ತೀರ್ಥಹಳ್ಳಿ ತಾಲೂಕಿನ ಹೊನ್ನೆತಾಳು ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಬಳ ಸೇತುವೆಯ ಮೇಲೆ ನೀರು ರಭಸದಿಂದ ಹರಿದು ಬಂದ ಪರಿಣಾಮ ಒಂದೇ ಕುಟುಂಬದ ಏಳು ಜನರಿದ್ದ ಕಾರು ನೀರಿನಲ್ಲಿ ಸಿಲುಕಿಕೊಂಡಿದೆ, ಅಪಾಯದ ಮುನ್ಸೂಚನೆಯರಿತ ಸ್ಥಳೀಯರು ಕೂಡಲೇ ಪ್ರಯಾಣಿಕರ ನೆರವಿಗೆ ಧಾವಿಸಿದ್ದಾರೆ.
ಹೊನ್ನಾವರ ಮೂಲದ ಕುಟುಂಬ, ಶೃಂಗೇರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಘಟನೆ ಸಂಭವಿಸಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದ ತೀರ್ಥಹಳ್ಳಿ ಪ್ರದೇಶದ ನದಿ, ಹಳ್ಳ-ಕೊಳ್ಳಗಳು ತುಂಬಿಕೊಂಡಿವೆ. ನಾಬಳ ಗ್ರಾಮದ ಮುಖೇನ ಹರಿಯುವ ಮಾಲತಿ ನದಿ ಧುಮ್ಮಿಕ್ಕಿ ಹರಿಯುತ್ತಿದ್ದು, ನದಿಗೆ ಅಡ್ಡಲಾಗಿ ನಿರ್ಮಿಸಿದ ಸೇತುವೆ ಸಂಪೂರ್ಣವಾಗಿ ಜಲಾವೃತವಾಗಿದೆ.
ಸೇತುವೆಯ ಮೇಲೆ ನೀರು ರಭಸದಿಂದ ಹರಿಯುತ್ತಿದ್ದರಿಂದ ಕಾರು ನಡುನೀರಿನಲ್ಲಿ ಸಿಲುಕಿಕೊಂಡಿತು. ಅಪಾಯ ಮನಗಂಡ ಪ್ರಯಾಣಿಕರು ಕಾರಿನ ಮೇಲೇರಿ ಕುಳಿತು ರಕ್ಷಣೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ಸ್ಥಳೀಯರ ಗಮನಕ್ಕೆ ಬಂದ ನಂತರ ರಕ್ಷಣಾ ಕಾರ್ಯ ನಡೆದಿದೆ.
ಸದ್ಯ ನಾಬಳ ಸೇತುವೆ ಮೇಲೆ 4 ಅಡಿ ನೀರು ಹರಿಯುತ್ತಿದೆ. ಭಾರಿ ಮಳೆಯಿಂದ ತೀರ್ಥಹಳ್ಳಿ ತಾಲೂಕಿನ ಹಲವೆಡೆ ಸಣ್ಣಪುಟ್ಟ ಅನಾಹುತಗಳು ಸಂಭವಿಸಿವೆ. ದನಗಳ ಕೊಟ್ಟಿಗೆಗಳು ಮುರಿದು ಬಿದ್ದರೆ, ಕೆಲವೆಡೆ ಭಾಗಶಃ ಮನೆಗಳು ಕುಸಿದು ಬಿದ್ದಿವೆ. ಸದ್ಯಕ್ಕೆ ಯಾವುದೇ ಪ್ರಾಣ ಹಾನಿಯಾದ ವರದಿ ಆಗಿಲ್ಲ.
ಮಳೆ ಮುಂದುವರಿದಿದ್ದು, ತೀರ್ಥಹಳ್ಳಿ ತಾಲೂಕಿನ ಹಲವು ಪ್ರದೇಶಗಳಲ್ಲಿ ನದಿ-ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಜಾಗರೂಕರಾಗಿ ಇರುವಂತೆ ಸ್ಥಳೀಯ ಆಡಳಿತ ಸೂಚಿಸಿದೆ.





