ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಬಳಿಕ ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಕೈಗೊಂಡಿರುವ ಕ್ರಮಗಳು ಹಾಗೂ ಅದೇ ವೇಳೆ ಪ್ರತಿಭಟನೆಯಲ್ಲಿ ಅತಿಯಾದ ಬಲಪ್ರಯೋಗ ನಡೆಸಿದ ತಮ್ಮದೇ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳದೆ ನಡೆದುಕೊಳ್ಳುತ್ತಿರುವ ರೀತಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಒಂದು ಕಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಮುಖ ಗುರುತಿಸುವ ತಂತ್ರಜ್ಞಾನ ಸೇರಿದಂತೆ ವಿವಿಧ ನಿಗಾ ವ್ಯವಸ್ಥೆಗಳ ಮೂಲಕ ಪತ್ತೆಹಚ್ಚಿ ಪ್ರಕರಣ ದಾಖಲಿಸಲು ಪ್ರತಿಭಟನಾಕಾರರ ಬೆನ್ನು ಬಿದ್ದಿದ್ದಾರೆ. ಆದರೆ ಮತ್ತೊಂದೆಡೆ ಮಹಿಳಾ ವಿದ್ಯಾರ್ಥಿನಿಯರು ಸೇರಿದಂತೆ ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಇದುವರೆಗೆ ಯಾವುದೇ ಕ್ರಮವಾಗಿಲ್ಲ.
ಪ್ರತಿಭಟನೆಯ ವೇಳೆ ಮಹಿಳಾ ವಿದ್ಯಾರ್ಥಿನಿಯರಿಗೆ ಕಪಾಳಮೋಕ್ಷ ಮಾಡುವುದು, ಯುವತಿಯೊಬ್ಬಳ ಖಾಸಗಿ ಅಂಗದತ್ತ ಲಾಠಿ ಬೀಸಲು ಯತ್ನಿಸುವುದು, ನಿರಾಯುಧ ಪ್ರತಿಭಟನಾಕಾರರ ಮೇಲೆ ಅತಿಯಾದ ಬಲಪ್ರಯೋಗ ನಡೆಸುವುದು ಸೇರಿದಂತೆ ಹಲವು ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ದೇಶವೇ ಆ ದೃಶ್ಯಗಳನ್ನು ನೋಡಿದೆ. ಆದರೆ ಆ ವಿಡಿಯೊಗಳಲ್ಲಿ ಕಾಣಿಸಿಕೊಂಡ ಪೊಲೀಸ್ ಸಿಬ್ಬಂದಿಯನ್ನು ಗುರುತಿಸಿ ಅವರ ವಿರುದ್ಧ ಇಲಾಖೆ ಯಾವುದೇ ಕಠಿಣ ಕ್ರಮ ಕೈಗೊಂಡಿರುವ ಮಾಹಿತಿಯೇ ಇಲ್ಲ. ಮತ್ತೊಂದೆಡೆ, ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳನ್ನು ಪತ್ತೆಹಚ್ಚಲು ಮುಖ ಗುರುತಿಸುವ ತಂತ್ರಜ್ಞಾನ, ಸಿಸಿಟಿವಿ ದೃಶ್ಯಗಳು ಮತ್ತು ಇತರ ನಿಗಾ ವ್ಯವಸ್ಥೆಗಳನ್ನು ಬಳಸುವ ಅಮಾನವೀಯ ಕ್ರಮ ಮುಂದುವರೆದಿದೆ.
ದೆಹಲಿ ಪೊಲೀಸರು ಪ್ರತಿಭಟನೆಯಲ್ಲಿ ದುಷ್ಕರ್ಮಿಗಳು ನುಸುಳಿದ್ದರು ಎಂದು ಹೇಳುತ್ತಿದ್ದಾರೆ. ಹಿಂಸಾಚಾರದಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ಪೊಲೀಸರ ಕರ್ತವ್ಯವೇ ಸರಿ. ಆದರೆ ಅದೇ ಕಾನೂನು ಸಮವಸ್ತ್ರ ಧರಿಸಿದ ಪೊಲೀಸರಿಗೂ ಅನ್ವಯಿಸಬೇಕಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಸಾರ್ವಜನಿಕವಾಗಿ ಲಭ್ಯವಿರುವ ವಿಡಿಯೊಗಳಿದ್ದರೂ, ತಮ್ಮದೇ ಸಿಬ್ಬಂದಿಯನ್ನು ಗುರುತಿಸಲು ವಿಫಲವಾಗಿರುವಂತೆ ಕಾಣುತ್ತಿರುವುದು ಪೊಲೀಸ್ ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ.
ಇದರ ನಡುವೆಯೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು, ಅವರ ಕುಟುಂಬದವರು, ಸರ್ಕಾರವನ್ನು ಟೀಕಿಸಿದ ಸಾಮಾಜಿಕ ಜಾಲತಾಣ ಬಳಕೆದಾರರ ವಿರುದ್ಧವೂ ಪ್ರಕರಣಗಳು ದಾಖಲಾಗುತ್ತಿರುವ ವರದಿಗಳಿವೆ. ಆದರೆ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದವರು ಅಥವಾ ದ್ವೇಷಪೂರಿತ ಪೋಸ್ಟ್ಗಳನ್ನು ಹಾಕಿದವರ ವಿರುದ್ಧ ಅಷ್ಟೇ ಚುರುಕಿನ ಕ್ರಮ ಗೋಚರಿಸುತ್ತಿಲ್ಲ ಎಂಬ ಆರೋಪಗಳೂ ಕೇಳಿಬರುತ್ತಿವೆ. ಇದರಿಂದ ಕಾನೂನು ಎಲ್ಲರಿಗೂ ಸಮಾನವೇ, ಅಥವಾ ಆಯ್ದವರ ವಿರುದ್ಧ ಮಾತ್ರ ಜಾರಿಯಾಗುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಒಪ್ಪಿಕೊಂಡ ನಂತರ ಪ್ರತಿಭಟನೆ ಹಿಂಪಡೆಯಲಾಗಿತ್ತು. ಅಂತಹ ಸಂದರ್ಭದಲ್ಲಿ ಮತ್ತೆ ಅವರ ವಿರುದ್ಧ ಪ್ರಕರಣಗಳು, ವಿಚಾರಣೆಗಳು ಮತ್ತು ಬೆನ್ನಟ್ಟುವ ಕ್ರಮಗಳು ಮುಂದುವರಿದಿವೆ.
