆಗೆ ಮನವಿ ಸಲ್ಲಿಸಿದರು.
ಸಂಬಂಧಪಟ್ಟ ಅಧಿಕಾರಿಗಳು ಮತ್ತು ಶಾಸಕರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಸಮರ್ಪಕವಾಗಿ ನೀರನ್ನು ಎರಡು ದಿನಗಳಿಗೊಮ್ಮೆ ಪೂರೈಸಬೇಕು ಎಂದು ಆಗ್ರಹಿಸಿದ ಅವರು, ಕೂಡಲೇ ಅಧಿಕಾರಿಗಳು ಮತ್ತು ಆಡಳಿತವರ್ಗ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಸಂಸದ ಬ್ರಿಜ್ ಭೂಷಣ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಪಾದಯಾತ್ರೆ
ಪ್ರತಿಭಟನೆಯಲ್ಲಿ ಮೊಳಕಾಲ್ಮೂರು ನಿವಾಸಿಗಳಾದ ರಾಘವೇಂದ್ರ, ಸಂತೋಷ್, ಏಕಬೋಟೆ ರಾಜು, ಮಂಜುನಾಥ್, ನರೇಶ್, ರಾಮಕೃಷ್ಣ, ರೇಖಾ, ಎರಿಸ್ವಾಮಿ ಸುಮಿತ್ರ, ನೀಲಾ, ವೀರಮ್ಮ ಹಾಗೂ ಇತರು ಭಾಗವಹಿಸಿದ್ದರು.
ನಂತರ ಪ್ರತಿಭಟನಾಕಾರರು ಹಾನಗಲ್ ರಸ್ತೆಯ ರಂಗಯನದುರ್ಗ ಜಲಾಶಯದ ನೀರಿನ ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿದರು.