ಪತ್ರಕರ್ತನಿಗೆ ಜ್ಞಾನ ಮತ್ತು ಪರಿಜ್ಞಾನ ಇದ್ದಾಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಪ್ರಜಾವಾಣಿಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಚಿನಗುಡಿ ಅಭಿಪ್ರಾಯಪಟ್ಟರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಹಮ್ಮಿಕೊಂಡಿದ್ದ ʼವುಮನ್ ಮೀಡಿಯಾ ಕ್ಲಬ್ʼ ಉದ್ಘಾಟಿಸಿ ಮಾತನಾಡಿದರು.
“ಪತ್ರಿಕೋದ್ಯಮವು ಕೇವಲ ತರಗತಿ ಕೋಣೆಗೆ ಸೀಮಿತವಾಗಿರದೆ, ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನವನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ. ಪತ್ರಿಕೆಗಳನ್ನು ಕೇವಲ ನೋಡದೆ, ಅವುಗಳನ್ನು ನಿಯಮಿತವಾಗಿ ಓದಿದಾಗ ಮಾತ್ರ ಪರಿಪೂರ್ಣ ಜ್ಞಾನವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ಸುಳ್ಳು ಸುದ್ದಿಗಳು ಹೆಚ್ಚಾಗಿ ಹರಡುತ್ತಿದ್ದು, ಅವುಗಳನ್ನು ಸಮಗ್ರವಾಗಿ ಪರಿಶೀಲಿಸಿ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳುವುದು ಪ್ರತಿಯೊಬ್ಬರ ಹೊಣೆಗಾರಿಕೆ” ಎಂದರು.
“ದಿನನಿತ್ಯದ ಕಾರ್ಯಗಳನ್ನು ಅದೇ ದಿನ ಪೂರ್ಣಗೊಳಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಯಾವುದೇ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಲು ಪರಿಣಾಮಕಾರಿಯಾದ ಯೋಜನೆ ಅತ್ಯಂತ ಮುಖ್ಯವಾಗಿದ್ದು, ಅದನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು. ಅಷ್ಟೇ ಅಲ್ಲದೆ ಪತ್ರಕರ್ತರು ತಮ್ಮ ಬರವಣಿಗೆಯಲ್ಲಿ ಪತ್ರಿಕೆಯ ಶೈಲಿಗೆ ತಕ್ಕಂತೆ ಸರಿಯಾದ ಪದಗಳನ್ನು ಬಳಸಬೇಕು” ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ತಹಮೀನಾ ಕೋಲಾರ ಮಾತನಾಡಿ, “ವುಮನ್ ಮೀಡಿಯಾ ಕ್ಲಬ್ನಲ್ಲಿ ವಿದ್ಯಾರ್ಥಿನಿಯರೇ ಕಾರ್ಯನಿರ್ವಹಿಸುತ್ತಾರೆ. ಈ ಕ್ಲಬ್ ಮೂಲಕ ವಿದ್ಯಾರ್ಥಿನಿಯರಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ ಮತ್ತು ಹೆಚ್ಚಿನ ಜ್ಞಾನವನ್ನು ಪಡೆಯಲು ಸಹಾಯಕವಾಗುತ್ತದೆ” ಎಂದು ತಿಳಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಂದೀಪ್ ಮಾತನಾಡಿ, “ಪತ್ರಿಕೋದ್ಯಮದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳುವುದರ ಜತೆಗೆ ನಿರ್ವಹಣಾ ಕೌಶಲ್ಯಗಳೂ ಅತ್ಯಂತ ಅಗತ್ಯ. ಪತ್ರಿಕೋದ್ಯಮವು ಒಬ್ಬ ವ್ಯಕ್ತಿಯ ಕೆಲಸವಲ್ಲ, ಅದು ತಂಡದ ಕಾರ್ಯವಾಗಿದೆ. ನಿರ್ವಹಣಾ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಓಂಕಾರ ಕಾಕಡೆ ಮಾತನಾಡಿ, “ಜ್ಞಾನ ಮತ್ತು ಪರಿಜ್ಞಾನವನ್ನು ಅಳವಡಿಸಿಕೊಂಡು ಕೆಲಸ ಮಾಡಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಪತ್ರಕರ್ತರು ʼಎಲ್ಲರೊಳಗೊಂದು ನಾವಲ್ಲʼ ಎಂಬ ಮನೋಭಾವವನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಅಸಾಮಾನ್ಯರಾಗಿ ಬೆಳೆಯಲು ಸಾಧ್ಯವಿದೆ. ಪತ್ರಕರ್ತರು ಪ್ರತಿಯೊಂದು ಸೂಕ್ಷ್ಮ ಸುದ್ದಿಗಳನ್ನು ಗಮನಿಸುವುದರ ಜತೆಗೆ ಅದರ ಪರಿಣಾಮಗಳ ಬಗ್ಗೆ ತಿಳಿದಿರಬೇಕು. ಅಷ್ಟೇ ಅಲ್ಲದೆ ಒಂದು ಸುದ್ದಿಯನ್ನು ಒಂದೇ ದೃಷ್ಟಿಕೋನದಿಂದ ನೋಡುವುದನ್ನು ಬಿಟ್ಟು, ವಿವಿಧ ಆಯಾಮಗಳಿಂದ ವಿಶ್ಲೇಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ದೃಷ್ಟಿಕೋನದಿಂದ ಕೆಲಸ ಮಾಡಿದರೆ ಯಶಸ್ವಿ ಪತ್ರಕರ್ತರಾಗಲು ಸಾಧ್ಯವಿದೆ. ಒಬ್ಬ ಪತ್ರಕರ್ತನ ವರದಿ ಸಮಾಜವನ್ನು ಬದಲಿಸುವ ಶಕ್ತಿಯನ್ನು ಹೊಂದಿದೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಾಗಲಕೋಟೆ | ನವನಗರ ಬೌದ್ಧ ವಿಹಾರಕ್ಕೆ ಸಚಿವರ ಭೇಟಿ: ಅಭಿವೃದ್ಧಿಗೆ ಭರವಸೆ
ಡಿಜಿಟಲ್ ಮೀಡಿಯಾದ ಪತ್ರಕರ್ತ ಪ್ರಹ್ಲಾದ್, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕೋತ್ತರ ವಿದ್ಯಾರ್ಥಿನಿಯರು ಇದ್ದರು.