ಇದನ್ನೂ ಓದಿ: ‘ರೀಲ್ಸ್ನಲ್ಲಿ ಅಷ್ಟೇ ಕ್ಷಮಿಸುವುದೋ, ಎಫ್ಐಆರ್ ವಾಪಸ್ ಪಡೆಯುತ್ತೀರೋ’: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ
ಈ ನಡುವೆ, ಜುಲೈ 20ರಂದು ಜಂತರ್ ಮಂತರ್ನಿಂದ ಸಂಸತ್ ಚಲೋ ಪ್ರತಿಭಟನೆಯ ವೇಳೆ ಗಾಯಗೊಂಡ ದೆಹಲಿ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರು ಕೂಡ ಸಂಸತ್ತಿನಲ್ಲಿ ತಮ್ಮ ನೋವಿನ ಬಗ್ಗೆ ಚರ್ಚೆಯಾಗಬೇಕು ಎಂದು ಆಗ್ರಹಿಸಿದ್ದಾರೆ. ಕರ್ತವ್ಯ ನಿರ್ವಹಿಸುವ ವೇಳೆ ಗಾಯಗೊಂಡ ಪೊಲೀಸರ ನೋವು, ಅವರ ಕುಟುಂಬಗಳ ಆತಂಕ ಮುಖ್ಯ. ಅವರ ಧ್ವನಿಗೂ ನ್ಯಾಯ ದೊರೆಯಬೇಕು ಎಂಬ ಬೇಡಿಕೆ ಸಹಜ ಮತ್ತು ನ್ಯಾಯಸಮ್ಮತವೇ. ಆದರೆ ಪ್ರಶ್ನೆ ಇರುವುದು ಅಲ್ಲಲ್ಲ. ಪೊಲೀಸರ ಮೇಲಿನ ಹಲ್ಲೆ ಖಂಡನೀಯವಾಗಿದ್ದರೆ, ಪ್ರತಿಭಟನೆಯ ವೇಳೆ ವಿದ್ಯಾರ್ಥಿಗಳು, ವಿಶೇಷವಾಗಿ ಮಹಿಳಾ ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಪೊಲೀಸರ ವರ್ತನೆಯೂ ಅಷ್ಟೇ ಖಂಡನೀಯ. ವಿದ್ಯಾರ್ಥಿನಿಯರಿಗೆ ಕಪಾಳಮೋಕ್ಷ ಮಾಡುವುದು, ಲಾಠಿಯಿಂದ ಹಲ್ಲೆ ನಡೆಸುವುದು, ಅತಿಯಾದ ಬಲಪ್ರಯೋಗ ನಡೆಸಿರುವ ದೃಶ್ಯಗಳು ಕಣ್ಣ ಮುಂದಿದ್ದರೂ, ಆ ಪೊಲೀಸ್ ಸಿಬ್ಬಂದಿಯ ವಿರುದ್ಧ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಹೀಗಾಗಿ, ಗಾಯಗೊಂಡ ಪೊಲೀಸರ ಕುಟುಂಬಗಳು ನ್ಯಾಯ ಕೇಳುತ್ತಿರುವಂತೆ, ಅದೇ ಧ್ವನಿಯಲ್ಲಿ ಕಾನೂನು ಮೀರಿದ ಪೊಲೀಸ್ ಸಿಬ್ಬಂದಿಯ ವಿರುದ್ಧವೂ ನಿಷ್ಪಕ್ಷಪಾತ ತನಿಖೆ ಮತ್ತು ಕ್ರಮಕ್ಕೆ ಆಗ್ರಹಿಸಬೇಕಲ್ಲವೇ ಎಂಬ ಪ್ರಶ್ನೆಯೂ ಸಹಜವಾಗಿಯೇ ಮೂಡುತ್ತದೆ. ಏಕೆಂದರೆ ನ್ಯಾಯ ಎನ್ನುವುದು ಸಮವಸ್ತ್ರ ಧರಿಸಿದವರಿಗೆ ಒಂದು, ವಿದ್ಯಾರ್ಥಿಗಳಿಗೆ ಮತ್ತೊಂದು ಆಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿರಬೇಕು. ಪೊಲೀಸರ ಮೇಲೆ ಹಲ್ಲೆ ನಡೆಸಿದವರನ್ನು ಕಾನೂನು ಶಿಕ್ಷಿಸಬೇಕು; ಅದೇ ರೀತಿ ಕಾನೂನಿನ ಮಿತಿಯನ್ನು ಮೀರಿ ಅಮಾನುಷವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿಯನ್ನೂ ಹೊಣೆಗಾರರನ್ನಾಗಿ ಮಾಡಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.




