ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕದ ವತಿಯಿಂದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮುಹಮ್ಮದ್ (ಸ) ಸೀರತ್ ಅಭಿಯಾನ–2026’ ಅಂಗವಾಗಿ ಸೆ.21ರಂದು ಸಂಜೆ 7 ಗಂಟೆಗೆ ಪಟ್ಟಣದ ವಿಜಯಮಹಾಂತೇಶ ಮಂಗಳ ಭವನದಲ್ಲಿ ಬೃಹತ್ ‘ಸೀರತ್ ಸಮಾರಂಭ’ ಆಯೋಜಿಸಲಾಗಿದೆ.
ಸೌಹಾರ್ದತೆ ಹಾಗೂ ಮಾನವೀಯ ಮೌಲ್ಯಗಳ ಸಂದೇಶ ಸಾರುವ ಉದ್ದೇಶ ಹೊಂದಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ವಿಜಯಪುರ ಜಿಲ್ಲಾ ಸಂಚಾಲಕ ಪ್ರೊ. ಅಬ್ದುಲ್ ರಹಿಮಾನ್ ನಾಸಿರ್ ವಹಿಸಲಿದ್ದಾರೆ. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಉಡುಪಿ ಅವರು ‘ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಹಾಗೂ ಮೌಲ್ಯಗಳು’ ವಿಷಯ ಕುರಿತು ಮುಖ್ಯ ಉಪನ್ಯಾಸ ನೀಡಲಿದ್ದಾರೆ.
ತಾಳಿಕೋಟಿಯ ವಿರಕ್ತಮಠದ ಪೂಜ್ಯ ಸಿದ್ಧಲಿಂಗ ದೇವರು ಸಾನ್ನಿಧ್ಯ ವಹಿಸಲಿದ್ದು, ಮುದ್ದೇಬಿಹಾಳದ ಎಂ.ಜಿ.ವಿ.ಸಿ. ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಆರ್.ಎಚ್. ಸಜ್ಜನ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಬ್ರಹ್ಮಕುಮಾರಿ ಮುದ್ದೇಬಿಹಾಳದ ಬ್ರಹ್ಮಕುಮಾರಿ ರೇಣುಕಾ ಅಕ್ಕನವರು ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಪ್ರವಾದಿ ಮುಹಮ್ಮದ್ (ಸ) ಅವರ ಜೀವನ, ಸಂದೇಶ ಹಾಗೂ ಮಾನವೀಯ ಮೌಲ್ಯಗಳ ಕುರಿತು ವಿಚಾರಗಳನ್ನು ಹಂಚಿಕೊಳ್ಳುವ ಈ ಕಾರ್ಯಕ್ರಮಕ್ಕೆ ಸರ್ವಧರ್ಮೀಯ ಪುರುಷರು ಹಾಗೂ ಮಹಿಳೆಯರಿಗೆ ಆದರದ ಸ್ವಾಗತ ಕೋರಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೌಹಾರ್ದತೆ, ಮಾನವೀಯತೆ ಹಾಗೂ ಪ್ರವಾದಿ ಮುಹಮ್ಮದ್ (ಸ) ಅವರ ಜಾಗತಿಕ ಸಂದೇಶದ ಕುರಿತು ವಿಚಾರಗಳನ್ನು ಆಲಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ಮುದ್ದೇಬಿಹಾಳ ಘಟಕದ ಸಂಚಾಲಕ ನೂರೇನಬಿ ನದಾಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




