ಮಾವಿನ ತೋಟದ ಮೇಲೆ ಕಾಡಾನೆ ದಾಳಿ ನಡೆಸಿದ್ದು, ತೋಟವನ್ನು ಕಾವಲು ಕಾಯುತ್ತಿದ್ದ ಕಾವಲುಗಾರರನ್ನು ಕೊಂದಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
ಮೃತನನ್ನು ಕನಕಪುರದ ವೀರಭದ್ರ (40) ಎಂದು ಗುರುತಿಸಲಾಗಿದೆ. ವಿರೋಪಸಂದ್ರದ ಲೋಕೇಶ್ ಎಂಬವರ ಮಾವಿನ ತೋಟದಲ್ಲಿ ವೀರಭದ್ರ ಅವರು ಕಳೆದ ಮೂರ್ನಾಲ್ಕು ತಿಂಗಳಿಂದ ಕಾವಲು ಕಾಯುವ ಕೆಲಸ ಮಾಡುತ್ತಿದ್ದರು. ಇಂದು ಬೆಳಗ್ಗೆ ಕಾಡಾನೆ ದಾಳಿ ಮಾಡಿದ್ದು, ವೀರಭದ್ರ ಅವರನ್ನು ತುಳಿದು ಕೊಂದಿದೆ.
ವೀರಭದ್ರ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಸಂತಾಪ ಸೂಚಿಸಿದ್ದಾರೆ. ವೀರಭದ್ರ ಕುಟುಂಬಕ್ಕೆ ನಿಯಮಾನುಸಾರ 15 ಲಕ್ಷ ರೂ. ಪರಿಹಾರವನ್ನು ಒದಗಿಸಲಾಗುವುದು ಎಂದು ಹೇಳಿದ್ದಾರೆ.
“ಎಲ್ಲಿ ಹೆಚ್ಚಿನ ಆನೆಗಳ ದಾಳಿ ಪ್ರದೇಶವಿದೆಯೋ ಅಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಿ ಇಂತಹ ಅನಾಹುತಗಳನ್ನು ತಪ್ಪಿಸಬೇಕು. ಅದಕ್ಕಾಗಿ, ಮುಂದಿನ ಬಜೆಟ್ನಲ್ಲಿ ಹೆಚ್ಚು ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.